ಶಾಸಕರ ಜೊತೆ ಸಭೆ ನಡೆಸಿ ಭೋಜನ ಸವಿದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜುಲೈ 09 : ಶಾಸಕಾಂಗ ಪಕ್ಷದ ಸಭೆ, ಧರಣಿ ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರು ಬ್ಯುಸಿಯಾಗಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರಣಿ ಸಭೆಗಳಲ್ಲಿ ಬ್ಯುಸಿಯಾಗಿದ್ದು, ರೆಸಾರ್ಟ್ನಲ್ಲಿ ಪಕ್ಷದ ಶಾಸಕರ ಜೊತೆ ಭೋಜನ ಸವಿದರು.
ಸೋಮವಾರ ಸಂಜೆಯಿಂದ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೆಸಾರ್ಟ್ಗೆ ಭೇಟಿ ನೀಡಿ, ಶಾಸಕರ ಜೊತೆ ಚರ್ಚೆ ನಡೆಸಿದರು.
ತಾಜ್ ವೆಸ್ಟ್ ಎಂಡ್ ಹೋಟೆಲ್ನಿಂದ ರೆಸಾರ್ಟ್ಗೆ ತೆರಳಿದ ಎಚ್.ಡಿ.ಕುಮಾರಸ್ವಾಮಿ ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ಶಾಸಕರ ಜೊತೆ ಮಾತುಕತೆ ನಡೆಸಿದರು. ಎಲ್ಲಾ ಅಂಶಗಳು ನಮಗೆ ಪೂರಕವಾಗಿವೆ ಯಾವುದೇ ಆತಂಕ ಬೇಡ ಎಂದು ಧೈರ್ಯ ತುಂಬಿದರು.

ನಿಮ್ಮ ನಿಮ್ಮ ಕ್ಷೇತ್ರಕ್ಕೆ ಅನುದಾನ ನೀಡುವ ಜವಾಬ್ದಾರಿ ನನ್ನದು. ಆಪರೇಷನ್ ಕಮಲಕ್ಕೆ ಒಳಗಾಗದೆ ಮೈತ್ರಿ ಸರ್ಕಾರದ ಜೊತೆ ನಿಲ್ಲಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಬಳಿಕ ಶಾಸಕರ ಜೊತೆ ಭೋಜನ ಸವಿದು ತಾಜ್ ವೆಸ್ಟ್ ಎಂಡ್ಗೆ ವಾಪಸ್ ಆದರು.
ಆಪರೇಷನ್ ಕಮಲ ಈ ಬಾರಿಯೂ ವಿಫಲವಾಗಲಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಜುಲೈ 12ರಂದು ಎಲ್ಲಾ ವದಂತಿಗಳಿಗೆ ತೆರೆ ಬೀಳಲಿದೆ ಅಲ್ಲಿಯ ತನಕ ರೆಸಾರ್ಟ್ನಿಂದ ಹೋಗುವುದು ಬೇಡ ಎಂದು ಶಾಸಕರಿಗೆ ಕುಮಾರಸ್ವಾಮಿ ಮನವಿ ಮಾಡಿದರು.












Click it and Unblock the Notifications