ಪಾಕ್ ಐಎಸ್ಐಗೆ ಮಾಹಿತಿ ಸೋರಿಕೆ: ಜಿತೇಂದ್ರರ್ ಸಿಂಗ್ಗೆ ಜಾಮೀನು ನಕಾರ
ಬೆಂಗಳೂರು,ಜು.18. ಪಾಕಿಸ್ತಾನದ ಐಎಸ್ಐ ಉಗ್ರಗಾಮಿ ಸಂಘಟನೆಯೊಂದಿಗೆ ಭಾರತದ ನೌಕದಳದ ಮಾಹಿತಿ ಹಂಚಿಕೊಂಡ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಜಿತೇಂದರ್ ಸಿಂಗ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಜಿತೇಂದರ್ ಸಿಂಗ್ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಜಾಮೀನು ನೀಡಲು ನಿರಾಕರಿಸಿದೆ.
ಕೋರ್ಟ್ ಏನು ಹೇಳಿದೆ?
ನ್ಯಾಯಪೀಠ ಪ್ರಕರಣ ಗಂಭೀರ ಅಂಶಗಳನ್ನು ಗಮನಿಸಿ "ಬೆಂಗಳೂರಿನಿಂದ ಕಾರ್ಯಚರಣೆಯಲ್ಲಿದ್ದ ಪಾಕಿಸ್ತಾನ ಗುಪ್ತಚರ ದಳಕ್ಕೆ ಅರ್ಜಿದಾರ ಮಾಹಿತಿ ಹಂಚಿಕೊಂಡಿರುವುದು ದಾಖಲೆಯಿಂದ ಸ್ಪಷ್ಟವಾಗುತ್ತದೆ. ಅರ್ಜಿದಾರ ಸಂಗ್ರಹಿಸಿ ಹಂಚಿಕೊಂಡಿರುವ ಮಾಹಿತಿ ಭಾರತದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ'' ಎಂದು ಹೇಳಿದೆ.
ಜೊತೆಗೆ ದೇಶದ ಸಮಗ್ರತೆ ಹಾಗೂ ಸೌರ್ವಭೌಮತ್ವತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ''ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಾದ ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರ 2021ರ ನವೆಂಬರ್ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸರು ಅರ್ಜಿದಾರರಿಂದ ಸೇನಾ ಸಮವಸ್ತ್ರ, ವಾಟ್ಸ್ ಆ್ಯಪ್ ಸಂದೇಶ ಹಾಗೂ ಕೆಲ ಪೊಟೋ ಜಪ್ತಿ ಮಾಡಿದ್ದಾರೆ. ಫೋನ್ ಮೂಲಕ ಪಾಕಿಸ್ತಾನದ ಐಎಸ್ಐಗೆ ಸೇರಿದ ಪೂಜಾ ಮತ್ತು ನಕಾಶ್ ಎಂಬುವರನ್ನು ಸಂಪರ್ಕಿಸಿ, ಭಾರತೀಯ ಸೇನೆ, ವಾಯು ಹಾಗೂ ನೌಕದಳಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡಿದ್ದಾನೆ. ಪೊಲೀಸರು ಜಪ್ತಿ ಮಾಡಿರುವ 74 ಮೊಬೈಲ್ ಸಂದೇಶಗಳ ಪೈಕಿ 30 ಸಂದೇಶಗಳು ಪಾಕಿಸ್ತಾನದ ಗುಪ್ತದಳದ ಕಾರ್ಯನಿರ್ವಾಹಕರಿಂದ ಸ್ವೀಕರಿಸಿದ್ದಾನೆ. 24 ಸಂದೇಶಗಳು ಪಾಕಿಸ್ತಾನಕ್ಕೆ ರವಾನಿಸಿದ್ದಾನೆ. 8 ಪೋಟೋಗಳು ಸ್ವೀಕರಿಸಿದ್ದು, ಪೂಜಾಗೆ ನಾಲ್ಕು ವಿಡಿಯೋ ಕರೆ ಮಾಡಿದ್ದಾನೆ ಎಂಬುದು ದಾಖಲೆಗಳಿಂದ ತಿಳಿಯುತ್ತದೆ'' ಎಂದು ಅಭಿಪ್ರಾಯಪಟ್ಟಿದೆ.
ಆದ್ದರಿಂದ ಪಾಕಿಸ್ತಾನವು ತನ್ನ ನಲೆಯಿಂದ ಕ್ಷಿಪಣಿ ಬಳಸಿ ಭಾರತವನ್ನು ಗುರಿ ಮಾಡುವುದನ್ನು ಅಲ್ಲಗೆಳಯಲಾಗದು. ಅರ್ಜಿದಾರ ಸಂಗ್ರಹಿಸಿ ಹಂಚಿಕೊಂಡ ಮಾಹಿತಿ ಭಾರತದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ದೇಶದ ಸಮಗ್ರತೆ ಮತ್ತು ಸೌರ್ವಭೌಮತ್ವತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೋರ್ಟ್ ಹೇಳಿದೆ.
ಅಲ್ಲದೆ, ಅರ್ಜಿದಾರನಿಗೆ ಜಾಮೀನು ನೀಡಿದರೆ ಆತ ತಲೆಮರೆಸಿಕೊಳ್ಳುವ ಮತ್ತು ಪ್ರಕರಣದ ವಿಚಾರಣೆ ವಿಳಂಬವಾಗುವ ಸಾಧ್ಯತೆಯಿದೆ. ಇನ್ನೂ ಜೈಲಿನಿಂದ ಹೊರಬಂದರೆ ಅರ್ಜಿದಾರ ಪ್ರಾಣಕ್ಕೂ ಅಪಾಯವಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ
ಪ್ರಕರಣದ ಹಿನ್ನೆಲೆ:
ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರೊಬ್ಬರು 2021ರ ಸೆ.19ರಂದು ಕಾಟನ್ಪೇಟೆ ಠಾಣೆಗೆ ದೂರು ನೀಡಿದ್ದರು. ಜಿತೇಂದರ್ ಸಿಂಗ್ ಸೇನಾ ಸಮವಸ್ತ್ರ ಧರಿಸಿಕೊಂಡು ನೌಕದಾಳಕ್ಕೆ ಸಂಬಂಧಿಸಿದಂತೆ ಪೋಟೋ ಹಾಗೂ ಇತರೆ ಮುಖ್ಯ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನದ ಐಎಸ್ಐಗೆ ರವಾನಿಸಿದ್ದಾನೆ ಎಂದು ಆರೋಪಿಸಿದ್ದರು.
ಈ ಸಂಬಂಧ ಪೊಲೀಸರು 2021ರ ನ.19ರಂದು ಅರ್ಜಿದಾರರನ್ನು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಭಯೋತ್ಪಾದಕರ ನಿಗ್ರಹ ಘಟಕ ಎಸಿಪಿ ಮತ್ತು ಸಿಸಿಬಿ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಿತ್ತು. ಇದರಿಂದ ಜಾಮೀನು ಕೋರಿ ಆರೋಪಿ ಅರ್ಜಿ ಸಲ್ಲಿಸಿದ್ದ. ಅದನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೊರೆ ಹೋಗಿದ್ದನು.