Rain in Karnataka: ಕರ್ನಾಟಕ; ವಿವಿಧ ಜಿಲ್ಲೆಗೆ ತಂಪೆರೆದ ಬುಧವಾರದ ಮಳೆ
ಬೆಂಗಳೂರು, ಏಪ್ರಿಲ್ 13; ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಬುಧವಾರ ಸಂಜೆ ಕೊಂಚ ನಿಟ್ಟುಸಿರುವ ಬಿಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಿದೆ. ತಮಿಳುನಾಡಿನಲ್ಲಿನ ಉಂಟಾಗಿರುವ ಚಂಡಮಾರುತದ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ.
ಬೆಂಗಳೂರು, ಮಂಡ್ಯ, ಚಾಮರಾಜನಗರ, ಹಾಸನ, ಮೈಸೂರು, ಮಂಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಗಾಳಿಯ ಅರ್ಭಟಕ್ಕೆ ಹಲವು ಕಡೆ ಮರಗಳು ಉರುಳಿ ಬಿದ್ದಿವೆ. ಹಾಸನದಲ್ಲಿ ಸಿಡಿಲು ಬಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಜೆ 4 ಗಂಟೆಯ ವೇಳೆಗೆ ಮಳೆ ಆರಂಭಗೊಂಡಿತು. ಜಯನಗರ, ಮೈಸೂರು ರಸ್ತೆ, ವಿಜಯನಗರ, ಹನುಮಂತನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಿತು. ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದರು.

ಅತ್ತಿಗುಪ್ಪೆ ನಮ್ಮ ಮೆಟ್ರೋ ನಿಲ್ದಾಣದ ಬಳಿ ಧಾರಾಕಾರ ಮಳೆಗೆ ಬೃಹತ್ ಮರ ಉರುಳಿ ಬಿತ್ತು. ಅರಣ್ಯ ಸಿಬ್ಬಂದಿಗಳು ಹಾಗೂ ಸಂಚಾರಿ ಪೊಲೀಸರ ಸಹಾಯದೊಂದಿಗೆ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸುರಿದ ಮಳೆಯಿಂದಾಗಿ ಕೆಂಗೇರಿ ಬಳಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೆಂಗೇರಿ ಸಂಚಾರ ಠಾಣೆ ಪೊಲೀಸರು ರಸ್ತೆ ಸ್ವಚ್ಛ ಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಚಾಮರಾಜನಗರ; ಚಾಮರಾಜನಗರದಲ್ಲಿ ಸುರಿದ ಮಳೆಯಿಂದಾಗ ರಸ್ತೆಗಳು ಜಲಾವೃತಗೊಂಡವು. ಸತತ ಎರಡು ಗಂಟೆಗಳ ಕಾಲ ಮಳೆಯಾಗಿದೆ. ಜಿಲ್ಲಾಡಳಿತ ಭವನದ ರಸ್ತೆಯಲ್ಲಿ ಒಳಚರಂಡಿ ಅವ್ಯವಸ್ಥೆ ಕಾರಣ ನೀರು ರಸ್ತೆ ಮೇಲೆ ಹರಿಯಿತು. ಜನರು ಆಕ್ರೋಶ ವ್ಯಕ್ತಪಡಿಸಿದರು.
ಹನೂರು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಸುಮಾರು 1 ಗಂಟೆಗಳ ಕಾಲ ಮಳೆಯಾಗಿದೆ. ಕೊಳ್ಳೇಗಾಲ ನಗರದಲ್ಲಿ ಮಳೆಯಾಗಿದೆ. ಯಳಂದೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿದ್ದು, ನೀರಿಗಾಗಿ ಕಾದು ಕುಳಿತಿದ್ದ ಜನರಿಗೆ ಸಂತಸ ತಂದಿದೆ.
ಅಂಬಳೆ ಗ್ರಾಮದಲ್ಲಿ ಮಳೆಯ ಜೊತೆ ಬೀಸಿದ ಗಾಳಿಯಿಂದಾಗಿ ಹಲವಾರು ಶೆಡ್ಗಳ ಶೀಟುಗಳು ಹಾರಿ ಹೋದವು. ಅಲೆಮನೆಗೆ ನೀರು ನುಗ್ಗಿತು. ಬೆಲ್ಲವನ್ನು ರಕ್ಷಣೆ ಮಾಡಲು ರೈತರು ಪರದಾಟ ನಡೆಸಿದರು.
ಹಾಸನ ಜಿಲ್ಲೆಯಲ್ಲಿಯೂ ಭಾರೀ ಮಳೆ ಸುರಿಯಿತು. ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ನುಗ್ಗೇಹಳ್ಳಿ ರಸ್ತೆಯಲ್ಲಿ ಮರ ಉರುಳಿಬಿದ್ದ ಪರಿಣಾಮ ವಾಹನಗಳು ಒನ್ ವೇನಲ್ಲಿ ಸಂಚಾರ ನಡೆಸುವಂತಾಯಿತು. ತಾಲ್ಲೂಕಿನ ಹಲವೆಡೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಮಳೆಯಾಗಿದೆ.
ತಾಲ್ಲೂಕಿನ ಬಸವನಪುರ ಗ್ರಾಮದ ಬಳಿ ಮಳೆಯಿಂದ ರಕ್ಷಣೆ ಪಡೆಯಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವಕ ಉದಯ್ ಕುಮಾರ್ (24) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸೊಸಲಗೆರೆ ಗ್ರಾಮದ 19 ವರ್ಷದ ದರ್ಶನ್ ಎಂಬ ಯುವಕ ಸಹ ಮೃತಪಟ್ಟಿದ್ದಾನೆ.
ಕರ್ನಾಟಕ ಮಾತ್ರವಲ್ಲ ಕೇರಳದಲ್ಲಿಯೂ ಸಹ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 24 ಗಂಟೆಗಳ ಕಾಲ 115.6 ಮಿ. ಮೀ. ನಿಂದ 204.4 ಮಿ. ಮೀ. ತನಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ತಮಿಳುನಾಡಿನ ದಕ್ಷಿಣ ಕರಾವಳಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಕರ್ನಾಟಕ, ಕೇರಳದಲ್ಲಿ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications