Breaking:ಕರ್ನಾಟಕದ ಉತ್ತರ ಒಳನಾಡಿಗೆ ಧಾರಾಕಾರ ಮಳೆ ನಿರೀಕ್ಷೆ: 2 ದಿನ 'ಯೆಲ್ಲೋ ಅಲರ್ಟ್'
ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕದಲ್ಲಿ ಮತ್ತೆ ಮುಂಗಾರು ಮಳೆ ಅಬ್ಬರಿಸಲು ಸಜ್ಜಾಗಿದೆ. ಉತ್ತರ ಒಳನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಪ್ಟಂಬರ್ 30ರಿಂದ ನಾಲ್ಕೈದು ದಿನ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳ ಹಲವೆಡೆ ವರುಣನ ದರ್ಶನವಾಗಲಿದೆ. ಈ ಪೈಕಿ ಉತ್ತರ ಒಳನಾಡಿನ ಭಾಗದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಎರಡು ದಿನ ಜೋರು ಮಳೆ ಆಗಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಸೆಪ್ಟಂಬರ್ 30ರಿಂದ ಎರಡು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಇದೇ ವೇಳೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಆಗಾಗ ತುಂತುರು ಇಲ್ಲವೇ ಹಗುರ ಮಳೆ ಬೀಳಬಹುದು. ಇನ್ನೂ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಹ ಸಾಧಾರಣ ಮಳೆ ಆಗಬಹದು. ಇದರ ಹೊರತು ಗಂಭೀರ ಬದಲವಾಣೆಗಳು ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಅ.2ರವರೆಗೂ ಕರ್ನಾಟಕದಲ್ಲಿ ಮಳೆ: ಯಾವ ರಾಜ್ಯಗಳಲ್ಲಿ ಮಳೆ ಎಚ್ಚರಿಕೆ ಇದೆ ತಿಳಿಯಿರಿ
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಸುಳಿಗಾಳಿ ತೀವ್ರತೆ ಹಾಗೂ ಸಣ್ಣ ಪ್ರಮಾಣದ ವೈಪರಿತ್ಯಗಳ ಪ್ರಭಾವದಿಂದ ಕರ್ನಾಟಕದಲ್ಲಿ ಮಳೆ ಚುರುಕಾಗುವ ಲಕ್ಷಣಗಳು ಗೋಚರಿಸಿವೆ. ಕಳೆದ 24 ಗಂಟೆಗಳಲ್ಲಿ ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ, ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಜಿಟಿ ಜಿಟಿ ಮಳೆ ದಾಖಲಾಗಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಒಣಹವೆ ಕಂಡು ಬಂದರೆ, ಉಳಿದೆಡೆ ಮೋಡ ಕವಿದ ವಾತಾವರಣ ಉಂಟಾಗಿದ್ದು, ಮುಂದಿನ ಎರಡು ದಿನ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವರದಿ ತಿಳಿಸಿದೆ.
ಕಾರವಾರ, ಗೋಕರ್ಣದಲ್ಲಿ ಗರಿಷ್ಠ ತಾಪಮಾನ
ಮಳೆ ಚುರುಕಿನ ನಡುವೆಯು ರಾಜ್ಯ ಕೆಲವು ಭಾಗದಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಈ ಪೈಕಿ ಕಾರವಾರ ಮತ್ತು ಗೋಕರ್ಣದಲ್ಲಿ ತಲಾ 32.4 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಈ ಎರಡು ಪ್ರದೇಶಗಳು ಅಗ್ರಸ್ಥಾನದಲ್ಲಿವೆ. ಉಳಿದಂತೆ ಮೈಸೂರು, ರಾಯಚೂರು, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಗರಿಷ್ಠಿ 31ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗಾವಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ 18.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.