Karnataka Rain: ಮಳೆ.. ಮಳೆ.. ಅಬ್ಬರಿಸಿ ಬೊಬ್ಬಿಯಲಿದ್ದಾನೆ ವರುಣ!
ರಾಜ್ಯದಲ್ಲಿ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದು ಎಲ್ಲೆಲ್ಲೂ ಭಾರಿ ಮಳೆ ಸದ್ದು ಮೊಳಗಿದೆ. ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅದರಲ್ಲೂ ಆಗಸ್ಟ್ ತಿಂಗಳಲ್ಲಿ ಕೈಕೊಟ್ಟಿದ್ದ ಮಳೆ ಸೆಪ್ಟೆಂಬರ್ ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿದೆ. ಈಗ ಮುಂದಿನ 4 ದಿನಗಳ ಕಾಲ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಯಾವ, ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತೆ?
ಬಂಗಾಳಕೊಲ್ಲಿ (Bay Of Bengal) ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 4 ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಅಷ್ಟಕ್ಕು ಕರ್ನಾಟಕದ ಉತ್ತರ ಒಳನಾಡು & ದಕ್ಷಿಣ ಒಳನಾಡಿನ ಹಲವು ಕಡೆ ಗುಡುಗು ಸಹಿತ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹಾಗೇ ಕರಾವಳಿ ಜಿಲ್ಲೆಗಳಲ್ಲಿ ಮಳೆರಾಯ ಮತ್ತೆ ಅಬ್ಬರಿಸುವುದು ಪಕ್ಕಾ ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಹೆಚ್ಚಿನ ಮಳೆ ಬೀಳುತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಅಷ್ಟಕ್ಕೂ ಮುಂಗಾರು ಮಳೆ ಇನ್ನೇನು ಕೊನೆಯಾಗುವ ಹೊತ್ತಲ್ಲಿ ಮಳೆ ಚುರುಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು ಮುಂದಿನ ಕೆಲ ದಿನಗಳ ಕಾಲ ಮತ್ತೆ ಮಳೆ ಸುರಿಯಲಿದೆ. ಉತ್ತರ ಒಳನಾಡಿನ ರಾಯಚೂರು, ಬೀದರ್, ಕೊಪ್ಪಳ & ಕಲಬುರಗಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಉಡುಪಿ ಜಿಲ್ಲೆಗಳಲ್ಲಿ 3 ದಿನ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸೆಪ್ಟೆಂಬರ್ ಕೊಡುತ್ತಾ ಮಳೆ ಅದೃಷ್ಟ?
ಈ ವಾರ ಮಾತ್ರವಲ್ಲ, ಭಾಗಶಃ ಸೆಪ್ಟೆಂಬರ್ ತಿಂಗಳು ಪೂರ್ತಿ ಭಾರಿ ಮಳೆ ಬೀಳುವ ಬಗ್ಗೆ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಉತ್ತರ ಒಳನಾಡು ಭಾಗದಲ್ಲಿ ಬಾಗಲಕೋಟೆ ಸೇರಿದಂತೆ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ & ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಬೀಳುವ ಮುನ್ಸೂಚನೆ ಸಿಗುತ್ತಿದೆ. ಈಗಾಗಲೇ ಉತ್ತಮವಾಗಿ ಮಳೆ ಕಂಡಿರುವ ಉತ್ತರ ಕರ್ನಾಟಕದ ಜಿಲ್ಲೆಗಳು, ಬರದ ಭೀತಿ ಮತ್ತು ಆತಂಕದಿಂದ ಹೊರಬಂದಿವೆ. ಹಾಗೇ ದಕ್ಷಿಣ ಕರ್ನಾಟಕದಲ್ಲಿ ಕೂಡ ಭಾರಿ ಮಳೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ.
ಕಾವೇರಿ ಕೊಳ್ಳದಲ್ಲಿ ಭಾರಿ ಮಳೆ?
ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ ಸೇರಿ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಕೊಡಗು & ಚಿಕ್ಕಮಗಳೂರಲ್ಲಿ ಭಾರಿ ಮಳೆ ಸುರಿಯುವುದ ಗ್ಯಾರಂಟಿ. ಹೀಗಾಗಿ ಬತ್ತಿ ಹೋಗುತ್ತಿದ್ದ ನದಿಗಳು & ಕೆರೆಗಳಿಗೆ ಈಗ ಮತ್ತೆ ಜೀವಕಳೆ ಬರಲಿದೆ.

ಒಟ್ನಲ್ಲಿ ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ ಶುರುವಾದ ಹಿನ್ನೆಲೆಯಲ್ಲಿ ಅನ್ನದಾತ ರೈತನಿಗೆ ಖುಷಿ ಸಿಕ್ಕಿದೆ. ಆದರೆ ಇದೇ ರೀತಿ ಕನಿಷ್ಠ ಒಂದು ವಾರ ಮಳೆ ಸುರಿಯಬೇಕು ಅಂತಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಇದೀಗ ಬಂಗಾಳಕೊಲ್ಲಿ ಭಾಗದಲ್ಲಿ ಎದುರಾಗಿರುವ ಪರಿಸ್ಥಿತಿ ಹಾಗೂ ವಾಯುಭಾರ ಕುಸಿತ ನೋಡುತ್ತಿದ್ದರೆ ಮುಂದಿನ ಒಂದು ವಾರ ಮಳೆಯ ಅಬ್ಬರ ಇರಬಹುದು ಎನ್ನಲಾಗಿದೆ. ಹೀಗಾಗಿ ರೈತರು ಕೂಡ ವರುಣ ದೇವನಲ್ಲಿ ಬೇಡಿದ್ದು ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಉತ್ತಮವಾಗಿ ಮಳೆ ಬೀಳಲಿ ಅಂತಿದ್ದಾರೆ.












Click it and Unblock the Notifications