ಎಚ್ ಡಿಕೆ ಭಾಗವಹಿಸಲೇಬೇಕು ಎಂದು ಮಂಗಳವಾರ ಮದುವೆಯಾದ ಅಭಿಮಾನಿ
ಬಾಗಲಕೋಟೆ, ಮೇ 30: ಅಭಿಮಾನ ಅಂದರೆ ಇದೇ ಇರಬೇಕು ಅನ್ನಿಸುವಂಥ ಮದುವೆಯಿದು. ಆಗಿರುವುದು ಇಲ್ಲಿನ ತೆಗ್ಗಿ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ. ಶ್ರೀಶೈಲ ವಿಕಲಾಂಗರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ದೊಡ್ಡ ಅಭಿಮಾನಿ. ಅವರ ಸಮ್ಮುಖದಲ್ಲೇ ಮದುವೆಯಾಗಬೇಕು ಎಂದು ಹಟ ಹಿಡಿದು ಕೂತಿದ್ದ ಆತ ಮೇ ಮೂವತ್ತರ ಮಂಗಳವಾರ ಹಸೆ ಮಣೆ ಏರಿದ್ದಾರೆ.
ತಮ್ಮ ಅಭಿಮಾನಿಯ ಆಸೆ ಈಡೇರಿಸುವ ಸಲುವಾಗಿ ಮಂಗಳವಾರ ಸ್ವತಃ ಎಚ್ ಡಿ ಕುಮಾರಸ್ವಾಮಿ ಅವರೇ ಮದುವೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ಆರ್ಕೆಸ್ಟ್ರಾದ ಕಲಾವಿದ ಆಗಿರುವ ಬಾಗಲಕೋಟೆಯ ಶ್ರೀಶೈಲ ಅವರು ಎಚ್ ಡಿಕೆಗೆ ಉಗ್ರಾಭಿಮಾನಿ. ಮದುವೆ ನಿಗದಿ ಆದ ಮೇಲೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ನಿಮ್ಮ ಸಮ್ಮುಖದಲ್ಲೇ ಮದುವೆ ಆಗಬೇಕು ಎಂದಿದ್ದರು.[ಕೇಂದ್ರ ಸರಕಾರದಿಂದ ರಾಜಕೀಯ ಭಯೋತ್ಪಾದನೆ: ಕುಮಾರಸ್ವಾಮಿ]
ಅಂದಹಾಗೆ, ಕಳೆದ ತಿಂಗಳೇ ಕುಮಾರಸ್ವಾಮಿ ಅವರು ಬಾಗಲಕೋಟೆಗೆ ಭೇಟಿ ಕೊಡಬೇಕಿತ್ತು. ಆದರೆ ಯಾವುದೋ ಕಾರಣಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಕುಮಾರಣ್ಣ ಬರೋದು ಕ್ಯಾನ್ಸಲ್ ಆಯ್ತು ಅಂತ ಶ್ರೀಶೈಲ ತಮ್ಮ ಮದುವೆಯನ್ನು ಕೂಡ ಮುಂದೂಡಿದ್ದರು. ಏ ಮೂವತ್ತರಂದು ಎಚ್ ಡಿಕೆ ಬರೋದು ನಿಕ್ಕಿ ಆದ ಮೇಲೆ ಅದೇ ದಿನ ಮದುವೆಯಾಗಿದ್ದಾರೆ.