ಕುಮಾರಸ್ವಾಮಿಗೆ ರಾಜಕೀಯ ಆತಂಕ; 2023ಕ್ಕೂ ಸಕ್ಸಸ್ ಸಿಗಲ್ಲ: ಸಿ.ಪಿ. ಯೋಗೇಶ್ವರ್
ಚನ್ನಪಟ್ಟಣ, ನವೆಂಬರ್ 11: ಒಕ್ಕಲಿಗ ಮತ ಬ್ಯಾಂಕನ್ನು ಯಾರೂ ಜೆಡಿಎಸ್ಗೆ ಗುತ್ತಿಗೆ ಕೊಟ್ಟಿಲ್ಲ. ಒಕ್ಕಲಿಗ ಮತಗಳು ಬಿಜೆಪಿಗೆ ವಾಲುತ್ತಿರುವುದರಿಂದ ಕುಮಾರಸ್ವಾಮಿ ಅವರಿಗೆ ರಾಜಕೀಯ ಆತಂಕ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.
ಚನ್ನಪಟ್ಟಣದಲ್ಲಿ ಭಾನುವಾರ ಮಾತನಾಡಿದ ಅವರು, ''ಕುಮಾರಸ್ವಾಮಿಯವರನ್ನು ಜನ ತಿರಸ್ಕಾರ ಮಾಡ್ತಿದ್ದಾರೆ. ಆ ಪ್ರಕ್ರಿಯೆ 2023ಕ್ಕೂ ಮುಂದುವರಿಯಲಿದೆ, ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ. ಕೇವಲ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡ್ತಿದ್ದಾರೆ. ಹಾಗಾಗಿ ಒಕ್ಕಲಿಗ ಸಮಾಜ ಕೂಡಾ ಈಗ ಬಿಜೆಪಿ ಪರ ಒಲವು ತೋರಿದೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಡಿಪೆಂಡ್ ಆಗಿದೆ. ಬೇರೆ ಸಮುದಾಯದ ಸಪೋರ್ಟ್ ಸಿಗ್ತಿಲ್ಲ. ಅವರು 2023ಕ್ಕೂ ಸಕ್ಸಸ್ ಆಗೋದಿಲ್ಲ'' ಎಂದು ಕಿಡಿಕಾರಿದರು.
ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಸಿದ್ಧಿಸಿರುವ ಕಲೆ: ಜೆಡಿಎಸ್
ಇನ್ನು, ಕೆಂಪೇಗೌಡ ಪ್ರತಿಮೆ ಬಗ್ಗೆ ರಾಜಕೀಯ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಂಪೇಗೌಡರು ಸರ್ವಜನಾಂಗದ ನಾಯಕ. ಅವರ ದೂರ ದೃಷ್ಟಿ, ಆಲೋಚನೆಗಳಿಂದ ಬೆಂಗಳೂರು ನಿರ್ಮಾಣ ಆಗಿದೆ. ಕೆಂಪೇಗೌಡರ ಪ್ರತಿಮೆ ಜಾತಿ, ಪಕ್ಷಕ್ಕೆ ಮೀರಿದ ವಿಚಾರ. ಚುನಾವಣಾ ವರ್ಷ ಆಗಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಈ ರೀತಿ ಚರ್ಚೆ ಮಾಡ್ತಿದ್ದಾರೆ. ನಾವು ಮಾಡದ ಕೆಲಸವನ್ನ ಬಿಜೆಪಿ ಮಾಡಿದೆ ಎಂಬ ಕೀಳರಿಮೆ ಅವರಿಗಿದೆ. ಹಾಗಾಗಿ ಪ್ರತಿಮೆ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ಹೇಳಿದರು.
ಸರ್ಕಾರದ ಹಣದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ವಿರೋಧ ವಿಚಾರವಾಗಿ ಮಾತನಾಡಿ, ಡಿಕೆ ಶಿವಕುಮಾರ್ ಹೇಳಿರುವುದು ಅಸಂಬದ್ಧ ವಿಚಾರ. ಸರ್ಕಾರ ಯಾಕೆ ಹಣ ಖರ್ಚು ಮಾಡಿದೆ? ಏರ್ಪೋರ್ಟ್ನವರು ಮಾಡಬೇಕಿತ್ತು.? ಅಂತೆಲ್ಲಾ ಮಾತನಾಡಿದ್ದಾರೆ. ಇವತ್ತು ಕರ್ನಾಟಕದ ಕೇಂದ್ರ ಬಿಂದು ಬೆಂಗಳೂರು. ಅದಕ್ಕೆ ಕೆಂಪೇಗೌಡರ ದೂರದೃಷ್ಟಿ ಕಾರಣ. ಹಾಗಾಗಿ ಸರ್ಕಾರ ವಿವೇಚನೆಯಿಂದ ಹಣ ಖರ್ಚು ಮಾಡಿದೆ. ಅವರಿಗೆ ರಾಜಕೀಯ ಹಿನ್ನಡೆಯಾಗ್ತಿದೆ, ಹಾಗಾಗಿ ಈ ರೀತಿ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದರು.
ಎಚ್.ಡಿ. ದೇವೇಗೌಡರನ್ನು ಸ್ವತಃ ಅಶ್ವತ್ಥ ನಾರಾಯಣ್ ಅವರೇ ಆಹ್ವಾನಿಸಿದ್ದಾರೆ
ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನೂ ಆಹ್ವಾನಿಸಲಾಗಿದೆ. ಸ್ವತಃ ಅಶ್ವತ್ಥ ನಾರಾಯಣ್ ಅವರೇ ಹೋಗಿ ಆಹ್ವಾನ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಕರೆ ಮಾಡಿ ಆಹ್ವಾನಿಸಿದ್ದಾರೆ. ಆದರೆ, ಕುಮಾರಸ್ವಾಮಿಗೆ ರಾಜಕೀಯ ಆತಂಕ ಇದೆ. ಒಕ್ಕಲಿಗ ಮತಗಳು ಬಿಜೆಪಿಗೆ ವಾಲುತ್ತಿರುವ ಆತಂಕ ಹೆಚ್ಚಾಗಿದೆ. ಬಿಜೆಪಿ ಕೂಡಾ ಕೆಂಪೇಗೌಡರ ದೂರದೃಷ್ಟಿಯಂತೆ ಆಡಳಿತ ನೀಡುತ್ತಿದೆ ಎಂದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರ ವಾಕ್ಸಮರ ಜೋರಾಗಿದ್ದು, ನವೆಂಬರ್ 10 ರಂದು ಚನ್ನಪಟ್ಟಣಕ್ಕೆ ಹೋಗಲು ಯಾವ ದೊಣ್ಣೆ ನಾಯಕನ ಅಪ್ಪಣೆ ಕೇಳಬೇಕಿಲ್ಲ. ನಾನೊಬ್ಬ ಜನ ಸಾಮಾನ್ಯ. ಜನರ ಕಷ್ಟಕೇಳಲು ಜನರ ಬಳಿ ಬಂದಿದ್ದೇನೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ವಿಧಾನ ಪರಿಷತ್ ಸಿ.ಪಿ.ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದ್ದರು.
ನಮ್ಮ ನಾಯಕರಾದ ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರಾಗಿದ್ದು, ಪಂಚರತ್ನ ಯೋಜನೆಯ ನಿಮಿತ್ತ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾನು ನಮ್ಮ ಪಕ್ಷದ ಕಾರ್ಯಕರ್ತನಾಗಿ ತಾಲೂಕಿನ ಜನತೆಯ ಕಷ್ಟ ಕೇಳುವ ಕೆಲಸ ಮಾಡುತ್ತಿದ್ದೇನೆ. ನಾನು ಯಾವುದೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಬಂದಿಲ್ಲ. ನನ್ನ ಮಿತಿಯ ಬಗ್ಗೆ ನನಗೆ ಅರಿವಿದ್ದು, ಯೋಗೇಶ್ವರ್ ಅವರ ಬಳಿ ನಾನು ಏನನ್ನೂ ಕಲಿಯಬೇಕಿಲ್ಲ ಎಂದು ತಿವಿದರು.
ಇದೀಗ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೀಶ್ವರ್,ಒಕ್ಕಲಿಗ ಮತ ಬ್ಯಾಂಕನ್ನು ಯಾರೂ ಜೆಡಿಎಸ್ಗೆ ಗುತ್ತಿಗೆ ಕೊಟ್ಟಿಲ್ಲ. ಒಕ್ಕಲಿಗ ಮತಗಳು ಬಿಜೆಪಿಗೆ ವಾಲುತ್ತಿರುವುದರಿಂದ ಕುಮಾರಸ್ವಾಮಿ ಅವರಿಗೆ ರಾಜಕೀಯ ಆತಂಕ ಇದೆ ಕಿಡಿಕಾರಿದ್ದಾರೆ.