ಆಪರೇಷನ್ ಕಮಲ ಸುದ್ದಿಗಳು : ಕುಮಾರಸ್ವಾಮಿ ಖಾರದ ಮಾತುಗಳು!
Recommended Video

ಮಂಡ್ಯ, ಸೆಪ್ಟೆಂಬರ್ 11 : 'ಸರ್ಕಾರ ಬಿದ್ದು ಹೋಗಲ್ಲ. ಬಿಜೆಪಿ ಶಾಸಕರೇ ಯೂ ಟರ್ನ್ ತೆಗೆದುಕೊಳ್ಳುತ್ತಾರೆ. ಇಂತಹ ಸುದ್ದಿಗಳನ್ನು ನಿಮಗೆ ಯಾರು ಕೊಡುತ್ತಾರೆ?' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಪ್ರವಾಸದಲ್ಲಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಆಪರೇಷನ್ ಕಮಲ ನಡೆಯಲಿದೆ. 11 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ' ಎಂಬ ವರದಿಗಳನ್ನು ತಳ್ಳಿ ಹಾಕಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ವಿದೇಶ ಪ್ರವಾಸ ರದ್ದುಗೊಳಿಸಿ ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಲ್ಲಿ ಸರಣಿ ಸಭೆ ನಡೆಸುತ್ತಿದ್ದಾರೆ.
ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಹೋದರರು 11 ಶಾಸಕರ ಜೊತೆ ಬಿಜೆಪಿಗೆ ಹೋಗಲಿದ್ದಾರೆ. ಸರ್ಕಾರ ಬಿದ್ದು ಹೋಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಕುಮಾರಸ್ವಾಮಿ ಅವರು ಈ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
'ಇನ್ನು ಕೆಲವೇ ದಿನ ಕಾಯಿರಿ ಬಿಜೆಪಿಯಿಂದಲೇ 5 ಶಾಸಕರು ಯೂ ಟರ್ನ್ ತೆಗೆದುಕೊಳ್ಳುತ್ತಾರೆ. ಸರ್ಕಾರ ಬಿದ್ದು ಹೋಗತ್ತೆ, ಜಾರಕಿಹೊಳಿ ಸಹೋದರರು ಬಿಜೆಪಿ ಸೇರುತ್ತಾರೆ. ಈ ಥರದ ಮಾಹಿತಿಗಳನ್ನು ನಿಮಗೆ ಯಾರು ಕೊಡುತ್ತಾರೆ. ಕೆಲವು ದಿನ ಕಾಯಿರಿ 5 ಬಿಜೆಪಿ ಶಾಸಕರು ಯೂ ಟರ್ನ್ ತೆಗೆದುಕೊಳ್ಳುತ್ತಾರೆ. ಅವರಿಂದಲೇ ರಾಜೀನಾಮೆ ಕೊಡಿಸೋಣ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, 'ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದಿಲ್ಲ. ನನ್ನ ಸಿದ್ದಾಂತಕ್ಕೂ, ಬಿಜೆಪಿ ಸಿದ್ದಾಂತಕ್ಕೂ ಒಗ್ಗುವುದಿಲ್ಲ. ಯಾರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಅವರ ವೈಯಕ್ತಿಕ ನಿರ್ದಾರ ಪಕ್ಷ ಬಿಡುವವರನ್ನು ನಾನು ಬೆಂಬಲಿಸುವುದಿಲ್ಲ. ನನ್ನ ಅಭಿಪ್ರಾಯವನ್ನು ರಮೇಶ್ ಜಾರಕಿಹೊಳಿ ಅವರಿಗೂ ತಿಳಿಸಿದ್ದೇನೆ' ಎಂದು ಸ್ಪಷ್ಟಪಡಿಸಿದರು.

ಡಾ.ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಉಪ ಮುಖ್ಯಂತ್ರಿ ಡಾ.ಜಿ.ಪರಮೇಶ್ವರ ಅವರು, 'ರಮೇಶ್ ಜಾರಕಿಹೊಳಿ ಅವರ ಜೊತೆ 20 ಶಾಸಕರು ಬಿಜೆಪಿಗೆ ಹೋಗುವುದು ಸುಳ್ಳು. ಬಿಜೆಪಿಯವರು ಸೆಳೆಯೋ ಪ್ರಯತ್ನವೂ ಸುಳ್ಳು. ಸರ್ಕಾರ ಪತನವಾಗಲಿದೆ ಎಂಬ ಸುದ್ದಿ ಬಿಜೆಪಿಯವರು ಹಬ್ಬಿಸಿರುವುದು' ಎಂದು ಹೇಳಿದರು.

ಆಪರೇಷನ್ ಕಮಲ ಇಲ್ಲ
'ಕರ್ನಾಟಕದಲ್ಲಿ ಆಪರೇಷನ್ ಕಮಲ ಅಲ್ಲ ಯಾವುದೇ ರೀತಿಯ ಆಪರೇಷನ್ ನಡೆಯುತ್ತಿಲ್ಲ. ಜಾರಕಿಹೊಳಿ ಸಹೋದರರು ನಮ್ಮ ಒಳ್ಳೆಯ ಸ್ನೇಹಿತರು. ಅವರನ್ನು ಆಪರೇಷನ್ ಕಮಲದಲ್ಲಿ ಯಾಕೆ ತರುತ್ತೀರಿ. ಸರ್ಕಾರ ಸುಭದ್ರವಾಗಿ. ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ಕಾರ 5 ವರ್ಷಗಳನ್ನು ಪೂರ್ಣಗೊಳಿಸಲಿದೆ' ಎಂದು ಸಚಿವ ಬಂಡೆಪ್ಪ ಕಾಶೆಂಪೂರ ಅವರು ಸ್ಪಷ್ಟಪಡಿಸಿದರು.

ಸರ್ಕಾರ ಭದ್ರವಾಗಿದೆ
ಡಾ.ಜಿ.ಪರಮೇಶ್ವರ ಜೊತೆ ಸಭೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಬೆಳಗಾವಿ ಜಿಲ್ಲೆಯ ಸಮಸ್ಯೆ ಈಗ ಬಗೆಹರಿದಿದೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ' ಎಂದು ಹೇಳಿದರು.












Click it and Unblock the Notifications