ಚನ್ನಪಟ್ಟಣ ಟಿಕೆಟ್ ಸಿ ಪಿ ಯೋಗೇಶ್ವರ್ ಗೋ? ನಿಖಿಲ್ ಕುಮಾರಸ್ವಾಮಿಗೋ ? : ಕುಮಾರಸ್ವಾಮಿ ಉತ್ತರವೇನು?
ಬೆಂಗಳೂರು, ಆಗಸ್ಟ್ 27: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಉಪ ಚುನಾವಣೆಯ ಕಾವು ಜೋರಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಭಾರಿ ಚುರುಕು ಪಡೆದುಕೊಂಡಿದ್ದು, ಚುನಾವಣೆ ದಿನಾಂಕ ನಿಗದಿಯಾಗುವ ಮುನ್ನವೇ ಟಿಕೆಟ್ ಗಾಗಿ ಮೈತ್ರಿ ನಾಯಕರಲ್ಲಿಯೇ ಪೈಪೋಟಿ ಜೋರಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ವಿಚಾರ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದು, ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಬಿಜೆಪಿಯಿಂದ ಟಿಕೆಟ್ಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಚನ್ನಪಟ್ಟಣ ಟಿಕೆಟ್ ಗಾಗಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದಾರೆ. ಆದರೆ, ಚನ್ನಪಟ್ಟಣ ಜೆಡಿಎಸ್ ನಾಯಕರ ಭದ್ರಕೋಟೆಯಾಗಿದೆ. ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದು, ಬಿಜೆಪಿ ಹೈಕಮಾಂಡ್ ಮಾತ್ರ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.

ಚನ್ನಪಟ್ಟಣ ಉಪಚುನಾವಣೆ ಕುರಿತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಲ್ಲುತ್ತಾರೆ. ಸ್ಪರ್ಧೆ ಬಗ್ಗೆ ಯಾರು ಬೇಕಾದರೂ ನಿರೀಕ್ಷೆ ಇಟ್ಟುಕೊಳ್ಳಬಹುದು. ನಾನು ಚನ್ನಪಟ್ಟಣ ಚುನಾವಣೆ ಗೆಲ್ಲಬೇಕು ಅಷ್ಟೆ ಎಂದರು. ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಸಿ.ಪಿ. ಯೋಗೇಶ್ವರ್ ಜೆಡಿಎಸ್ಗೆ ಬರೋ ಬಗ್ಗೆ ನನ್ನ ಬಳಿ ಯಾವುದೇ ಚರ್ಚೆ ನಡೆದಿಲ್ಲ. ನಿಖಿಲ್ ಹೆಸರು ಯಾಕೆ ಇಲ್ಲಿ ತರುತ್ತೀರಿ, ನಿಖಿಲ್ಗೆ ಇನ್ನೂ ರಾಜಕೀಯ ಭವಿಷ್ಯ ಇದೆ. ಆತುರ ಯಾಕೆ ಎಂದು ಪ್ರಶ್ನಿಸಿದರು.
ಮಂಡ್ಯ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಪರ್ಚೇಸ್ ಮಾಡಿದ್ದಾರೆ. ನಾನು ಅಂದು ಬರಲು ಸಾಧ್ಯವಿಲ್ಲ. ನಾಗಮಂಗಲ ಈಗಾಗಲೇ ಅವರು ಅಧಿಕಾರ ಹಿಡಿದಿದ್ದಾರೆ. ಎಷ್ಟು ಕೋಟಿ ಕೊಟ್ಟು ಸದಸ್ಯರನ್ನು ಖರೀದಿಸಿದ್ದಾರೆ ಎಂಬುದನ್ನು ಈಗಲೇ ಹೇಳಲಿ ಎಂದು ತಿರುಗೇಟು ನೀಡಿದರು.
ಮುಡಾ ಜಾಗ ಯಾರದ್ದು, ಅವರ ಪತ್ನಿಯದ್ದಾ, ಬಾಮೈದುನದ್ದಾ, ಸರ್ಕಾರಿ ಭೂಮಿ ಲಪಟಾಯಿಸಿ ಈಗ ಟಾರ್ಚ್ ಬಿಟ್ಟುಕೊಂಡು ನೋಡುತ್ತಿದ್ದಾರೆ. ಮೊದಲು ಜಾಗ ಯಾರದ್ದು ಎಂದು ಹೇಳಲಿ, ಸುಳ್ಳು ದಾಖಲೆ ಸೃಷ್ಠಿ ಮಾಡಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ ಎಂದು ಕೇಂದ್ರದ ಸಚಿವ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮೊದಲು ಯಾರ ಜಾಗ ಎಂದು ಹೇಳಿ, ಆಮೇಲೆ ವಿರೋಧ ಪಕ್ಷಗಳ ಬಗ್ಗೆ ಚರ್ಚೆ ಮಾಡಿ, ಸರ್ಕಾರಿ ಜಾಗವನ್ನು ನನ್ನ ಜಾಗ ಎಂದು ಹೇಳಿ ಸರ್ಕಾರದ 62 ಕೋಟಿ ಲೂಟಿ ಮಾಡಿದ್ದಾರಾ ಸಿದ್ದರಾಮಯ್ಯ, ಅವರಿಗೆ ವಿರೋಧ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕುಟುಕಿದರು.
ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅವರು ಮಾಡುತ್ತಿದ್ದಾರೆ. ನನ್ನ ವಿರುದ್ಧ ಅದೇನು ಮಾಡ್ತೀರಿ ಬನ್ನಿ, ನಾನು ಸಿದ್ಧವಾಗಿದ್ದೇನೆ. ಅವರು ರೈಬಾನ್ ಗ್ಲಾಸ್ ಹಾಕುತ್ತಾರೆ. ನಾನು ಕನ್ನಡಕ ಹಾಕೋದೇ ಇಲ್ಲ. ನನ್ನ ವಿರುದ್ಧದ ಷಡ್ಯಂತ್ರಕ್ಕೆ ಭಗವಂತ ತೀರ್ಪು ಕೊಡುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ನೂರು ಜನ್ಮ ಎತ್ತಿ ಬಂದರೂ ನನ್ನನ್ನು ಏನೂ ಮಾಡುವುಕ್ಕಾಗುವುದಿಲ್ಲ. ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ಧಾರಾಳವಾಗಿ ಬಿಡುಗಡೆ ಮಾಡಲಿ, ಪಾಪ ದಾಖಲೆಗಳನ್ನು ಕಾರಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದಾರಂತೆ. ಅದೇನಿದೆ, ಬೇಕಿದ್ದರೆ ಜನರ ಮುಂದೆ ಇಡಲಿ, ನಾನು ಅವರ ದಾಖಲೆ ಬಿಡುಗಡೆ ಮಾಡೋದು ಇರಲಿ, ಅವೇ ಹೊರಗೆ ಬರುತ್ತಿವೆ ಎಂದು ಕಿಡಿಕಾರಿದರು.
ಸಾಯಿ ವೆಂಕಟೇಶ್ವರದಲ್ಲಿ ಏನೂ ಇಲ್ಲವೇ, ನನ್ನ ವಿರುದ್ಧ ಸ್ವಲ್ಪ ಸ್ಟ್ರಾಂಗ್ ಆಗಿ ಇರೋದಾದರೂ ಹುಡುಕಬಾರದಾ, ಅಧಿಕಾರಿಗಳು ಮಿಸ್ಗೈಡ್ ಮಾಡಿದ್ದಾರೆ ಎಂದು ಸಂತೋಷ್ ಹೆಗಡೆ ಹೇಳಿದ್ದಾರೆ. ನಾನು ದುಡ್ಡು ಹೊಡೆದಿದ್ದೇನೆ ಎಂದು ಲೋಕಾಯುಕ್ತ ಹೇಳಿಲ್ಲ. ಸತ್ತಿರೋ ಕೇಸ್ ಇದು. ಇದನ್ನು ಇಟ್ಟುಕೊಂಡು ದಿನ ಕುಮಾರಸ್ವಾಮಿ ಏನು ಮಾಡ್ತೀವಿ ಅಂತಿದ್ದಾರೆ. ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಹೇಳಿದರು.
ಸರ್ಕಾರ ತೆಗಿತೀನಿ ಎಂದು ಮೋದಿಗೆ ನಾನು ಮಾತು ಯಾಕೆ ಕೊಡಲಿ, ನಾನು ಏನು ಜ್ಯೋತಿಷಿನಾ, ಸರ್ಕಾರ ಬೀಳುತ್ತೆ ಅಂತ ಹೇಳುವುದಕ್ಕೆ, ಸರ್ಕಾರ ಬೀಳಿಸೋಕೆ ನೂರು ಕೋಟಿ ಕೊಟ್ಟು ಖರೀದಿ ಮಾಡಬೇಕಾ, ನೂರು ಕೋಟಿ ಏನು ಕಡ್ಲೆ ಪುರಿನಾ? ಸರ್ಕಾರ ತೆಗೆಯೋಗೆ 5 ಸಾವಿರ ಕೋಟಿನಾ, 5 ಸಾವಿರ ಕೋಟಿನಾ, ಪ್ರಿಂಟಾಕಿಕೊಂಡು ಕೂತಿದ್ದಾರಾ ಇಲ್ಲಿ. ನನ್ನ ಬಗ್ಗೆ ಭಜನೆ ಮಾಡದಿದ್ದರೆ ಅವರಿಗೆ ತಿಂದನ್ನ ಅಗರಲ್ಲ, ಅವರಿಗೆಲ್ಲಾ ಕುಮಾರಸ್ವಾಮಿನೇ ಟಾರ್ಗೆಟ್. ಸರ್ಕಾರ ಹೋಗುತ್ತೆ ಎಂದು ಅವರೇ ದಿನಾ ಭಜನೆ ಮಾಡುತ್ತಿದ್ದಾರೆ. ಅದಕ್ಕೆ ನಾನೇನು ಮಾಡುವುದಕ್ಕಾಗುತ್ತೆ ಎಂದು ಪ್ರಶ್ನಿಸಿದರು.












Click it and Unblock the Notifications