Rain Alert: ಚಂಡಮಾರುತ ಪ್ರಭಾವ, ಕರ್ನಾಟಕದ ಇಲ್ಲಿ ಗಂಟೆಗಳ ಕಾಲ ಜೋರು ಮಳೆ ದಾಖಲು, ಮುನ್ಸೂಚನೆ
ಹಾವೇರಿ, ಅಕ್ಟೋಬರ್ 23: ಕರ್ನಾಟಕ ರಾಜ್ಯದ ಅನೇಕ ಕಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ದೀಪಾವಳಿ ಹಬ್ಬದ ಕೊನೆಯ ದಿನ ಬುಧವಾರ ಕೊಂಚ ಬ್ರೇಕ್ ನೀಡಿದ್ದ ಮಳೆರಾಯ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಗುರುವಾರ ಮಧ್ಯಾಹ್ನದಿಂದಲೇ ನಿರಂತರವಾಗಿ ಸುರಿಯುತ್ತಿದೆ. ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ರಾತ್ರಿವರೆಗೂ ಮಳೆ ಮುಂದುವರಿದಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಸ್ಪಷ್ಟ ಚಂಡಮಾರುತವಾಗಿ ಬದಲಾಗಿದೆ. ಸಮುದ್ರ ಮೇಲ್ಮೈ ಮೇಲಿನ ಬಿರುಗಾಳಿ ತೀವ್ರತೆ ಹೆಚ್ಚಾಗಿದೆ. ರಾಜ್ಯದ ವಿವಿಧ ಕಡೆ ಗುರುವಾರ ಚಳಿ ಮಳೆ ಆವರಿಸಿದೆ. ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ. ಮಧ್ಯಾಹ್ನ 2 ಗಂಟೆಯಿಂದಲೇ ಶುರುವಾಗಿದ್ದ ಮಳೆ ಸಂಜೆಯಾಗದರೂ ಬಿಟ್ಟಿಲ್ಲ. ಹಾವೇರಿ, ಧಾರವಾಡ-ಹುಬ್ಬಳ್ಳಿ ಮತ್ತು ದಾವಣಗೆರೆ, ಗದಗ ಭಾಗದ ಕೆಲವೆಡೆ ಉತ್ತಮ ಮಳೆ ಆಗಿದೆ.

ಇಡೀ ದಿನ ಮಬ್ಬು ಕವಿದಿತ್ತು. ನಿರಂತರ ಗಂಟೆಗಳ ಕಾಲ ಜಿಟಿ ಜಿಟಿ ಮಳೆ ಆಯಿತು. ಆಗಾಗ ಅರ್ಧ ಗಂಟೆಯಷ್ಟು ಬಿಡುವು ನೀಡುವ ಮಳೆ ಮತ್ತೆ ಸುರಿದಿದೆ. ಜೋಳ, ಕಡಲೆ ಸೇರಿಂತೆ ಇತರ ರಾಬಿ ಬೆಳೆ ಬಿತ್ತನೆಗೆ ಹೊಲ ಹದ ಮಾಡಿದ್ದ ರೈತರು ಮಳೆ ಬಿಡುವು ನೀಡುವುದನ್ನೆ ಕಾಯುತ್ತಿದ್ದಾರೆ. ಇನ್ನೂ ಈಗಾಗಲೇ ಬಿತ್ತನೆ ಮಾಡಿದ ಜಮೀನುಗಳಲ್ಲಿ ಬೆಳೆದ ಒಂದು ವಾರದ ಜೋಳವು ಈ ನಿರಂತರ ಮಳೆಗೆ ನಲುಗಬಹುದೆಂದು ಹೇಳಲಾಗುತ್ತಿದೆ.
ಏಕಂದರೆ ಈಗಾಗಲೇ ನಾಲ್ಕೈದು ದಿನಗಳಲ್ಲಿ ಮಳೆ ಸುರಿಯುತ್ತಿದೆ. ಇವತ್ತು ಗುರುವಾರ ಅತ್ಯಧಿಕ ಮಳೆ ಆಗಿದೆ. ಹೆಚ್ಚು ಮಳೆ ಆದರೆ ಹೊಲದಲ್ಲಿನ ಸಣ್ಣ ಪ್ರಮಾಣದಲ್ಲಿನ ಬೆಳೆ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತಿದೆ. ಈ ಚಿಂತೆ ವಾರದ ಹಿಂದೆ ರಾಬಿ ಬೆಳೆ ಬಿತ್ತನೆ ಮಾಡಿದ ರೈತರನ್ನು ಕಾಡುತ್ತಿದೆ. ಬಿಸಿಲಿನ ದರ್ಶನ ಅಪರೂವಾಗಿದ್ದು, ಮುಂದಿನ ಎರಡು ಮೂರು ದಿನ ಇದೇ ರೀತಿಯ ವಾತಾವರಣ ಮುಂದುವರಿಯುವ ನಿರೀಕ್ಷೆ ಇದೆ.
ಹಾವೇರಿಗೆ ಯೆಲ್ಲೋ ಅಲರ್ಟ್
ಮಧ್ಯ ಕರ್ನಾಟಕದಲ್ಲಿ ಹಾವೇರಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಅಕ್ಟೋಬರ್ 24ರಂದು ಸಹ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. 115 ಮಿಲಿ ಮೀಟರ್ ನಷ್ಟು ಮಳೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಹಾವೇರಿ ಜೊತೆಗೆ ಗದಗ, ಧಾರವಾಡ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಗುರುವಾರ ಹವಾಮಾನ ಇಲಾಖೆ ಮುನ್ಸೂಚನೆ ವರದಿಯಲ್ಲಿ ತಿಳಿಸಲಾಗಿದೆ.
ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ವೈಪರೀತ್ಯ ನಾಳೆ ಇಲ್ಲವೇ ನಾಡಿದ್ದು ಇನ್ನಷ್ಟು ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಕರ್ನಾಟಕದಾದ್ಯಂತ ಮಳೆ ಎಚ್ಚರಿಕೆ ನೀಡಲಾಗಿದೆ. ಗುರುವಾರ ತಡರಾತ್ರಿವರೆಗೂ ಮಳೆ ಮುಂದುವರಿದಿದೆ.












Click it and Unblock the Notifications