Fake News ವಿರುದ್ಧ ಶ್ರೀರಾಮುಲು ಗರಂ; ಪೊಲೀಸರಿಗೆ ದೂರು
ಬೆಂಗಳೂರು, ಮಾರ್ಚ್ 12 : ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸುಳ್ಳು ಸುದ್ದಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅವರು ಎರಡು ಫೇಸ್ ಬುಕ್ ಖಾತೆಗಳ ವಿರುದ್ಧ ದೂರು ನೀಡಿದ್ದಾರೆ.
ಕೊರೊನಾ ವೈರಸ್ನಂತಹ ಗಂಭೀರ ವಿಚಾರದಲ್ಲಿ ಬಿ. ಶ್ರೀರಾಮುಲು ಹೆಸರು ಬಳಸಿಕೊಂಡು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಸಚಿವರು ಮಾಡಿದಂತೆ ನಕಲಿ ಟ್ವೀಟ್ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರಿನಲ್ಲಿ ಮನವಿ ಮಾಡಿದ್ದಾರೆ.
ಕೊರೊನಾ; ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು, ಸಚಿವರ ಟ್ವೀಟ್
"ಇಂತಹ ಸಮಯದಲ್ಲಿ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕು. ಗೊಂದಲ ಸೃಷ್ಟಿಸುವ ಸಲುವಾಗಿ ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಕೆಲಸಕ್ಕೆ ಕೈಹಾಕಬಾರದು" ಎಂದು ಶ್ರೀರಾಮುಲು ಹೇಳಿದ್ದಾರೆ.
ವೈರಲ್ ವಿಡಿಯೋ; ಕೊರೊನಾ, ಕೊರೊನಾ 20 ರೂ.ಗೆ ಕೊರೊನಾ!
ಮಾರ್ಚ್ 10ರಂದು ಬಿ. ಶ್ರೀರಾಮುಲು ಖಾತೆಯಿಂದ ಟ್ವೀಟ್ ಮಾಡಿದ್ದಾರೆ ಎನ್ನುವಂತೆ ಎಡಿಟ್ ಮಾಡಿರುವ ಟ್ವೀಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರಿಂದಾಗಿ ಸಚಿವರು ಅಸಮಾಧಾನಗೊಂಡಿದ್ದಾರೆ.
ಜೋಕ್ಸ್ ಬಾಕ್ಸ್: ಒಂಟಿ ಸೀನು ಅಪಶಕುನ, ಮೂರ್ನಾಲ್ಕು ಸೀನು 'ಕೊರೊನಾ'
ವಿವಾದಕ್ಕೆ ಕಾರಣವಾಗಿರುವ ನಕಲಿ ಟ್ವೀಟ್
"ಗಂಜಲ ಕುಡಿಯುವುದರಿಂದ ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೋನಾ ವೈರಸ್ನ ತಡೆಗಟ್ಟಬಹುದು" ಎಂದು 10/3/2020ರಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ ಎಂದು ನಕಲಿ ಟ್ವೀಟ್ ಎಡಿಟ್ ಮಾಡಿ ಹಾಕಲಾಗಿದೆ. ಇದರ ವಿರುದ್ಧ ಶ್ರೀರಾಮುಲು ದೂರನ್ನು ಸಲ್ಲಿಸಿದ್ದಾರೆ.
ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ
ಸಾಮಾಜಿಕ ಜಾಲತಾಣದಲ್ಲಿ ನಾನು ಟ್ವೀಟ್ ಮಾಡಿರುವ ರೀತಿಯಲ್ಲಿ ನಕಲಿ ಟ್ವೀಟ್ ಮಾಡಲಾಗಿದೆ. ಇದನ್ನು Namma Nechina Mukhyamanthri ಮತ್ತು ಉರಿತೈತೆ ಎಂಬ ಫೇಸ್ ಬುಕ್ ಖಾತೆಗಳಲ್ಲಿ ಹಂಚಲಾಗಿದೆ. ಆದರೆ, ಈ ಟ್ವೀಟ್ ನಾನು ಮಾಡಿಲ್ಲ ಎಂದು ಶ್ರೀರಾಮುಲು ದೂರಿನಲ್ಲಿ ತಿಳಿಸಿದ್ದಾರೆ.
|
ನಿಮ್ಮ ಪ್ರತಿಭೆ ಉಪಯೋಗಿಸಿ
ನಕಲಿ ಟ್ವೀಟ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬಿ. ಶ್ರೀರಾಮುಲು ಟ್ವೀಟ್ ಮಾಡಿದ್ದು, "ಇಂತಹ ನಿರ್ಣಾಯಕ ಘಟ್ಟದಲ್ಲಿ, ಸುಳ್ಳು ಸುದ್ದಿ ಹಬ್ಬಿಸುವ ಬದಲು, ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ತಮ್ಮ ಕಾರ್ಯದಕ್ಷತೆ ಹಾಗೂ ಎಡಿಟ್ ಮಾಡುವ ಪ್ರತಿಭೆಯನ್ನು ಉಪಯೋಗಿಸಿ" ಎಂದು ಹೇಳಿದ್ದರು.
ಕಿಡಿಗೇಡಿಗಳ ಕೆಲಸ
ನನ್ನ ತೇಜೋವಧೆ ಮಾಡುವ ಹಾಗೂ ಜನರಿಗೆ ನನ್ನ ಬಗ್ಗೆ ತಪ್ಪು ಸಂದೇಶ ತಲುಪಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ನಕಲಿ ಮತ್ತು ತಪ್ಪು ಸಂದೇಶವನ್ನು ನಾನೇ ಪ್ರಕಟಿಸುತ್ತಿರುವುದಾಗಿ ಜನರು ಭಾವಿಸುವಂತೆ ಮಾಡಿ ನನ್ನ ಘನತೆಗೆ ಕುಂದು ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮುಲು ದೂರಿನಲ್ಲಿ ಮನವಿ ಮಾಡಿದ್ದಾರೆ.