HD Kumaraswamy: ನನಗೆ ಈಗ 3ನೇ ಜನ್ಮ ಸಿಕ್ಕಿದೆ ಎಂದ ಮಾಜಿ ಸಿಎಂ!
ಬೆಂಗಳೂರು: ದೇವರು, ರಾಜ್ಯದ ಜನ ಹಾಗೂ ತಂದೆ ತಾಯಿ ಆಶೀರ್ವಾದ, ವೈದ್ಯರ ಆರೈಕೆ ನನಗೆ 3ನೇ ಜನ್ಮ ನೀಡಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಸಿಎಂ ಎಚ್ಡಿಕೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಆತಂಕ ಮೂಡಿತ್ತು. ಇದೀಗ ಆರೋಗ್ಯ ಸಮಸ್ಯೆಗಳನ್ನ ಮೆಟ್ಟಿ ನಿಂತು ಎಚ್ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮಾತನಾಡಿದ ಮಾಜಿ ಸಿಎಂ, ಆರೋಗ್ಯದ ಬಗ್ಗೆ ಯಾರು ಕೂಡ ನಿಷ್ಕಾಳಜಿ ವಹಿಸಬಾರದು. ಏನೇ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ಎಚ್ಚೆತ್ತು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ವಿನಂತಿ ಮಾಡಿಕೊಂಡರು. ಅನಾರೋಗ್ಯ ಕಾರಣ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಪೂರ್ಣ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಈ ಸಂದರ್ಭದಲ್ಲಿ ತಮ್ಮ ಚಿಕಿತ್ಸೆ ಕುರಿತು ಮಾಹಿತಿ ಹಂಚಿಕೊಂಡರು.

ದಿಢೀರ್ ಆಸ್ಪತ್ರೆಗೆ ತೆರಳಿದ್ದು ಏಕೆ?
ಕಳೆದ ಐದು ದಿನಗಳಿಂದ ನಾಡಿನ ಜನ, ಅಭಿಮಾನಿ, ಹಿತೈಷಿಗಳು, ಮಾಧ್ಯಮ ಸ್ನೇಹಿತರು, ಆತಂಕದಿಂದ ಕಾಯುತ್ತಿದ್ದರು. ಪ್ರಥಮವಾಗಿ ಭಗವಂತನಿಗೆ, ತಂದೆ ತಾಯಿಗೆ ಹಾಗೂ ಆಸ್ಪತ್ರೆ ವೈದ್ಯವೃಂದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಎಚ್ಡಿಕೆ ಹೇಳಿದರು. ಇನ್ನು ತಮ್ಮ ಆರೋಗ್ಯ ಕೈಕೊಟ್ಟು ಆಸ್ಪತ್ರೆಗೆ ದಾಖಲಾದ ಸಂದರ್ಭ ವಿವರಿಸಿದ ಮಾಜಿ ಮುಖ್ಯಮಂತ್ರಿ ಎಚ್ಡಿಕೆ, ದಿಢೀರ್ ಆಸ್ಪತ್ರೆಗೆ ದಾಖಲಾಗಲು ಕಾರಣ ಏನು ಎಂಬುದನ್ನ ವಿವಿರಿಸಿದರು. ಆ ಬಗ್ಗೆ ಮಾಹಿತಿ ಮುಂದೆ ಇದೆ.
ಆ ದಿನ ನಾನು ಬಿಡದಿಯ ನನ್ನ ತೋಟದ ಮನೆಯಲ್ಲಿದ್ದೆ. ನನ್ನ ಆಪ್ತ ಸಹಾಯಕ ಸತೀಶ್ ಜತೆಯಲ್ಲಿ ಇದ್ದರು. ತಡರಾತ್ರಿ ನನ್ನ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿತು. ತಕ್ಷಣವೇ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಕರೆ ಮಾಡಿ, ಅವರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆ ತಜ್ಞವೈದ್ಯರಾದ ಡಾ.ಸತೀಶ್ ಚಂದ್ರ ಅವರನ್ನು ಸಂಪರ್ಕ ಮಾಡಲಾಯಿತು. ಬಿಡದಿ ತೋಟದ ಮನೆಯಿಂದ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಇಲ್ಲಿಗೆ ತಲುಪಿದೆ ಎಂದರು ಅವರು.
ಮಾಜಿ ಸಿಎಂ ಎಚ್ಡಿಕೆ ಭಾವುಕ
ನಾನು ಆಗ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರೂ ಇವತ್ತು ಸರಾಗವಾಗಿ ಮಾತಾಡಲು ಆಗುತ್ತಿರಲಿಲ್ಲ. ವೈದ್ಯರು ಸಹಾ ಬಹಳ ಕಾಳಜಿ ವಹಿಸಿದರು. ಆಸ್ಪತ್ರೆಗೆ ಬಂದ ಮರು ಕ್ಷಣವೇ ವೈದ್ಯರು ಚಿಕಿತ್ಸೆ ಆರಂಭ ಮಾಡಿದರು. ಅವರ ಆರೈಕೆ, ದೇವರ ದಯೆಯ ಫಲವಾಗಿ ನಾನೀಗ ನಿಮ್ಮೆಲ್ಲರ ಜತೆ ನಿರಾಯಾಸವಾಗಿ ಮಾತನಾಡುತ್ತಿದ್ದೇನೆ ಎಂದು ಭಾವುಕರಾದರು ಮಾಜಿ ಸಿಎಂ.

ದೇವರು ಕೊಟ್ಟ 3ನೇ ಜನ್ಮ
ಪ್ರತಿ ಕುಟುಂಬಗಳಲ್ಲೂ ಆರೋಗ್ಯದ ಸಮಸ್ಯೆಗಳು ಇದ್ದೇ ಇರುತ್ತವೆ. ಬಡವ ಬಲ್ಲಿದ ಯಾರೇ ಆಗಿರಲಿ, ಅನಾರೋಗ್ಯ ಕಾಣಿಸಿಕೊಂಡಾಗ ಅಸಡ್ಡೆ ಬೇಡ. ಬಹಳ ಕಾಳಜಿ ಇರಲಿ, ಗೋಲ್ಡನ್ ಪಿರಿಯಡ್ ಬಗ್ಗೆ ಗಮನ ಇರಲಿ. ವೈಯಕ್ತಿಕವಾಗಿ ನನಗೆ ಇದು ಮೂರನೆಯ ಘಟನೆ. ಭಗವಂತ ನನಗೆ ಕೊಟ್ಟಿರುವ 3ನೇ ಜನ್ಮ ಇದು ಎಂದು ಕುಮಾರಸ್ವಾಮಿ ಚಿಕಿತ್ಸೆ ದಿನಗಳನ್ನ ನೆನೆದರು.
ಮನಸ್ಸಿಗೆ ಆಘಾತವಾಗಿ ಒತ್ತಡ..
ಸ್ವಲ್ಪ ತಡ ಮಾಡಿದ್ದರೂ ನಾನು ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಿತ್ತು. ಆದರೆ ವೈದ್ಯರ ಪರಿಶ್ರಮದಿಂದ ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದೇನೆ. ಎಲ್ಲರಿಗೂ ಗೊತ್ತಿರುವಂತೆ ಎರಡು ಸಲ ಹೃದಯ ಚಿಕಿತ್ಸೆಗೆ ಒಳಗಾದವನು ನಾನು. ಎರಡನೇ ಸಲ ಸಿಎಂ ಆಗಿದ್ದೆ. ಅಂದು ವಾಲ್ಮೀಕಿ ಜಯಂತಿಯ ದಿನ. ಮಾದ್ಯಮ ಒಂದರಲ್ಲಿ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. "ಕರ್ನಾಟಕವನ್ನು ಕತ್ತಲೆಗೆ ತಳ್ಳಿದ ಕುಮಾರ" ಎಂಬ ಶೀರ್ಷಿಕೆಯ ಕಾರ್ಯಕ್ರಮ ಅದು. ಆಗ ನನ್ನ ಮನಸ್ಸಿಗೆ ಆಘಾತವಾಗಿ ಹೃದಯದ ಮೇಲೆ ತೀವ್ರ ಒತ್ತಡ ಉಂಟಾಗಿತ್ತು ಎಂದು ಅವರು ಹಳೆಯ ಘಟನೆಯನ್ನು ನೆನಪು ಮಾಡಿಕೊಂಡರು.
ಕನ್ನಡಿಗರ ಬಗ್ಗೆ ಮಾಜಿ ಸಿಎಂ ಮಾತು
ಹೀಗಾಗಿ ನಾನು ನಾಡಿನ ಜನತೆಗೆ ಮನವಿ ಮಾಡುವುದು ಇಷ್ಟೇ. ಇಂಥ ಅನಾರೋಗ್ಯದ ಲಕ್ಷಣ ಕಂಡು ಬಂದರೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ. ಹಣದ ಬಗ್ಗೆ ಚಿಂತೆ ಮಾಡಬೇಡಿ, ಮೊದಲು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿ. ನಾನು ಬೆಳಗ್ಗೆ ಹೋಗೋಣ, ನೋಡೋಣ ಅಂತ ನಿರ್ಲಕ್ಷ್ಯ ಮಾಡಿದ್ದಿದ್ದರೆ ಜೀವನಪೂರ್ತಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಬರುತ್ತಿತ್ತು ಎಂದು ತಿಳಿಸಿದರು. ಇವತ್ತು ಚಂದ್ರಯಾನ, ಸೂರ್ಯಯಾನ ಮಾಡಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧಿಸಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ನುರಿತ, ಪ್ರತಿಭಾವಂತ, ಶ್ರೇಷ್ಠ ವೈದ್ಯರು ಇದ್ದಾರೆ. ಎಲ್ಲರೂ ಜಾಗೃತರಾಗಿ ಇರಬೇಕು ಎಂಬುದು ನನ್ನ ಮನವಿ ಎಂದು ಕುಮಾರಸ್ವಾಮಿ ಅವರು ಕಳಕಳಿಯಾಗಿ ಕೋರಿದರು.

ತಂದೆಗೆ ನಿಖಿಲ್ ಕುಮಾರಸ್ವಾಮಿ ಮನವಿ
ಈ ಸಂದರ್ಭದಲ್ಲಿ ಮಾತನಾಡಿದ ಎಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ವೈದ್ಯರಿಗೆ ಧನ್ಯವಾದ ತಿಳಿಸಿದರು. ತಂದೆ ತಾಯಿ ಮಾಡಿದ ಜನಪರ ಕೆಲಸಗಳು ಅವರನ್ನು ಕಾಪಾಡಿವೆ. ನಾವು ಸಹಜವಾಗಿ ಒತ್ತಡದಲ್ಲಿದ್ದೆವು. ಹಾಗಾಗಿ ಮಾಧ್ಯಮಗಳ ಜತೆಗೆ ಈವರೆಗೂ ಮಾತಾಡಲು ಆಗಲಿಲ್ಲ ಎಂದ ಅವರು; ಮಗನಾಗಿ ನಮ್ಮ ತಂದೆ ಅವರ ಬಳಿ ಕೇಳುವುದಿಷ್ಟೇ "ನೀವು ಜನಗಳ ಆಸ್ತಿ, ನೀವು ಹಲವಾರು ವರ್ಷ ಕಾಲ ನಮ್ಮ ಜತೆ ಇರಬೇಕು. ಮುಂದಿನ ದಿನಗಳಲ್ಲಿ ಜೀವನ ಶೈಲಿ ಬದಲಿಸಿಕೊಳ್ಳಿ. ಸರಿಯಾಗಿ ಊಟ ಮಾಡಿ, ನಿದ್ದೆ ಮಾಡಿ" ಎಂದು ಮನವಿ ಮಾಡಿದ್ರು.
ವೈದ್ಯರ ಎಚ್ಚರಿಕೆ ಮಾತು ಏನು?
ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ವೈದ್ಯರಾದ ಡಾ.ಸತೀಶ್ ಚಂದ್ರ ಅವರು ಮಾತನಾಡಿ, ಪಾರ್ಶ್ವವಾಯು ಎನ್ನುವುದು ಬಹಳ ಸಾಮಾನ್ಯ ಕಾಯಿಲೆಯಾದರೂ ಅದರ ಬಗ್ಗೆ ತಿಳಿವಳಿಕೆ ಅವಶ್ಯಕತೆ ಇದೆ. ಅದರ ಲಕ್ಷಣವನ್ನ ಕಂಡ ತಕ್ಷಣವೇ ಆಸ್ಪತ್ರೆಗೆ ಬರಬೇಕು. ಕಣ್ಣು, ಕೈ, ಮಾತುಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಬರಬೇಕು. ಗೋಲ್ಡನ್ ಅವರ್ ನಲ್ಲಿ ಆಸ್ಪತ್ರೆಗೆ ತಲುಪಬೇಕು. ಆಗ ಚಿಕಿತ್ಸೆ ಕೊಡಲು ಅನುಕೂಲ ಆಗುತ್ತದೆ. ರಕ್ತದ ಒತ್ತಡ, ಹೃದಯದ ಕಾಯಿಲೆ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸ್ಟ್ರೋಕ್ ಅನ್ನು ತಡೆಯಬಹುದು ಎಂದರು.
ಇದೇ ವೇಳೆ ಆಸ್ಪತ್ರೆ ಉಪಾಧ್ಯಕ್ಷ ಡಾ.ಗೋವಿಂದಯ್ಯ ಯತೀಶ್ ಅವರು ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಗ್ಯಕ್ಕಾಗಿ ಜನತೆಗೆ ಬಹಳಷ್ಟು ಕಾಳಜಿ, ಕಳಕಳಿ ಇತ್ತು. ಜನರ ಆತಂಕವನ್ನು, ಕಳಕಳಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ ಕಾರಣಕ್ಕಾಗಿ ಇಂದು ತಾವು ಅನುಭವಿಸಿದ ಸಂಕಷ್ಟ ಸ್ವತಃ ತಾವೇ ತಿಳಿಸುವಂತೆ ಕುಮಾರಸ್ವಾಮಿ ಅವರನ್ನು ಮನವಿ ಮಾಡಿಕೊಂಡೆವು ಎಂದು ಮಾಹಿತಿ ನೀಡಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಅವರಿಗೆ ಚಿಕಿತ್ಸೆ ನೀಡಿದ ಡಾ.ಚಿನ್ಮಯ ನಾಗೇಶ್, ಡಾ. ಅನಿರುಧ್ ವಿಲಾಸ್ ಕುಲಕರ್ಣಿ, ಡಾ.ರೇಶ್ಮಿ ದೇವರಾಜ್, ಡಾ.ಅಭಿಜಿತ್ ವಿಲಾಸ್ ಕುಲಕರ್ಣಿ ಇದ್ದರು.












Click it and Unblock the Notifications