ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆಗೆ ಲೈಸನ್ಸ್-ಸರ್ಕಾರಕ್ಕೆ ಅಧಿಕಾರವೆಲ್ಲಿದೆ?- ಹೈಕೋರ್ಟ್
ಬೆಂಗಳೂರು. ಜೂ.9: ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿ ವರ್ಧಕಗಳ ಬಗೆ ಯಾವ ಆಧಾರದಲ್ಲಿ, ಯಾವ ಕಾನೂನಿನಡಿ ಲೈಸನ್ಸ್ ನೀಡಲಾಗುತ್ತಿದೆ, ಅದಕ್ಕೆ ಅಧಿಕಾರವೆಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದರೊಂದಿಗೆ ರಾಜ್ಯದಲ್ಲಿ ಮಸೀದಿ, ದೇವಾಲಯಗಳಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತಂತೆ ನಡೆಯುತ್ತಿರುವ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ.
ರಾಜ್ಯದಲ್ಲಿ ಶಬ್ಧ ಮಾಲಿನ್ಯ ನಿಯಂತ್ರಣ ಕಾಯಿದೆ ಕಟ್ಟುನಿಟ್ಟಿನ ಜಾರಿ ಮತ್ತು ನಗರದಲ್ಲಿ ಮಸೀದಿಗಳು ಧ್ವನಿ ವರ್ಧಕ ಬಳಸಿ ಶಬ್ಧ ಮಾಲಿನ್ಯ ಉಂಟಾಗುತ್ತಿರುವ ಕುರಿತು ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಪೊಲೀಸರು ಲೌಡ್ ಸ್ಪೀಕರ್ ಗೆ ಅನುಮತಿ ನೀಡುತ್ತಿದ್ದಾರೆ.ಹಬ್ಬ ಹರಿದಿನಗಳಲ್ಲಿ ಸೀಮಿತ ಅವಧಿಗೆ ನೀಡಬಹುದು. ಆದರೆ ಅವ್ಯಾಹತವಾಗಿ ಸರ್ಕಾರ ಅನುಮತಿ ನೀಡುತ್ತಿದೆ. ಕೆಲವು ಮಸೀದಿಗಳಲ್ಲಿ ಈಗಲೂ ಲೌಡ್ ಸ್ಪೀಕರ್ ಬಳಸಲಾಗುತ್ತಿದೆ ಎಂದು ನ್ಯಾಯಪೀಠದ ಗಮನ ಸೆಳೆದರು.

ಕಾನೂನಿನಡಿ ಧ್ವನಿವರ್ಧಕಗಳಿಗೆ ಅನುಮತಿ ನೀಡುತ್ತಿದ್ದೀರಿ
ಅದಕ್ಕೆ ನ್ಯಾಯಪೀಠ, ಯಾವ ಕಾನೂನಿನಡಿ ಧ್ವನಿವರ್ಧಕಗಳಿಗೆ ಅನುಮತಿ ನೀಡುತ್ತಿದ್ದೀರಿ? ಲೌಡ್ ಸ್ಪೀಕರ್ಗೆ ಯಾವ ನಿಯಂತ್ರಣ ವಿಧಿಸಲಾಗಿದೆ? ಶಬ್ದ ಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಲಾಗಿದೆಯೇ? ಶಾಶ್ವತ ಅನುಮತಿ ನೀಡಲು ಕಾನೂನಿನಡಿ ಅನುಮತಿ ಇದೆಯೇ? ಯಾವ ಅಧಿಕಾರಿಗಳಿಗೆ ಲೈಸೆನ್ಸ್ ನೀಡುವ ಅಧಿಕಾರ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಸರ್ಕಾರಕ್ಕೆ ಸೂಚನೆ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.
ಅಲ್ಲದೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ, ಧ್ವನಿ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಬೇಕಲ್ಲ. ಅದು ಮೂಕಪ್ರೇಕ್ಷಕನಂತೆ ಕೆಲಸ ಮಾಡುತ್ತಿದೆಯೇ ಎಂದು ನ್ಯಾಯಪೀಠ ಕೇಳಿತು.

ಕೋರ್ಟ್ ಹಿಂದಿನ ಆದೇಶವೇನು?
2021ರ ನ.16ರಂದು ಹೈಕೋರ್ಟ್ "ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಮಾರ್ಪಡಿಸಿದ ಸೈಲೆನ್ಸರ್ಗಳನ್ನು ಬಳಸುವ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ
ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿತ್ತು.
"ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಮಾರ್ಪಡಿಸಿದ ಸೈಲೆನ್ಸರ್ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ. ಅದನ್ನು ತಡೆಯಲು ಮತ್ತು ಅಂತಹ ವಾಹನಗಳನ್ನು ಗುರುತಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಶಬ್ದ ಮಾಲಿನ್ಯ ಉಂಟು ಮಾಡುವ ರಾತ್ರಿ ಕ್ಲಬ್ ಗಳು ಮತ್ತು ಇತರೆ ಸಂಸ್ಥೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು'' ಎಂದು ಸರಕಾರ ಮತ್ತು ಪೊಲೀಸ್ ಇಲಾಖೆಗೆ ನ್ಯಾಯಪೀಠ ನಿರ್ದೇಶಿಸಿತು.

ಸರ್ಕಾರ ಏನು ಮಾಡುತ್ತಿದೆ?
ಸರ್ಕಾರ ಏನು ಮಾಡುತ್ತಿದೆ? ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳು ಮಾರ್ಪಡಿಸಿದ ಸೈಲೆನ್ಸರ್ಗಳ ಬಳಸುವುದರಿಂದ ಹೆಚ್ಚು ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಸಾರಿಗೆ ಇಲಾಖೆ ನಿಗದಿಪಡಿಸಿದ ನಿಯಮಗಳ ಅನುಸಾರ ಈ ಸೈಲೆನ್ಸರ್ಗಳನ್ನು ಅಳವಡಿಸಿರುವುದಿಲ್ಲ. ಪರಿಸ್ಥಿತಿ ಹೀಗಿದ್ದರೂ ಸರ್ಕಾರ ಏನು ಮಾಡುತ್ತಿದೆ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.
"ಈ ದುರಂತವನ್ನು ತಪ್ಪಿಸಲು ಸರಕಾರ ಏನೂ ಕ್ರಮ ಕೈಗೊಂಡಂತಿಲ್ಲ. ಯಾವುದಾದರೂ ರಸ್ತೆಯ ಪಕ್ಕದಲ್ಲಿ ವಾಸ ಮಾಡಿದರೆ, ಶಬ್ದ ಮಾಲಿನ್ಯದ ಕಿರಿಕಿರಿ ಹೇಗಿರುತ್ತದೆ ಎಂಬುದು ನಿಮಗೆ (ಸರಕಾರಕ್ಕೆ) ತಿಳಿಯುತ್ತದೆ. ಶಬ್ಧ ಮಾಲಿನ್ಯ ಉಂಟುಮಾಡುತ್ತಿರುವ ವಾಹನಗಳನ್ನು ಗುರುತಿಸಲು ಸಂಬಂಧಪಟ್ಟ ಪ್ರಾಧಿಕಾರಗಳು ಕಾರ್ಯಾಚರಣೆ ನಡೆಸಬೇಕು. ಅಂತಹ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು'' ಎಂದು ಮೌಖಿಕ ಆದೇಶ ನೀಡಿತು.

ಧ್ವನಿವರ್ಧಕಗಳಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ
ಅಲ್ಲದೆ, ಧ್ವನಿವರ್ಧಕಗಳಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ತಡೆಯಬೇಕು. ಧ್ವನಿವರ್ಧಕಗಳನ್ನು ನಿರಂತರವಾಗಿ ಶಾಶ್ವತವಾಗಿ ಬಳಸಲು ಅವಕಾಶ ಮಾಡಿಕೊಡಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ನಗರದ 15 ಮಸೀದಿಗಳು ಧ್ವನಿ ವರ್ಧಕಗಳನ್ನು ಬಳಸಲು ಯಾವ ಕಾನೂನಿನ ಅಡಿ ಅವಕಾಶ ಮಾಡಿಕೊಡಲಾಗಿದೆ. ಶಬ್ದ ಮಾಲಿನ್ಯ ಉಂಟು ಮಾಡುವ ಧ್ವನಿವರ್ಧಕಗಳನ್ನು ಬಳಸಲು ನಿರ್ಬಂಧ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡುವಂತೆ ಇದೇ ವೇಳೆ ಸರಕಾರಕ್ಕೆ ಸೂಚಿಸಿತು.












Click it and Unblock the Notifications