KRS Dam: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ; ಕೆಆರ್ಎಸ್ಗೆ ಹರಿದು ಬರುತ್ತಿರೋ ಒಳಹರಿವು ಎಷ್ಟಿದೆ?
ಮಂಡ್ಯ, ಜುಲೈ 18: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮೊದಲು ಭರ್ಜರಿ ಮಳೆಯಾಗುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಕೆಆರ್ಎಸ್ ಜಲಾಶಯದ ಒಳಹರಿವು ಭರ್ಜರಿಯಾಗಿ ಹೆಚ್ಚಾಗಿದೆ.
ಕರ್ನಾಟಕ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರೆದಿದ್ದು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಹಲವೆಡೆ ವರುಣಾರ್ಭಟ ಮುಂದುವರೆದಿದ್ದು, ಮಳೆಯಿಂದಾಗಿ ನೆರೆ, ಮಣ್ಣು ಕುಸಿತದ ಜೊತೆಗೆ ಸಾವು ನೋವು ಸಂಭವಿಸಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದ್ದು, ಕೆಆರ್ಎಸ್ ಡ್ಯಾಂಗೆ ಜೀವಕಳೆ ತುಂಬಿದೆ.

ಮಳೆಯಿಂದಾಗಿ ಕೆಆರ್ಎಸ್ ನೀರಿನ ಮಟ್ಟ ದಿನೇದಿನೇ ಹೆಚ್ಚಾಗುತ್ತಿದೆ. ಇಂದು ಕೆಆರ್ಎಸ್ಗೆ 36,772 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಈಗಾಗಲೇ 113.40 ಅಡಿಗೆ ನೀರಿನ ಮಟ್ಟ ತಲುಪಿದೆ.ಒಂದು ವಾರದಲ್ಲಿ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ 11 ಅಡಿಯಷ್ಟು ಭರ್ತಿಯಾಗಿದೆ. ಕಳೆದ ವಾರ ಕೆಆರ್ಎಸ್ನಲ್ಲಿ 104.30 ಅಡಿ ನೀರಿತ್ತು. ಆದರೀಗ ಮಳೆಯಿಂದಾಗಿ ಡ್ಯಾಂನ ನೀರಿನ ಮಟ್ಟವೂ ಸಹ ಏರಿಕೆಯಾಗುತ್ತಿದೆ.
ಇನ್ನು ಕೆಆರ್ಎಸ್ ಭರ್ತಿಗೆ 11 ಅಡಿ ಮಾತ್ರ ಬಾಕಿ ಇದೆ. ನೀರಿನ ಸಾಮರ್ಥ್ಯದಲ್ಲೂ ಸಹ ಗಣನೀಯ ಏರಿಕೆ ಕಂಡಿದ್ದು, ಒಂದು ವಾರದಲ್ಲಿ 9 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವಾರ 26.372 ಟಿಎಂಸಿಯಷ್ಟು ಶೇಖರಣೆಯಾಗಿತ್ತು. ಇಂದು 35.282 ಟಿಎಂಸಿ ನೀರು ಶೇಖರಣೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಕೆಆರ್ಎಸ್ ಜಲಾಶಯದ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ.
ಇಂದಿನ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 113.40 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ.
ಇಂದಿನ ಸಾಮರ್ಥ್ಯ - 35.282 ಟಿಎಂಸಿ
ಒಳ ಹರಿವು - 36,772 ಕ್ಯೂಸೆಕ್
ಹೊರ ಹರಿವು - 2,448 ಕ್ಯೂಸೆಕ್












Click it and Unblock the Notifications