ಕರ್ನಾಟಕ -ತಮಿಳುನಾಡು ನಡುವೆ ಸರ್ಕಾರಿ ಸಾರಿಗೆ ಇಲ್ಲ
ಬೆಂಗಳೂರು, ಅ.7:: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅತ್ತ ತಮಿಳುನಾಡಿನಲ್ಲೂ ಇದೇ ಕ್ರಮ ಕೈಗೊಂಡಿದ್ದು, ಅಲ್ಲಿಂದಲೂ ಇತ್ತ ಕಡೆ ಬಸ್ ಗಳು ಸಂಚರಿಸುತ್ತಿಲ್ಲ. ಸುಮಾರು 700ಕ್ಕೂ ಅಧಿಕ ಬಸ್ ಗಳ ಸಂಚಾರ ಸದ್ಯಕ್ಕೆ ಸ್ಥಗಿತಗೊಂಡಿದೆ.
ಬುಧವಾರ ಮಧ್ಯಾಹ್ನದವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದ್ದು, ನಂತರ ಉಭಯ ರಾಜ್ಯಗಳಲ್ಲಿನ ಸ್ಥಿತಿ ಗತಿ ನೋಡಿಕೊಂಡು ಸಂಚಾರ ಸುಗುಮಗೊಳಿಸಲಾಗುವುದು ಎಂದು ಸರ್ಕಾರಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
ಸೆ.27ರಂದು ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾಗೆ ನಾಲ್ಕು ವರ್ಷಗಳ ಶಿಕ್ಷೆ ಪ್ರಕಟಿಸಿದ ಸಂದರ್ಭದಲ್ಲೂ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಗಡಿಭಾಗದ ಅತ್ತಿಬೆಲೆವರೆಗೆ ಮಾತ್ರ ಬಸ್ ಸಂಚಾರ ಸಾಧ್ಯವಿತ್ತು. ಮಂಗಳವಾರ ಜಯಲಲಿತಾ ಜಾಮೀನು ಅರ್ಜಿ ವಜಾವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಮುಂಗಡ ಟಿಕೆಟ್ ಪಡೆದುಕೊಂಡಿದ್ದ ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಮರಳಿಸುವುದಕ್ಕೂ ನಿರ್ಧಾರ ಕೈಗೊಳ್ಳಲಾಗಿದೆ.ತಮಿಳುನಾಡಿನ ಪರಿಸ್ಥಿತಿಯನ್ನು ಅರಿತು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. [ಜಯಾ ಜಾಮೀನು ಅರ್ಜಿ ವಜಾಕ್ಕೆ ಕಾರಣವೇನು?]

ಬಸ್ ಸಂಚಾರದ ಜೊತೆಗೆ ತಮಿಳುನಾಡಿಗೆ ತೆರಳುತ್ತಿದ್ದ ಮತ್ತು ಅಲ್ಲಿಂದ ಬರುತ್ತಿದ್ದ ಸರಕು ಸಾಗಣೆ ಲಾರಿಗಳು ಸಂಚಾರ ಸಹ ಸ್ಥಗಿತಗೊಂಡಿದೆ. ಅತ್ತ ನೆರೆ ರಾಜ್ಯ ಕೇರಳ ಕೂಡಾ ತನ್ನ 100ಕ್ಕೂ ಅಧಿಕ ಅಂತರ್ ರಾಜ್ಯ ಸಾರಿಗೆ ಬಸ್ ಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲು ಯೋಚಿಸುತ್ತಿದೆ. ಇತ್ತ ಆಂಧ್ರಪ್ರದೇಶದಿಂದ ಯಾವುದೇ ಸುದ್ದಿ ಬಂದಿಲ್ಲ. ಸದ್ಯಕ್ಕೆ ರೈಲು ಸಂಚಾರ ಎಂದಿನಂತೆ ಸಾಗುವ ಸೂಚನೆ ಸಿಕ್ಕಿದೆ.[ಸರ್ಕಾರಿ ಬಸ್ ಪ್ರಯಾಣ ದರ ಕಡಿತವಿಲ್ಲ]
ತಮಿಳುನಾಡಿನಲ್ಲಿ ಚೆನ್ನೈನಿಂದ ಪ್ರಮುಖ ನಗರಗಳಿಗೆ ಸಾಗುವ ತಮಿಳುನಾಡಿನ ಸರ್ಕಾರಿ ಬಸ್ ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಯಾರೂ ಬಂದ್ ಗೆ ಕರೆ ನೀಡಬಾರದು, ಶಾಂತಿ ಕಾಪಾಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಮನವಿ ಮಾಡಿದ್ದಾರೆ. [ಜಯಾ ಜಾಮೀನು ಅರ್ಜಿ, ಮಂಗಳವಾರ ಏನಾಯ್ತು?]
ಈ ಮನವಿ ಹಿಂದೆ ಕಾರಣವೂ ಇದೆ, ಸೋಮವಾರದಂದು ಸರ್ಕಾರಿ ಅದೇಶ ಹೊರಡಿಸಿ ಸುಮಾರು 12000 ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲು ಮುಂದಾಗಿದ್ದ ಪನ್ನೀರ್ ಸೆಲ್ವಂ ಅವರಿಗೆ ಅಲ್ಲಿನ ಹೈಕೋರ್ಟ್ ಛೀಮಾರಿ ಹಾಕಿತ್ತು. ಮಂಗಳವಾರ ಏನಾದರೂ ಅನರ್ಥ, ಅನಾಹುತ ಸಂಭವಿಸಿದರೆ ಇದಕ್ಕೆ ನಿಮ್ಮ ಸರ್ಕಾರವೇ ಹೊಣೆ ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿತ್ತು. ಹೀಗಾಗಿ ಸೆಲ್ವಂ ಅವರು ಕಾನೂನು ಸುವ್ಯವಸ್ಥೆ ಕಾಪಾಡಲು ಕಾಳಜಿ ವಹಿಸಿದ್ದಾರೆ.
ಇತ್ತ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಆಯಾ ರಾಜ್ಯದವರು ಇತರೆ ಭಾಷಿಕರನ್ನು ಸಂರಕ್ಷಿಸುವುದು ಆಯಾ ರಾಜ್ಯದವರ ಹೊಣೆ ಎಂದಿದ್ದಾರೆ.












Click it and Unblock the Notifications