Karnataka Rain: ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ಮಾಹಿತಿ
ಕೊನೆಗೂ ದಕ್ಷಿಣ ಒಳನಾಡು ಕರ್ನಾಟಕ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು ಬಿರು ಬಿಸಿಲಿನ ಧಗೆಯಿಂದ ಸ್ವಲ್ಪ ಮುಕ್ತಿ ಕೊಟ್ಟಿದೆ. ಶುಕ್ರವಾರ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯಿತು.
ಸತತ ಐದು ತಿಂಗಳಿಂದ ಬೆಂಗಳೂರಿನಿಂದ ಮರೆಯಾಗಿದ್ದ ಮಳೆ, ಶುಕ್ರವಾರ ದರ್ಶನ ಕೊಟ್ಟಿದೆ. ನಗರದ ಹಲವು ಭಾಗಗಳಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ತಾಪಮಾನ ಹೆಚ್ಚಳದಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿಯನ್ನು ತಂಪಾಗಿಸಿದೆ.

ಬೆಂಗಳೂರು ಮಾತ್ರವಲ್ಲದೆ ಮೈಸೂರು ಜಿಲ್ಲೆಯಲ್ಲಿ ಕೂಡ ವ್ಯಾಪಕ ಮಳೆಯಾಗಿದ್ದು ವಾತಾವರಣವನ್ನು ತಣ್ಣಗಾಗಿಸಿದೆ. ಶುಕ್ರವಾರ ರಾತ್ರಿ 9.30ಕ್ಕೆ ಕೊನೆಯಾದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ವಿವರ ಇಲ್ಲಿದೆ.
ಯಾವ ಜಿಲ್ಲೆಯಲ್ಲಿ ಹೆಚ್ಚು ಮಳೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 80 ಮಿ.ಮೀ ಮಳೆಯಾಗಿದ್ದು ಹೆಚ್ಚು ಮಳೆಯಾದ ಪ್ರದೇಶವಾಗಿದೆ. ಉಳಿದಂತೆ ಮೈಸೂರು 71 ಮಿ.ಮೀ, ಚಾಮರಾಜನಗರ 67 ಮಿ.ಮೀ, ಬೆಂಗಳೂರು ನಗರ 45 ಮಿ.ಮೀ, ರಾಮನಗರ 42 ಮಿ.ಮೀ, ಮಂಡ್ಯ 41ಮಿ.ಮೀ, ದಕ್ಷಿಣ ಕನ್ನಡ 34 ಮಿ.ಮೀ, ಕೊಡಗು 26 ಮಿ.ಮೀ, ಹಾಸನ ಜಿಲ್ಲೆಯಲ್ಲಿ 22ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿ ಮಾಡಿದೆ.
ರಾತ್ರಿ ಕೂಡ ಉತ್ತಮ ಮಳೆ ಸಾಧ್ಯತೆ
ಶುಕ್ರವಾರ ರಾತ್ರಿ ಕೂಡ ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ ತಿಂಗಳಲ್ಲಿ ಉತ್ತಮ ಮಳೆ
ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 5 ರ ಬಳಿಕ ರಾಜ್ಯದಲ್ಲಿ ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆ ಇದೆ. ಸದ್ಯ ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯಾಗುವ ಸೂಚನೆ ಇದ್ದು, ಮುಂದಿನ ದಿನಗಳಲ್ಲಿ ಉತ್ತರ ಒಳನಾಡಿನ ಭಾಗಗಳಲ್ಲಿ ಕೂಡ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.
ಶಾಖದ ಅಲೆ, ತಾಪಮಾನ ಹೆಚ್ಚಳದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಮಳೆ ಬೇಕಾಗಿದೆ. ಮುಂಗಾರು ಆರಂಭಕ್ಕೆ ಮುನ್ನವೇ ರಾಜ್ಯಕ್ಕೆ ಉತ್ತಮ ಮಳೆಯ ಮುನ್ಸೂಚನೆ ಸಿಕ್ಕಿರುವುದು ಖುಷಿಯ ವಿಚಾರವಾಗಿದೆ.
ಶನಿವಾರ ಮತ್ತು ಭಾನುವಾರ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.












Click it and Unblock the Notifications