ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ಗೆ ಕಾನೂನು ಹೋರಾಟದಲ್ಲಿ ಗೆಲುವು
ಬೆಂಗಳೂರು, ಜೂನ್ 30: ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ತಮ್ಮ ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್ ಸಂಸ್ಥೆ ಪರವಾಗಿ ನಡೆಸಿದ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಟ್ರಸ್ಟ್ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ 2010ರಡಿ ನೀಡಲಾಗಿದ್ದ ನೋಂದಣಿ ಪ್ರಮಾಣ ಪತ್ರವನ್ನು ಟ್ರಸ್ಟ್ ವಾದ ಆಲಿಸಿದೆ ರದ್ದುಗೊಳಿಸಿದ್ದ ಕೇಂದ್ರ ಗೃಹ ಇಲಾಖೆ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಟ್ರಸ್ಟ್ ಪರವಾಗಿ ಉಲ್ಲಾಸ್ ಕಾರಂತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಹಾಗಾಗಿ ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿರುವ ಸಂಸ್ಥೆ ಮುಂದುವರಿಕೆಗೆ ನ್ಯಾಯಾಲಯದ ಹಸಿರು ನಿಶಾನೆ ಸಿಕ್ಕಿದೆ.

ಹೈಕೋರ್ಟ್ ಆದೇಶವೇನಿದೆ?: ನೋಂದಣಿ ಪತ್ರವನ್ನು ರದ್ದುಗೊಳಿಸುವುದಕ್ಕೂ ಮುನ್ನ ಪ್ರತಿವಾದಿಗಳ ಅಭಿಪ್ರಾಯವನ್ನು ಕೇಳಬೇಕು ಎಂಬುದಾಗಿ ಕಾಯಿದೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಶೋಕಾಸ್ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಬದಲಿಗೆ ಅವರ ಮನವಿ ಆಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಪೀಠ ತಿಳಿಸಿದೆ.
ವಿದೇಶ ದೇಣಿಗೆ ನಿಯಂತ್ರಣ ಕಾಯದೆ 2010ರ ಸೆಕ್ಷನ್ 14(3)ರ ಪ್ರಕಾರ ಒಂದು ಬಾರಿ ನೋಂದಣಿ ಪತ್ರ ರದ್ದಾದಲ್ಲಿ ಬಳಿಕ ಮೂರು ವರ್ಷಗಳ ಕಾಲ ಅದನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಹೇಳಲಾಗಿದೆ. ಹೀಗಾಗಿ ಗಂಭೀರವಾದ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ. ಆದ್ದರಿಂದ ಸೆಕ್ಷನ್ 14(2)ರ ಪ್ರಕಾರ ಪ್ರತಿವಾದಿಗಳ ಅಭಿಪ್ರಾಯವನ್ನು ಆಲಿಸಬೇಕು ಎಂಬ ನೈಸರ್ಗಿಕ ನ್ಯಾಯದ ಅಂಶವನ್ನು ಪರಿಗಣಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಅರ್ಜಿದಾರರ ವಾದವನ್ನು ಆಲಿಸದೆ ನೀಡಿರುವ ಆದೇಶವು ಸಮರ್ಥನೀಯವಲ್ಲ ಎಂದು ತಿಳಿಸಿರುವ ಪೀಠ, ನೋಂದಣಿ ರದ್ದುಪಡಿಸಿರುವ ಕೇಂದ್ರ ಗೃಹ ಇಲಾಖೆಯ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಆದರೆ, ಕಾನೂನಿನ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಕೇಂದ್ರಕ್ಕೆ ಸ್ವಾತಂತ್ರ್ಯವಿರಲಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್ ವನ್ಯಜೀವಿಗಳು, ನೈಸರ್ಗಿಕ ಆವಾಸ ಸ್ಥಾನಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಶ್ರಮಿಸುತ್ತಿದೆ. ಅಲ್ಲದೆ, ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಪರಿಸರ ವ್ಯವಸ್ಥೆ ಮತ್ತು ಸಸ್ಯಗಳ ಪುನರ್ವಸತಿ ಯೋಜನೆಗಳು ಕೈಗೊಳ್ಳುತ್ತಿದ್ದು, ಈ ಟ್ರಸ್ಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಟ್ರಸ್ಟ್ನ ನಿರ್ವಹಣೆಗಾಗಿ ವಿದೇಶಿ ದೇಣಿಗೆ ನಿಯಂತ್ರಣ ಕಾಯದೆ 2010ರ ಅಡಿಯಲ್ಲಿ ನೋಂದಾಯಿಸಿದೆ.
ಆದರೆ, ಟ್ರಸ್ಟ್ನಗೆ ಬರುವ ದೇಣಿಗೆಗಳನ್ನು ಸ್ವೀಕರಿಸುವುದು ಮತ್ತು ನಿರ್ವಹಣೆ ಮಾಡುವ ಸಲುವಾಗಿ ಪ್ರಾರಂಭಿಸಿದ್ದ ಬ್ಯಾಂಕ್ ಖಾತೆ ಬದಲಾವಣೆಗಾಗಿ ಅನುಮತಿ ಕೇಳಿ 2011ರಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಟ್ರಸ್ಟ್ಗೆ ಬರುತ್ತಿರುವ ದೇಣಿಗೆಯಲ್ಲಿ ಶೇ.10 ರಷ್ಟು ಹಣವನ್ನು ಕಚೇರಿ ವೆಚ್ಚಗಳಿಗಾಗಿ ವಿನಿಯೋಗಿಸಲು ಪ್ರತ್ಯೇಕ ಖಾತೆ ನಿರ್ವಹಣೆ ಮಾಡುತ್ತಿರುವುದಾಗಿ ಟ್ರಸ್ಟ್ ತಿಳಿಸಿತ್ತು.
ಆದರೆ, ವಿದೇಶಿ ದೇಣಿಗೆ ದುರುಪಯೋಗದ ಆರೋಪದಲ್ಲಿ ಕೇಂದ್ರ ಸರ್ಕಾರ 2021ರ ಮಾರ್ಚ್ 21ರಂದು ಟ್ರಸ್ಟ್ ಅನ್ನು ಆರು ತಿಂಗಳ ಅವಧಿಗೆ ಅಮಾನತ್ತು ಮಾಡಿ ಆದೇಶಿಸಲಾಗಿತ್ತು. ಈ ಆದೇಶಕ್ಕೆ ಪ್ರತಿಯಾಗಿ ಅರ್ಜಿದಾರರ ವಿವರವಾದ ಪ್ರತಿಕ್ರಿಯೆಯನ್ನು ನೀಡಿದ್ದರು.
ಬಳಿಕ ಕೇಂದ್ರ ಸರ್ಕಾರ ಟ್ರಸ್ಟ್ನ ನೋಂದಣಿಯನ್ನು ಏಕೆ ರದ್ದುಗೊಳಿಸಬಾರದು? ಎಂದು ಕಾರಣ ಕೇಳಿ ಅರ್ಜಿದಾರ ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಕುರಿತು ಟ್ರಸ್ಟ್ ಸುದೀರ್ಘ ಉತ್ತರ ನೀಡಿದ್ದರೂ ಪರಿಗಣಿಸದೇ ಟ್ರಸ್ಟ್ನ ನೋಂದಣಿಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.












Click it and Unblock the Notifications