ಚುನಾವಣೆಗೆ ಸಜ್ಜಾಗುತ್ತಿರುವ ನಿಖಿಲ್ ಗೆ ತಾತನಿಂದ ರಾಜಕೀಯ ಪಾಠ: ಏನಿದು ದೊಡ್ಡಗೌಡರ ಲೆಕ್ಕಾಚಾರ?
ವಿಧಾನಸಭಾ ಚುನಾವಣಾ ತಯಾರಿಯಲ್ಲಿರುವ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಮಾರ್ಗದರ್ಶನ ಮಾಡಿದ ದೇವೇಗೌಡರು.
ಬೆಂಗಳೂರು,ಮಾರ್ಚ್17: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದ, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದ ನಡುವೆ ಗೆಲುವಿಗಾಗಿ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
ಇನ್ನೂಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯಾದ್ಯಂತ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಯನ್ನ ನಡೆಸುತ್ತಿದ್ದು 93 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ದಳಪತಿಗಳು ಭರ್ಜರಿ ತಯಾರಿ ನಡೆಸಿದ್ದಾರೆ.

ಇತ್ತ ಪುತ್ರ ರಾಜಕೀಯ ಭವಿಷ್ಯಕ್ಕಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ದು, ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರನ್ನು ಭೇಟಿಯಾಗಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಅಜ್ಜನ ಆರೋಗ್ಯ ವಿಚರಿಸಿ, ಕೆಲ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಮೊಮ್ಮಗನಿಗೆ ದೇವೇಗೌಡರು ರಾಜಕೀಯ ಪಾಠ ಮಾಡಿದ್ದಾರೆ. ಕಳೆದ 2019 ರ ಲೋಕಸಭಾ ಚುನಾವಣೆಯ ವೇಳೆ ಮಂಡ್ಯದಲ್ಲಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ದೇವೇಗೌಡು ರಾಜಕೀಯ ಲೆಕ್ಕಾಚಾರ, ಕ್ಷೇತ್ರದಲ್ಲಿ ಗೆಲುವಿಗಾಗಿ ತಂತ್ರ ಪ್ರತಿತಂತ್ರಗಳನ್ನ ಹೇಗೆ ಹೆಣೆಯಬೇಕು? ರಾಜಕೀಯ ಪಟ್ಟು, ಒಳಸುಳಿವುಗಳು ಹೇಗೆಲ್ಲ ಇರುತ್ತವೆ ಅನ್ನೋದ್ರ ಬಗ್ಗೆ ದೇವೇಗೌಡರು ಪಾಠ ಮಾಡಿದ್ದಾರೆ.

ಇನ್ನೂ 1994ರಲ್ಲಿ ರಾಮನಗರದಿಂದ ದೇವೇಗೌಡರು ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿದ್ದರು.ಅಲ್ಲದೇ ರಾಮನಗರ ಕ್ಷೇತ್ರದ ಪ್ರತಿಯೊಂದು ವಿಚಾರವನ್ನ ತಿಳಿದುಕೊಂಡಿರುವ ದೇವೇಗೌಡು ವಿಧಾನಸಭೆಯಲ್ಲಿ ಗೆಲ್ಲುವುದರ ಬಗ್ಗೆ ಕೆಲವೊಂದು ಟಿಪ್ಸ್ ಕೊಟ್ಟಿದ್ದಾರೆ.
ಇನ್ನೂ ರಾಜಕಾರಣ ಅಂದ್ರೆ ಅನ್ಯ ಪಕ್ಷಗಳ ಆರೋಪ ಪ್ರತ್ಯಾರೋಪಗಳು ಸಹಜ. ಹೀಗಾಗಿ ಯಾರ ವಿರುದ್ಧ ಮಾತನಾಡಬೇಡ. ನಿನ್ನ ಪಾಡಿಗೆ ನೀನು ಕೈಲಾದ ಕೆಲಸ ಮಾಡಿಕೊಂಡು ಹೋಗು. ಜನ ಅವರಾಗಿಯೇ ನಿನ್ನ ಇಷ್ಟ ಪಡಬೇಕು. ಸೋಲಿಸಿದರೂ ನಮ್ಮ ಜೊತೆಗಿದ್ದು ಕಷ್ಟ ಸುಖಕ್ಕೆ ಸ್ಪಂದಿಸಿದ ಅನ್ನಬೇಕು. ಹಾಗೆ ಕೆಲಸ ಮಾಡಬೇಕು ಅದಕ್ಕೆ ಬದ್ಧತೆ ಇರಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಬೇಕು. ಕೆಲವರು ಪಕ್ಷ ದೇವೇಗೌಡರ ಕುಟುಂಬದ ಆಸ್ತಿ ಅಂತಾರೆ. ಪ್ರಾದೇಶಿಕ ಪಕ್ಷ ಉಳಿಯಬೇಕು. ಕುಟುಂಬದ ಆಸ್ತಿ ಅಲ್ಲ ರಾಜ್ಯದ ಹಿತ ಮುಖ್ಯವಾಗುತ್ತದೆ. ಪಕ್ಷದ ಸಂಘಟನೆಗೆ ಕೈ ಜೋಡಿಸಿ, ಪಕ್ಷವನ್ನ ಬೆಳೆಸುವ ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆ.
ಎರಡನೇ ಪಟ್ಟಿ ಟಿಕೆಟ್ ಘೋಷಣೆಗೆ ಜೆಡಿಎಸ್ ಸಂಪೂರ್ಣ ಸಿದ್ದ
ಈಗಾಗಲೇ 93 ಅಭ್ಯರ್ಥಿಗಳ ಮೊದಲದ ಪಟ್ಟಿ ಬಿಡುಗಡೆ ಮಾಡಿರುವ ದಳಪತಿಗಳು ಎರಡನೇ ಪಟ್ಟಿ ಟಿಕೆಟ್ ಘೋಷಣೆಗೆ ಸಂಪೂರ್ಣ ಸಿದ್ದವಾಗಿದ್ದು, ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸರ್ವೆ ನಡೆಸಿ, ಜಿಲ್ಲಾ ಮಟ್ಟದಲ್ಲಿ ವರದಿ ಪಡೆದು ಅಭ್ಯರ್ಥಿ ಫೈನಲ್ ಮಾಡಿದೆ. ಹಳೇ ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಣೆ ಮಾಡಿದೆ.
224 ಕ್ಷೇತ್ರಗಳ ಪೈಕಿ 93 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಜೆಡಿಎಸ್, ಎರಡನೇ ಪಟ್ಟಿ ಟಿಕೆಟ್ ಘೋಷಣೆಗೆ ಜಾಣ ನಡೆಯನ್ನ ಅನುಸರಿಸುತ್ತಿದೆ.ಈಗಾಗಲೇ ಬಿಜೆಪಿ, ಕಾಂಗ್ರೆಸ್ ಪಟ್ಟಿ ಫೈನಲ್ ಹಂತಕ್ಕೆ ಬಂದಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಬಿಡುಗಡೆಯ ಬಳಿಕ ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಲು ದಳಪತಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications