ಕಾವೇರಿ ನೀರು ಉಳಿಸಿಕೊಳ್ಳಲು ಹಾಲಿ ಸಿಎಂಗೆ ಮಾಜಿ ಸಿಎಂ ಉಪಾಯ!
ಬೆಂಗಳೂರು: ಕಾವೇರಿ ನದಿ ನೀರಿನ ವಿವಾದ ಹೆಚ್ಚಾಗಿದ್ದು, ತಮಿಳುನಾಡು ಹಾಗೂ ಕರ್ನಾಟಕ ನಡುವೆ ತಿಕ್ಕಾಟ ಜೋರಾಗಿದೆ. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಮಾಹಿತಿ ನೀಡಿದ್ದು, ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ಭೇಟಿ ಸಂದರ್ಭದಲ್ಲೇ ಎಚ್ಡಿಕೆ ಕಾವೇರಿ ನೀರಿನ ವಿಚಾರ ಕೂಡ ಚರ್ಚಿಸಿದ್ದಾರಂತೆ.
ಹೌದು, ಕಾವೇರಿ ವಿಚಾರವನ್ನ ಅಮಿತ್ ಶಾ ಅವರ ಬಳಿ ಚರ್ಚಿಸಿದ್ದಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯವು ಎದುರಿಸುತ್ತಿರುವ ಕಾವೇರಿ ಜಲ ಸಂಕಷ್ಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಎಚ್ಡಿಕೆ ಮಾಧ್ಯಮಗಳ ಜತೆ ಮಾತನಾಡಿದರು.

ಕಾಂಗ್ರೆಸ್ ವಿರುದ್ಧ ಎಚ್ಡಿಕೆ ಕಿಡಿ
ಅಮಿತ್ ಶಾ ಅವರಿಗೆ ರಾಜ್ಯದ ಕಾವೇರಿ ನೀರಿನ ಕುರಿತು ವಾಸ್ತವ ಪರಿಸ್ಥಿತಿ ವಿವರಿಸಿದ್ದೇನೆ. ಕಾವೇರಿ ಸಮಸ್ಯೆ, ಬರ ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ ಎಂದ ಅವರು, ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಸಡ್ಡೆಯನ್ನು ಪ್ರದರ್ಶಿಸಿದೆ. ಕನ್ನಡ ನಾಡಿನ ರೈತರು, ಜನರ ವಿಷಯದಲ್ಲಿ ಚೆಲ್ಲಾಟವಾಡಿದೆ ಎಂದು ಕಿಡಿಕಾರಿದ್ದಾರೆ ಮಾಜಿ ಸಿಎಂ ಎಚ್ಡಿಕೆ.
ರೈತರ ಹಿತರಕ್ಷಣೆ ಕೆಲಸ ಮಾಡಿ
ಒಂದು ಕಡೆ ನೀರಿಲ್ಲ ಎಂದು ಸರ್ಕಾರವೇ ಹೇಳುತ್ತೆ, ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತದೆ. ಸುಪ್ರೀಂ ಮುಂದೆ ಅತಿ ತಡವಾಗಿ ಅರ್ಜಿ ಹಾಕಿದೆ ಸರ್ಕಾರ. ರೈತರ ಕುರಿತು ಇವರಿಗೆ ಬದ್ಧತೆ ಎನ್ನುವುದು ಇದ್ದಿದ್ದರೆ ಅರ್ಜಿ ಸಲ್ಲಿಸಲು ವಿಳಂಬ ಮಾಡುತ್ತಿರಲಿಲ್ಲ ಎಂದು ಮಾಜಿ ಸಿಎಂ ದೂರಿದ್ದಾರೆ. ರೈತರ ಹಿತ ರಕ್ಷಣೆ ಮಾಡುವ ಕೆಲಸ ಮಾಡಲಿ. ಬೆಂಗಳೂರು ನಗರಕ್ಕೆ ಕುಡಿವ ನೀರಿನ ಅಗತ್ಯವಿದೆ. ಕನ್ನಡಿಗರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡಬೇಡಿ ಎಂದು ನಾನು ಸಲಹೆ ಮಾಡಿದ್ದೆ. ಆದರೆ ಸರಕಾರ ನನ್ನ ಮಾತನ್ನು ಕೇಳಲಿಲ್ಲ ಎಂದು ಎಚ್ಡಿಕೆ ಬೇಸರ ವ್ಯಕ್ತಪಡಿಸಿದರು.

ಕೋರ್ಟ್ ಆದೇಶದಿಂದ ಪಾರಾಗಲು ಮಾರ್ಗವಿದೆ
ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ಒಂದು ಆದೇಶ ಗಮನಿಸಿದ್ದೇನೆ. ಒಂದು ವೇಳೆ ಕೋರ್ಟ್ ಪಾಲಿಸಲಾಗದ ಕಠಿಣ ಆದೇಶವನ್ನೇನಾದರೂ ನೀಡಿದರೆ, ಅಂತಹ ಸಂಕಷ್ಟ ಸಮಯದಲ್ಲಿ ಆಯಾ ರಾಜ್ಯ ಸರ್ಕಾರ ಜನ ಪರ ಕೈಗೊಳ್ಳುವ ನಿರ್ಧಾರ ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಲ್ಲ. ಆಂಧ್ರಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಒಂದು ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಎಚ್ಡಿಕೆ ಒತ್ತಾಯಿಸಿದರು.
ಗ್ಯಾರಂಟಿ ಯೋಜನೆಗಳ ನಿತ್ಯ ಭಜನೆ!
ರಾಜ್ಯದ ಜನರ ಹಿತ ರಕ್ಷಣೆಗೆ ಇಂಥ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡದೆ, ಕಾಂಗ್ರೆಸ್ ಐದು ಗ್ಯಾರಂಟಿ ಬಗ್ಗೆ ನಿತ್ಯ ಭಜನೆ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ ಮೂವರು ನ್ಯಾಯಾಧೀಶರಿದ್ದಾರೆ. ಅದೇ ಸುಪ್ರೀಂ ಕೋರ್ಟ್ ನ ಹಲವಾರು ವಿಶ್ರಾಂತ ನ್ಯಾಯಾಧೀಶರೂ ರಾಜ್ಯದಲ್ಲಿದ್ದಾರೆ. ಅಡ್ವೋಕೇಟ್ ಜನರಲ್ ಗಳಾಗಿ ಕೆಲಸ ಮಾಡಿದ 6 ಕಾನೂನು ತಜ್ಞರಿದ್ದಾರೆ. ಇವರೆಲ್ಲರನ್ನು ಆಹ್ವಾನಿಸಿ ಚರ್ಚೆ ಮಾಡಬೇಕಿತ್ತಲ್ಲವೇ? ಅಂಥವರನ್ನು ಕರೆದು ಸಭೆ ಮಾಡುವ ಸಾಮಾನ್ಯ ಜ್ಞಾನ ಇವರಿಗೆ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರು ಹಾಳಾಗಿದೆ. ಈಗ ಜನರಿಗೆ ನೀರು ಎಲ್ಲಿಂದ ತಂದು ಕೊಡುತ್ತಾರೆ. ನಮ್ಮ ರೈತರು ಒಂದು ಬೆಳೆಯನ್ನೂ ಬೆಳೆಯಲಾಗಿಲ್ಲ. ಸಂಕಷ್ಟ ಸೂತ್ರ ರಚನೆ, ರೈತರ ಹಿತ ಕಾಪಾಡಲು ನಾನು ನೀಡಿದ ಯಾವುದೇ ಸಲಹೆ ಕಾರ್ಯರೂಪಕ್ಕೆ ತಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಹಾಜರಿದ್ದರು.












Click it and Unblock the Notifications