ಬಸ್ ಪ್ರಯಾಣ ದರ ಏರಿಕೆ ಆದೇಶಕ್ಕೆ ಬ್ರೇಕ್ ಹಾಕಿದ ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 17: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಅಲ್ಪಮಟ್ಟಿಗೆ ಇಳಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಕೆಯ ಶಾಕ್ ನೀಡಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದರ ಹೆಚ್ಚಳ ಆದೇಶ ತಡೆಹಿಡಿಯಲು ಸೂಚನೆ ನೀಡಿದ್ದಾರೆ.
ಬಸ್ ದರ ಏರಿಕೆ ಮಾಡದಂತೆ ಮುಖ್ಯಮಂತ್ರಿ ಕಚೇರಿಯಿಂದ ಎಲ್ಲ ನಿಗಮಗಳಿಗೆ ಸೂಚನೆ ಹೊರಡಿಸಲಾಗಿದೆ.
ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಎಲ್ಲ ಸರ್ಕಾರಿ ಬಸ್ಗಳ ಪ್ರಯಾಣ ದರವನ್ನು ಹೆಚ್ಚಿಸಲು ಅನುಮೋದನೆ ನೀಡಲಾಗಿತ್ತು. ಆದರೆ, ಕುಮಾರಸ್ವಾಮಿ ಆ ಆದೇಶಕ್ಕೆ ಕೂಡಲೇ ತಡೆ ನೀಡುವಂತೆ ಸೂಚಿಸಿದ್ದಾರೆ.
ಸಾರಿಗೆ ಸಂಸ್ಥೆಯ ಎಲ್ಲ ನಾಲ್ಕು ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 18ರಷ್ಟು ಹೆಚ್ಚಿಸುವ ಸಾರಿಗೆ ಇಲಾಖೆಯ ಪ್ರಸ್ತಾವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮುಂದಿತ್ತು.
ಬೆಳಿಗ್ಗೆಯಷ್ಟೇ ಪೆಟ್ರೋಲ್ ಮಾರಾಟ ತೆರಿಗೆಯನ್ನು ಶೇ 3.25 ಮತ್ತು ಡೀಸೆಲ್ ಮಾರಾಟ ತೆರಿಗೆಯನ್ನು ಶೇ 3.27 ಇಳಿಕೆ ಮಾಡಲು ತೀರ್ಮಾನಿಸಿ ಜನಸಾಮಾನ್ಯರಿಗೆ ಕೊಂಚ ಖುಷಿ ನೀಡಿದ್ದ ಸರ್ಕಾರ, ರಾತ್ರಿ ವೇಳೆಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಿ ಆಘಾತ ನೀಡಿತ್ತು. ಆದರೆ, ಸ್ವಲ್ಪ ಹೊತ್ತಿನಲ್ಲಿಯೇ ಕುಮಾರಸ್ವಾಮಿ ದರ ಏರಿಕೆಗೆ ಬ್ರೇಕ್ ಹಾಕಿದ್ದಾರೆ.
ದಿನದಿಂದ ದಿನಕ್ಕೆ ತೈಲಬೆಲೆ ಏರಿಕೆಯಾಗುತ್ತಿರುವುದರಿಂದ ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಶೇ 18ರಷ್ಟು ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿತ್ತು.
ನಷ್ಟದಲ್ಲಿರುವ ನಿಗಮಗಳನ್ನು ನಡೆಸಲು ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದರು.