ಮಳೆ ಇಲ್ಲದೆ ಒಣಗಿದ ಡ್ಯಾಂಗಳು.. ಕರ್ನಾಟಕದ ಜಲಾಶಯಗಳ ಪರಿಸ್ಥಿತಿ ಏನು?
ಎಲ್ಲಿ ನೋಡಿದರೂ ಬರೀ ಮಳೆಯದ್ದೇ ಮಾತು, ಮಳೆಯದ್ದೇ ಮಾತುಕತೆ. ಯಾಕಂದ್ರೆ, ಇಡೀ ಕರ್ನಾಟಕ ಮಳೆಗಾಗಿ ಕಾದು ಕೂತಿದೆ. ಆದರೂ ಮಳೆರಾಯ ಮಾತ್ರ ಕರುಣೆ ತೋರಿಸಿಲ್ಲ. ಇದೇ ಕಾರಣಕ್ಕೆ ಜನ ಕೂಡ ಬಳಲಿ ಬೆಂಡಾಗಿ ಹೋಗಿದ್ದಾರೆ. ಕರ್ನಾಟಕದ ಬಹುತೇಕ ಜಲಾಶಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಬಹುತೇಕ ಡ್ಯಾಂಗಳು ಬತ್ತಿ ಹೋಗಿವೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು. ಹೀಗಾಗಿಯೇ ಡ್ಯಾಂಗಳ ನೀರಿನ ಮಟ್ಟ ಕುಸಿದು ಬಿದ್ದು ರೈತರು ಆತಂಕದಲ್ಲೇ ದಿನದೂಡುವ ಸ್ಥಿತಿ ಇತ್ತು. ಬೇಸಿಗೆ ಬೇಗೆ ಮಧ್ಯೆ ಇದೀಗ ಮಳೆಯ ಅಬ್ಬರ ಮೆಲ್ಲಗೆ ಶುರುವಾಗಿದೆ. ಹವಾಮಾನ ತಜ್ಞರ ಮುನ್ಸೂಚನೆಯ ಪ್ರಕಾರ ಮಳೆ ಬೀಳುವ ನಿರೀಕ್ಷೆ ಇದೆ. ಈಗ ಅಲ್ಲಲ್ಲಿ ಮೋಡಗಳು ಕವಿದು, ಮಳೆಯ ಸೂಚನೆಯೂ ಶುರುವಾಗಿದೆ. ಹೀಗಾಗಿ ಉತ್ತಮವಾಗಿ ಮಳೆ ಬೀಳುತ್ತಿದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳದ ಕಾರಣ, ಕರ್ನಾಟಕದ ಜಲಾಶಯಗಳ ಪರಿಸ್ಥಿತಿ ಕೈಮೀರಿ ಹೋಗಿದೆ.

ಕರ್ನಾಟಕದ ಡ್ಯಾಂಗಳ ಪರಿಸ್ಥಿತಿ ಹೀಗಿದೆ!
1) KRS ಜಲಾಶಯ: 49.45 ಟಿಎಂಸಿ ಗರಿಷ್ಠ ಸಾಮರ್ಥ್ಯ ಇರುವ ಕೆಆರ್ಎಸ್ ಜಲಾಶಯದಲ್ಲಿ ಈಗ ಕೇವಲ 13.42 ಟಿಎಂಸಿ ನೀರು ಸಂಗ್ರಹ ಆಗಿದೆ ಕಳೆದ ವರ್ಷ ಈ ಸಮಯಕ್ಕೆ ಕೆಆರ್ಎಸ್ ಡ್ಯಾಂನಲ್ಲಿ 20.26 ಟಿಎಂಸಿ ನೀರು ಸಂಗ್ರಹ ಆಗಿತ್ತು.
2) ಕಬಿನಿ ಜಲಾಶಯ: ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಡ್ಯಾಂ ಕೂಡ ಕರ್ನಾಟಕದ ಪ್ರಮುಖ ಜಲಾಶಯಗಳ ಪೈಕಿ ಒಂದಾಗಿದೆ. ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹ ಮಾಡಬಹುದು. ಆದರೆ ಈಗ ಕೇವಲ 09.39 ಟಿಎಂಸಿ ನೀರು ಸಂಗ್ರಹ ಇದೆ.
3) ಹೇಮಾವತಿ ಡ್ಯಾಂ: ಕಾವೇರಿ ನದಿ ಉಪನದಿ ಹೇಮಾವತಿಗೆ ಕಟ್ಟಿದ ಡ್ಯಾಂ, ಹೇಮಾವತಿ ಡ್ಯಾಂ. 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಡ್ಯಾಂನಲ್ಲಿ ಈ ಬಾರಿ ಮಳೆ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಹೇಮಾವತಿ ಜಲಾಶಯ ಬರಿದಾಗುತ್ತಿದೆ. ಈಗ 10.55 ಟಿಎಂಸಿ ಮಾತ್ರ ಬಾಕಿ ಉಳಿದಿದೆ. ಆದರೆ ಕಳೆದ ವರ್ಷ ಇದೇ ವೇಳೆಗೆ 20.04 ಟಿಎಂಸಿ ನೀರು ಹೇಮಾವತಿ ಡ್ಯಾಂನಲ್ಲಿ ಇತ್ತು.
4) ತುಂಗಭದ್ರಾ ಜಲಾಶಯ: ಕನ್ನಡ ನಾಡಿನ ಜೀವನಾಡಿ, ತುಂಗಭದ್ರಾ ಡ್ಯಾಂನಲ್ಲಿ ನೀರೆ ಇಲ್ಲ. ಗರಿಷ್ಠ 105.79 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಕೇವಲ 4.72 ಟಿಎಂಸಿ ನೀರು ಸಂಗ್ರಹ ಆಗಿದೆ. ಹೀಗಿದ್ದಾಗ ಕಳೆದ ವರ್ಷ 07.58 ಟಿಎಂಸಿ ನೀರು ಸಂಗ್ರಹ ಆಗಿತ್ತು. ಈ ವರ್ಷ, ಭಾಗಶಃ ನೀರು ಜಲಾಶಯದ ತಳಕ್ಕೆ ತಲುಪಿದೆ.
5) ಆಲಮಟ್ಟಿ ಡ್ಯಾಂ: ಕರ್ನಾಟಕದ ಅತಿದೊಡ್ಡ ಡ್ಯಾಂಗಳ ಪೈಕಿ ಆಲಮಟ್ಟಿ ಕೂಡ ಒಂದಾಗಿದೆ. ಆದರೆ ಆಲಮಟ್ಟಿ ಕೂಡ ಮಳೆ ಇಲ್ಲದೆ ಬರಿದಾಗಿದ್ದು ಇಲ್ಲಿ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಜಲಾಶಯದ ಒಟ್ಟು ಸಾಮರ್ಥ್ಯ 123 ಟಿಎಂಸಿ ಇದ್ರೂ 38.96 ಟಿಎಂಸಿ ಇದೀಗ ಸಂಗ್ರಹ ಉಳಿದಿದೆ. ಕಳೆದ ವರ್ಷ ಇದೇ ಸಮಯಕ್ಕೆ 31.63 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಇತ್ತು.












Click it and Unblock the Notifications