Rain Alert: ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ!
ರಾಜ್ಯದಲ್ಲಿ ಒಂದೆರಡು ದಿನ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಶುರುವಾಗಿದೆ. ರಾಮನವಮಿ ದಿನ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು ಜನ ಖುಷಿಯಾಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಿಗೆ ಇನ್ನೂ ಮೊದಲ ಮಳೆಯ ದರ್ಶನವಾಗದೇ ಇದ್ದರೂ, ಕೆಲವು ಜಿಲ್ಲೆಯ ಜನರಿಗೆ ಮಾತ್ರ ಸತತವಾಗಿ ಮಳೆ ದರ್ಶನ ನೀಡುತ್ತಲೇ ಇದೆ.
ಬುಧವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು, ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಧಾರವಾಡ ನಗರದಲ್ಲಿ ಸಂಜೆ ವೇಳೆಗೆ ಮಳೆ ಶುರುವಾಗಿದ್ದು, ಹಲವು ಕಡೆ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ. ಬೈಲಹೊಂಗಲದ ಮೇಕಲಮರಡಿಯಲ್ಲಿ ಭಾರಿ ಮಳೆಯಾಗಿದ್ದು, ಸಂಜೆ ವೇಳೆಗೆ 35 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಯುಗಾದಿ ದಿನದಿಂದ ಶುರುವಾದ ಮಳೆ ನಾಲ್ಕೈದು ದಿನ ಅಬ್ಬರಿಸಿತ್ತು. ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ಬೆಳಗಾವಿ, ಬೀದರ್, ವಿಜಯಪುರ, ಕಲಬುರ್ಗಿ, ಬೀದರ್, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಭಾನುವಾರದಿಂದ ಮಳೆ ಬಿಡುವು ಕೊಟ್ಟಿತ್ತು. ಮಳೆ ಮತ್ತೆ ಮಾಯವಾಗುತ್ತಾ ಎನ್ನುವ ಆತಂಕ ಶುರುವಾಗುತ್ತಿದ್ದಂತೆ ಮತ್ತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಭರವಸೆ ಮೂಡಿಸಿದೆ.
ಬೆಳಗಾವಿ ಜಿಲ್ಲೆಯಲ್ಲಿ 56 ಮಿ.ಮೀ ಮಳೆಯಾಗಿದ್ದರೆ, ಧಾರವಾಡದಲ್ಲಿ 39 ಮಿ.ಮೀ ಮಳೆಯಾಗಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 21 ಮಿ.ಮೀ ಮಳೆಯಾಗಿದೆ.
ಏಪ್ರಿಲ್ 21ರವರೆಗೆ ಮಳೆ
ಏಪ್ರಿಲ್ 18 ರಿಂದ 21ರವರೆಗೆ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿಗೆ ಮಳೆ ಮುನ್ಸೂಚನೆ
ಬೆಂಗಳೂರಿನಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆಯಾಗುವ ಮುನ್ಸೂಚನೆ ಕೊಡಲಾಗಿದ್ದು, ಒಂದು ವೇಳೆ ಈ ಎರಡು ದಿನಗಳಲ್ಲಿ ಮಳೆಯಾಗದೇ ಇದ್ದರೆ ಮೇ ತಿಂಗಳವರೆಗೂ ಬೆಂಗಳೂರಿಗರು ಮಳೆಗಾಗಿ ಕಾಯಬೇಕಾಗುತ್ತದೆ ಎಂದು ಹೇಳಿದೆ.












Click it and Unblock the Notifications