
SC,ST ಮೀಸಲಾತಿ: ಜನಸಂಖ್ಯೆಗೆ ತಕ್ಕಂತೆ ಹೆಚ್ಚಿಸಲು ಎಚ್ಡಿ ಕುಮಾರಸ್ವಾಮಿ ಸಲಹೆ
ಬೆಂಗಳೂರು, ಅಕ್ಟೋಬರ್ 7: ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಏರಿಕೆ ಮಾಡುವ ಸಂಬಂಧ ರಾಜ್ಯ ಸರಕಾರ ಆದಷ್ಟು ಬೇಗ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ಮೇಲೆ ನಗರದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜನತಾ ಮಿತ್ರ ಸಮಾರೋಪ ಸಮಾವೇಶದ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.
ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ; ಸಿಎಂ ಬಸವರಾಜ ಬೊಮ್ಮಾಯಿ
ಶುಕ್ರವಾರ(ಇಂದು) ಸರ್ವಪಕ್ಷ ಸಭೆ ಕರೆದಿದ್ದರು. ಸರ್ವಪಕ್ಷದ ನಾಯಕರು ಈ ಬಗ್ಗೆ ಚರ್ಚಿಸಿದ್ದು, ಜನಗಣತಿ ಆಧಾರದ ಮೇಲೆ ಎಸ್ಸಿ ಸಮಾಜಕ್ಕೆ ಶೇ. 15 ರಿಂದ ಶೇ.17 ಕ್ಕೆ ಹಾಗೂ ಎಸ್ಟಿಗೆ ಶೇ.3 ರಿಂದ ಶೇ.7 ಕ್ಕೆ ಮೀಸಲಾತಿ ಏರಿಕೆ ಮಾಡಲು ಆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದಷ್ಟು ಬೇಗನೆ, ಸಮಯ ವ್ಯರ್ಥ ಮಾಡದೆ ಮೀಸಲಾತಿಯನ್ನು ಹೆಚ್ಚಿಸಿ ಜಾರಿಗೆ ತರಬೇಕು ಎಂದು ನಾನು ಸಲಹೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಸದನದಲ್ಲಿ ಹೇಳಿದ್ದರು. ಹಾಗಾಗಿ, ಸಭೆ ಕರೆಯಲಾಗಿತ್ತು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ್ದೆವು. ಆ ವರದಿಗೆ ನನ್ನ ನೇತೃತ್ವದ ಸರಕಾರ ಒಪ್ಪಿಗೆಯನ್ನು ನೀಡಿತ್ತು. ಈ ವರದಿ ಅನುಷ್ಠಾನಕ್ಕೆ ತರಬೇಕೆಂದು ನಾಯಕ ಸಮುದಾಯದ ಪೂಜ್ಯ ಶ್ರೀಗಳು ಸುಧೀರ್ಘ ಕಾಲದಿಂದ ಧರಣಿ ಮಾಡಿದ್ದಾರೆ. ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ವ ಪಕ್ಷದ ಸಭೆ ಕರೆದಿದ್ದು, ಸರ್ವ ಪಕ್ಷಗಳೂ ಈ ಬಗ್ಗೆ ಸರಕಾರಕ್ಕೆ ಸಲಹೆ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
Breaking; ಎಸ್ಸಿ/ ಎಸ್ಟಿ ಮೀಸಲಾತಿ ಹೆಚ್ಚಳ, ಬಸವರಾಜ ಬೊಮ್ಮಾಯಿ

ನಾಗಮೋಹನ್ ದಾಸ್ ವರದಿಯ ಕುರಿತು ಕ್ರಮಕ್ಕೆ ಸೂಚನೆ
ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಇದರ ಪ್ರಮುಖ ವಿಷಯ ಇದ್ದರೂ, ದೇಶದ ಹಲವಾರು ರಾಜ್ಯದಲ್ಲಿ ಇರುವ ಹಲವಾರು ಸಣ್ಣ ಪುಟ್ಟ ಸಮಾಜದವರು ಇದ್ದಾರೆ. 75 ವರ್ಷದಲ್ಲಿ ಎಂದೂ ಮೀಸಲಾತಿ ಕಾಣದೆ ಇರುವ ಆನೇಕ ಸಮುದಾಯಗಳು ಇವೆ. ಅದರ ಜತೆಗೆ ಒಳ ಮೀಸಲಾತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. 2005 ರಲ್ಲಿ ಒಳ ಮೀಸಲಾತಿ ವಿಚಾರವಾಗಿ ಸಮಿತಿ ರಚನೆ ಮಾಡಿತ್ತು. ಆಗಿನ ಸರ್ಕಾರ ಆ ವರದಿ ಕೊಟ್ಟು ಹತ್ತು ವರ್ಷಗಳಾಗಿವೆ. ಇನ್ನೂ ಅದರ ಕಾರ್ಯಗತವಾಗಿಲ್ಲ. ಆದರೆ, ಅದಕ್ಕೆ ಕೋಟ್ಯಾಂತರ ರೂ. ಹಣ ಖರ್ಚಾಗಿದೆ. ಇದರ ಬಗ್ಗೆಯೂ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.

ಭಾಷಾವಾರು ಪರೀಕ್ಷೆಗೆ ಅವಕಾಶ ಅಗತ್ಯ
ಕೇಂದ್ರ ಸರಕಾರದಿಂದ 20 ಸಾವಿರ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೇವಲ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗುತ್ತಿದೆ.
ಆಯಾ ರಾಜ್ಯದಲ್ಲಿ ಭಾಷಾವಾರು ಪರೀಕ್ಷೆಗೆ ಅವಕಾಶ ನೀಡಬೇಕು. ಯುಪಿಎಸ್ಸಿ ಮಾದರಿಯಲ್ಲೇ ಅವಕಾಶ ನೀಡಬೇಕು. ಈ ಕೂಡಲೇ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇನ್ನೆರಡು ದಿನಗಳಲ್ಲಿ ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಬೆಂಗಳೂರಿನ ಸಮಸ್ಯೆ ಅನಾವರಣ
ಜನತಾಮಿತ್ರದ ಸಮಾರೋಪ ಸಮಾರಂಭ ಮಳೆಯಿಂದಾಗಿ ಮೂರು ಬಾರಿ ಮುಂದೂಡಲ್ಪಟ್ಟಿತ್ತು. ಶನಿವಾರ ಮಧ್ಯಾಹ್ನ 3 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಮೂಲಕ ಬೆಂಗಳೂರಿನ ಸಮಸ್ಯೆ ಅನಾವರಣವಾಗಲಿದೆ. ಸಾವಿರಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಯ ನೀಲಿ ನಕ್ಷೆ ಸಭೆಯಲ್ಲಿ ಅನಾವರಣವಾಗಲಿದೆ ಎಂದು ತಿಳಿಸಿದರು.

ಒಂದು ಲಕ್ಷ ಕಾರ್ಯಕರ್ತರು ಭಾಗಿ
ಸಮಾವೇಶದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಒಂದು ಲಕ್ಷ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಶಿಕ್ಷಣದ ಕುರಿತಂತೆ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಗರದಲ್ಲಿ ನಡೆದ ಜನತಾಮಿತ್ರ ಯಾತ್ರೆ ವೇಳೆ ಕೆರೆ, ಶಿಕ್ಷಣ, ಆರೋಗ್ಯ, ರಸ್ತೆ, ಒತ್ತುವರಿ ಕುರಿತಂತೆ ಮಾಹಿತಿ ನೀಡಿದ್ದಾರೆ. ಉಚಿತ ಶಿಕ್ಷಣದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ ಎಂದು ಹೇಳಿದರು.