ಸರ್ಕಾರಿ ನೌಕರರ ವಿರುದ್ಧ ಕಿಡಿ, ವಯೋವೃದ್ಧರಿಗೆ ನೆರವಾದ ಹೈಕೋರ್ಟ್‌

ಬೆಂಗಳೂರು, ನವೆಂಬರ್ 16: ಸಂವೇದನೆ ಇಲ್ಲದ ಸರ್ಕಾರಿ ಅಧಿಕಾರಿಗಳು ನಿಯಮಗಳ ಕಟ್ಟುನಿಟ್ಟಿನ ಜಾರಿ ಹೆಸರಿನಲ್ಲಿ ವಯೋವೃದ್ಧರೊಬ್ಬರು ತಂದೆಯ ವೇತನಕ್ಕಾಗಿ ನ್ಯಾಯಾಂಗ ಹೋರಾಟ ಮಾಡಬೇಕಾದ ಅನಿವಾರ್ಯತೆಯ ಸೃಷ್ಟಿಸಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಕಿಡಿ ಕಾರಿದೆ.

ಅಲ್ಲದೆ, ಅರ್ಜಿದಾರರ ತಂದೆ ಗ್ರಾಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಕ್ಕೆ 73 ಸಾವಿರ ರೂ. ಬಾಕಿ ವೇತನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ. ತಂದೆಯ ವೇತನ ಪಡೆಯಲು 88 ವರ್ಷದ ವೃದ್ಧ ದಶಕಗಳ ಕಾಲ ಹೋರಾಟ ಮಾಡುವಂತೆ ಮಾಡಿರುವುದು ಅಧಿಕಾರಿಶಾಹಿಯ ಅನಗತ್ಯ ನಿಯಮಗಳ ಜಾರಿಗೆ ಉತ್ತಮ ನಿರ್ದಶನವಾಗಿದೆ ಎಂದೂ ನ್ಯಾಯಾಲಯು ಹೇಳಿದೆ.

HC Taken Task To Government Officials For Insensitive Attitude

ತಂದೆಯ ಬಾಕಿ ವೇತನ ಬಿಡುಗಡೆಗೆ ನಿರ್ದೇಶನ ನೀಡುವಂತೆ ಕೋರಿ ಸುಮಾರು 88 ವರ್ಷದ ರಾಜಾಜಿನಗರದ ನಿವಾಸಿ ಟಿ. ಎಸ್. ರಾಜನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಸ್. ದಿನೇಶ್‌ ಕುಮಾರ್ ಮತ್ತು ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಸಮರ್ಥನೀಯವಲ್ಲ: ಅನುಕಂಪದ ಭತ್ಯೆ ಮಂಜೂರು ಮಾಡದ ಕಾರಣ ನೀಡಿ ಅರ್ಜಿದಾರರ ತಂದೆ ಪರಿಹಾರ ಪಡೆಯುವುದುಕ್ಕೆ ಅರ್ಹರಲ್ಲ ಎಂದು ತಿಳಿಸಿರುವುದು ಸಮರ್ಥನೀಯವಲ್ಲ. ಈ ವಿಚಾರದಲ್ಲಿ ಸರ್ಕಾರಿ ಅಧಿಕಾರಿಗಳು ತೆಗೆದುಕೊಂಡಿರುವ ನಿಲುವು ಆಶ್ಚರ್ಯಕರವಾಗಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರ ತಂದೆ ತಂಗಲಿ ಗ್ರಾಮದಲ್ಲಿ ಪಟೇಲ್ ಆಗಿ ಸೇವೆ ಸಲ್ಲಿಸದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಎದುರಾಗಿಲ್ಲ. ಆದರೆ, ತಾತ್ಕಾಲಿಕ ಪರಿಹಾರ ಪಡೆದಿಲ್ಲ ಎಂಬ ಕಾರಣ ನೀಡಿ ಅನುಕಂಪದ ಭತ್ಯೆ ನಿರಾಕರಿಸುವುದಕ್ಕೆ ಸಾಧ್ಯವಿಲ್ಲ. ಸರ್ಕಾರದ ಈ ನಿರ್ಧಾರ ಸಂಪೂರ್ಣ ಅಸಮರ್ಥನೀಯ ಎಂದು ಪೀಠ ತಿಳಿಸಿದೆ.

ಅಲ್ಲದೆ, 1979 ರಿಂದ 1990 ರವರೆಗೆ ಪಟೇಲ್ ಹುದ್ದೆಯಲ್ಲಿರುವವರಿಗೆ ಸರ್ಕಾರ 100 ರೂ.ಗಳಂತೆ ಪರಿಗಣಿಸಬೇಕು. ಜತೆಗೆ ತಾತ್ಕಾಲಿಕ ಪರಿಹಾರವನ್ನು ಲೆಕ್ಕಹಾಕಿ ಪಾವತಿಸಬೇಕು. ಜತೆಗೆ, 1990 ರಿಂದ 94 ರ ವರೆಗಿನ ಭತ್ಯೆ ಮತ್ತು ಬಾಕಿ ಮೊತ್ತವನ್ನು ತಿಂಗಳಿಗೆ 500 ರೂ.ಗಳನ್ನು ಪಾವತಿ ಮಾಡಬೇಕು. ಒಟ್ಟು ಮೊತ್ತಕ್ಕೆ ಶೇ.10ರ ಸರಳ ಬಡ್ಡಿಯಿಂದಿಗೆ ಮುಂದಿನ ಮೂರು ತಿಂಗಳಲ್ಲಿ ಪಾವತಿ ಮಾಡಲು ಕೋರ್ಟ್ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರ ಟಿ. ಎಸ್. ರಾಜನ್ ಅವರ ತಂದೆ ಶೇಷಾದ್ರಿ ಅಯ್ಯಂಗಾರ್ ಅವರು ಚಿಕ್ಕಮಗಳೂರಿನ ಕಡೂರು ತಾಲೂಕಿನ ತಂಗಲಿ ಎಂಬ ಗ್ರಾಮದಲ್ಲಿ 1979 ರಿಂದ 1990ರ ಅವಧಿಯಲ್ಲಿ ಪಟೇಲ್ ಆಗಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ರಾಜ್ಯ ಪಟೇಲ್ಸ್ ಸಂಘ ಮತ್ತು ರಾಜ್ಯ ಸರ್ಕಾರ ಪ್ರಕರಣದಲ್ಲಿ ರಾಜ್ಯ ಸರ್ಕಾರ ನೀಡಿದ್ದ ಆದೇಶದನ್ವಯ ಶೇಷಾದ್ರಿ ಅಯ್ಯಂಗಾರ್ ಅವರು ರಾಜ್ಯ ಸರ್ಕಾರ ನೀಡುವ ಅನುಕಂಪದ ಭತ್ಯೆಗೆ ಅರ್ಹರಾಗಿದ್ದರು.

ಈ ಹಿನ್ನೆಲೆಯಲ್ಲಿ ಅಯ್ಯಂಗಾರ್ ಅವರು ತನ್ನ ಮಾಸಿಕ 100 ರೂ.ಗಳಂತೆ ಭತ್ಯೆ ಬಿಡುಗಡೆಗೆ ಕೋರಿ ಹಲವು ಬಾರಿ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ನಡುವೆ ಅಯ್ಯಾಂಗರ್ ಮೃತಪಟ್ಟಿದ್ದರು.

ಬಳಿಕ ಅವರ ಮಗ ಅರ್ಜಿದಾರ ರಾಜನ್ ಕಡೂರಿನ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ್ದ ಅಧಿಕಾರಿಗಳು ಅಯ್ಯಂಗಾರ್ ತಾತ್ಕಾಲಿಕ ಪರಿಹಾರವನ್ನು ಪಡೆದುಕೊಂಡಿಲ್ಲ. ಹೀಗಾಗಿ ಅನುಕಂಪದ ಭತ್ಯೆ ಪಡೆಯುವುದಕ್ಕೆ ಅರ್ಹರಲ್ಲ ಎಂದು ಹಿಂಬರಹ ನೀಡಿದ್ದರು.

ಇದನ್ನು ಪ್ರಶ್ನಿಸಿ ರಾಜನ್ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+