ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು, ಅಕ್ಟೋಬರ್ 14 : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೂರು ಜಿಲ್ಲೆಗಳಲ್ಲಿ ಮಂಗಳವಾರ 'ಯೆಲ್ಲೊ' ಅಲರ್ಟ್ ಘೋಷಣೆ ಮಾಡಲಾಗಿದೆ.
Recommended Video
ಕರಾವಳಿ ಭಾಗದಲ್ಲಿ ನೈಋತ್ಯ ಮಾರುತಗಳು ವೇಗವಾಗಿ ಬೀಸುತ್ತಿವೆ. ಅಕ್ಟೋಬರ್ 15 ಮತ್ತು 16ರಂದು ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಂಗಳವಾರ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಶಿವಮೊಗ್ಗ, ಸಾಗರ, ಕೊಲ್ಲೂರು, ಭಟ್ಕಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟ ನೋಡಿ ಜನರು ಕೆಲಕಾಲ ಆತಂಕಗೊಂಡಿದ್ದರು.
ಭಾನುವಾರ ಹೊನ್ನಾವರಲ್ಲಿ 6, ಭಟ್ಕಳ ಮತ್ತು ತೀರ್ಥಹಳ್ಳಿಯಲ್ಲಿ 4, ಸುಬ್ರಮಣ್ಯ, ಕೊಲ್ಲೂರು ಮತ್ತು ಸಾಗರದಲ್ಲಿ 3 ಸೆಂ. ಮೀ. ಮಳೆಯಾಗಿದೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಈ ಬಾರಿ ಅಧಿಕ ಮಳೆಯಾಗಿದ್ದು ಅಡಿಕೆ ಬೆಳೆಗೆ ಕೊಳೆ ರೋಗ ಬಂದಿದೆ. ಬೆಳೆ ನೆಲಕ್ಕೆ ಬರುತ್ತಿದ್ದು, ರೈತರು ಆತಂಕಗೊಂಡಿದ್ದಾರೆ. ಆದರೆ, ಮಳೆ ಕಡಿಮೆಯಾಗದಿರುವುದು ರೈತರನ್ನು ಚಿಂತೆಗೆ ತಳ್ಳಿದೆ.
ಬಳ್ಳಾರಿ ಜಿಲ್ಲೆಯಲ್ಲಿಯೂ ಸತತ ಎರಡು ವಾರಗಳಿಂದ ಮಳೆಯಾಗುತ್ತಿದೆ. ಹೊಸಪೇಟೆ ತಾಲೂಕಿನ ಹಂಪಿ ರಥಬೀದಿಯ ಮಗ್ಗುಲಲ್ಲಿರುವ ಸಾಲು ಮಂಟಪದ ಒಂದು ಭಾಗ ಭಾನುವಾರ ಕುಸಿದು ಬಿದ್ದಿದೆ.
ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿಯೂ ಶನಿವಾರ ರಾತ್ರಿ, ಭಾನುವಾರ ಬೆಳಗ್ಗೆ ಮಳೆಯಾಗಿದೆ. ಬೈಲಹೊಂಗಲ, ಸವದತ್ತಿ, ಖಾನಾಪುರ ಮುಂತಾದ ಕಡೆ ಮಳೆಯಾಗಿದೆ. ಸವದತ್ತಿ ತಾಲೂಕಿನ ಬಳಿ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದೆ.
ಸವದತ್ತಿ-ಧಾರವಾಡ ಮಾರ್ಗದ ಮುಖ್ಯ ಸೇತುವೆ ಆಗಸ್ಟ್ನಲ್ಲಿ ಸುರಿದ ಮಳೆಗೆ ಕೊಚ್ಚಿ ಹೋಗಿತ್ತು. ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಸಹ ಈಗಿನ ಮಳೆಗೆ ಕೊಚ್ಚಿ ಹೋಗಿದೆ.












Click it and Unblock the Notifications