ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲ ಸಿಲಿಂಡರ್ ಗೆ 50% ಸಬ್ಸಿಡಿ: ಹೆಚ್.ಡಿ.ಕುಮಾರಸ್ವಾಮಿ ಘೋಷಣೆ
ಬೆಂಗಳೂರು,ಮಾರ್ಚ್28: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. 2023 ರ ಚುನಾವಣೆ ಹೊತ್ತಲ್ಲಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿವೆ.
ಇತ್ತ ಕಾಂಗ್ರೆಸ್ ಸಾಲು ಸಾಲು ಗ್ಯಾರಂಟಿ ಘೋಷಣೆಯನ್ನ ಮಾಡುತ್ತಿದ್ರೆ. ಇತ್ತ ಬಿಜೆಪಿ ಅಭಿವೃದ್ದಿ ಮಂತ್ರದ ಜಪ ಮಾಡುತ್ತಿದೆ. ಇನ್ನೂ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ ಅಧಿಕಾರಕ್ಕೆ ಬಂದ್ರೆ ಪಂಚರತ್ನ ಯೋಜನೆಯ ಜೊತೆಗೆ ಹಲವು ಕಾರ್ಯಕ್ರಮಗಳನ್ನ ನೀಡುವ ಭರವಸೆಯನ್ನ ನೀಡಿದ ಕುಮಾರಸ್ವಾಮಿ ಮತದಾರರ ಮನ ಗೆಲ್ಲಲ್ಲು ಮುಂದಾಗಿದೆ.

ಮಂಗಳವಾರ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಜ್ಯದ ಜನರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೌದು, ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲ ಸಿಲಿಂಡರ್ ಗೆ ಶೇ.50ರಷ್ಟು ಸಬ್ಸಿಡಿ ನೀಡುವ ಮಹತ್ವದ ಘೋಷಣೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ.
ಕೇಂದ್ರ ಸರಕಾರ ಪುಕ್ಕಟ್ಟೆ ಗ್ಯಾಸ್ ನೀಡುವುದಾಗಿ ಹೇಳಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ನಂಬಿದ ಮಹಿಳೆಯರಿಗೆ ಒಂದು ಸಿಲಿಂಡರ್ ಕೊಟ್ಟ ಮೇಲೆ ಬೆಲೆ ಏರಿಕೆಯ ಶಾಕ್ ನೀಡಿತು. ಈಗ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ದಾಟಿದ್ದು, ಬಡಜನರು ಜೀವನ ಸಾಗಿಸುವುದೇ ದುಸ್ತರವಾಗಿದೆ ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

ನಮ್ಮಲ್ಲಿ ಅಡುಗೆ ಅನಿಲ ರಿಯಾಯಿತಿ ಒಂದೇ ಯೋಜನೆ ಅಲ್ಲ, ಇನ್ನೂ ಹಲವಾರು ಯೋಜನೆಗಳು ಇವೆ. ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ಸಿಗಲಿವೆ. 10 ಸಿಲಿಂಡರ್ ಗೆ ಅರ್ಧ ಹಣ ಪಡೆಯಲಿದ್ದೇವೆ. ಇನ್ನು ಆಟೋ ಚಾಲಕರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡಲಾಗುವುದು. ಹಾಗೆಯೇ, ಅಂಗನವಾಡಿ ಕಾರ್ಯಕರ್ತರ ಶಾಶ್ವತ ಬೇಡಿಕೆ ಏನಿದೆ ಅದನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಆರ್ಥಿಕ ತಜ್ಞರ ಜೊತೆ ಚರ್ಚೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದರು.
ಇನ್ನೂ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಮೀಸಲು ವಿಷಯದಲ್ಲಿ ಜೆಡಿಎಸ್ ನಿಲುವು ಸಂವಿಧಾನದ ಪರ. ಸಂವಿಧಾನದಲ್ಲಿರುವ ಮಾರ್ಗಸೂಚಿಯಂತೆ ಮೀಸಲಾತಿ ಇರಬೇಕು. ಸಮಾಜ ಹಾಳು ಮಾಡುವ, ಜಾತಿಗಳ ಮಧ್ಯೆ ತಂದಿಡುವ ಕೆಲಸ ಆಗಬಾರದು. ಹತ್ತು ಜಿಲ್ಲೆಯಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವವರು ಇದ್ದಾರೆ. ಹೀಗಿದ್ದರೂ ಯಾವುದೇ ಮುಂದಾಲೋಚನೆ ಇಲ್ಲದೆ, ಬೇಜವಾಬ್ದಾರಿಯಿಂದ ಆದೇಶ ಹೊರಡಿಸಿದ್ದು ಯಾಕೆ? ಕೇವಲ ಮತಕ್ಕಾಗಿ, ಚುನಾವಣೆಗಾಗಿ ಹೀಗೆ ಮಾಡಿದೆ ಬಿಜೆಪಿ ಸರಕಾರ ಎಂದು ಕಿಡಿಕಾರಿದರು.
ಸಮಾಜವನ್ನು ಒಡೆಯಬೇಕು ಎನ್ನುವುದು ದುರುದ್ದೇಶದಿಂದಲೇ ಬಿಜೆಪಿ ಸರಕಾರ ಮೀಸಲು ನಾಟಕ ಅಡಿದೆ. ಮುಸ್ಲಿಮರು ಗಲಾಟೆಗೆ ಮುಂದಾಗಲಿ, ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ಈ ಸರಕಾರದ ದುರುದ್ದೇಶವಾಗಿತ್ತು. ಒಂದು ವೇಳೆ ಮುಸ್ಲಿಮರು ಬೀದಿಗಿಳಿದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ಅಮಾಯಕ ಜನ ಬಲಿಯಾಗಿದ್ದರೆ ಯಾರು ಹೊಣೆ ಆಗುತ್ತಿದ್ದರು? ರಕ್ತಪಾತ ಮಾಡಲು ಬಿಜೆಪಿಯವರು ಕುತಂತ್ರ ಹೂಡಿದ್ದಾರೆ. ಸಂಘರ್ಷ ಆಗಬೇಕು ಅಷ್ಟೆ ಅವರಿಗೆ. ಆದರೆ, ಮುಸ್ಲಿಮರು ತಾಳ್ಮೆ ಇರಲಿ. ಹುಡುಗಾಟಿಕೆಯಿಂದ ಮಾಡಿರುವ ಈ ಮೀಸಲಾತಿಗೆ ಬೆಂಬಲ ಇಲ್ಲ ಎಂದು ಹೇಳಿದರು.
ಬಿಜೆಪಿ ಸರಕಾರವು ಸರಕಾರಿ ನೌಕರಿಯನ್ನು ಯಾವ ರೀತಿ ಕೊಡ್ತಾ ಇದೆ ಎನ್ನುವುದು ಜಗಜ್ಜಾಹೀರು. ಹಣ ಪಡೆದು ನೌಕರಿ ಕೊಡ್ತಾ ಇದ್ದಾರೆ. ಮೀಸಲಾತಿ ಮೇಲೆ ನೌಕರಿ ಕೊಡ್ತಾ ಇಲ್ಲ. ಹಾಗಾದರೆ, ಮೀಸಲಾತಿ ತಗೊಂಡು ಏನ್ ಮಾಡೋದು ? ಹಣ ಕೊಟ್ಟವರಿಗೆ ಸರಕಾರಿ ನೌಕರಿ ಮಾರಾಟ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂಥ ಅವೈಜ್ಞಾನಿಕ, ತಾರತಮ್ಯದ ಮೀಸಲಾತಿ ವ್ಯವಸ್ಥೆಯನ್ನು ತೆಗೆದು ಹಾಕುತ್ತೇವೆ. ಅಷ್ಟೆ ಅಲ್ಲ, ಈ ಹಣ ಫಿಕ್ಸ್ ಮಾಡಿ ನೌಕರಿ ಕೊಡ್ತೀರಲ್ಲಾ, ಅದನ್ನು ನಿರ್ನಾಮ ಮಾಡುತ್ತೇವೆ. ಈ ವ್ಯವಸ್ಥೆಯಲ್ಲಿ ಸ್ವಚ್ಚ ಮಾಡಬೇಕು ಅಂದರೆ ಮಾಡಬೇಕು ಕೆಪಿಎಸ್ ಸಿ ಯನ್ನು ಸ್ವಚ್ಚ ಮಾಡಬೇಕು. ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications