ಜರ್ಮನಿಯಲ್ಲಿರುವ ತಾಯಿ ವಶಕ್ಕೆ ಮಗು ಒಪ್ಪಿಸಲು ಹೈಕೋರ್ಟ್ ನಕಾರ!
ಬೆಂಗಳೂರು, ಅಕ್ಟೋಬರ್ 10; ಮಗುವಿನ ಕಲ್ಯಾಣಕ್ಕಿಂತ ಜರ್ಮನಿಯಲ್ಲಿ ತನ್ನ ವೃತ್ತಿ ಜೀವನದ ಕುರಿತು ಪತ್ನಿ ಹೆಚ್ಚು ಆಸಕ್ತಿಯನ್ನಿಟ್ಟುಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ಕರ್ನಾಟಕ ಹೈಕೋರ್ಟ್, ಆಕೆಯ ವಶಕ್ಕೆ ಮಗುವನ್ನು ಒಪ್ಪಿಸಲು ನಿರಾಕರಿಸಿದೆ.
ಆ ಮೂಲಕ ಜರ್ಮನಿ ಮತ್ತು ಥಾಯ್ಲ್ಯಾಂಡ್ನಲ್ಲಿ ನೆಲೆಸಿರುವ ದಂಪತಿಯ ಮಗುವಿನ ವಶಕ್ಕೆ ನೀಡುವ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದು, ಮಗುವನ್ನು ತಂದೆಯ ವಶಕ್ಕೆ ನೀಡಿ ಆದೇಶಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಸ್. ದಿನೇಶ್ಕುಮಾರ್ ಮತ್ತು ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.

'ತಂದೆಯಾದವರು ತುಂಬಾ ಉದಾರತೆ ಹೊಂದಿದ್ದಾರೆ. ಆದರೆ, ತಾಯಿ ಜರ್ಮನಿಯಲ್ಲಿ ಏಕಾಂತದಲ್ಲಿ ಉಳಿಯುವುದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎಂದು ಪೀಠ ತಿಳಿಸಿದೆ. ಈ ನಡುವೆ ಮಗುವಿನ ವಾಸ ಸ್ಥಳವನ್ನು ತಾಯಿ ನಿರ್ಧರಿಸುತ್ತಾರೆ ಎಂದು ಜರ್ಮನಿ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಮಗು ಭಾರತದಲ್ಲಿದ್ದ ಸಂದರ್ಭದಲ್ಲಿ ಏಕಪಕ್ಷೀಯವಾಗಿದೆ ಎಂದು' ಹೈಕೋರ್ಟ್ ಹೇಳಿದೆ.
'ಒಂಬತ್ತು ವರ್ಷದ ಮಗುವಿನೊಂದಿಗೆ ನ್ಯಾಯಮೂರ್ತಿಗಳು ಖಾಸಗಿಯಾಗಿ ಚರ್ಚೆ ನಡೆಸಿದ್ದು, ಮಗುವಿನ ಆಶಯದಂತೆ ತಂದೆಯೊಂದಿಗೆ ನೆಲೆಸಲು ಇಚ್ಚಿಸಿದೆ. ಭಾರತದ ಕಾನೂನಿನದಲ್ಲಿ ಮಗುವಿನ ಕ್ಷೇಮ ಅತ್ಯುನ್ನತವಾಗಿದೆ. ಆ ದೃಷ್ಟಿಕೋನದಲ್ಲಿ ಮಗುವಿನೊಂದಿಗೆ ಚರ್ಚೆ ನಡೆಸಿದ ಬಳಿಕ ಅದರ ಇಚ್ಚೆಯಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ' ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೆ, ಏಕ ಪಕ್ಷೀಯವಾಗಿ ಜರ್ಮನಿ ನ್ಯಾಯಾಲಯ ನೀಡಿರುವ ಆದೇಶವನ್ನು ತಿರಸ್ಕರಿಸುತ್ತಿದ್ದು, ಮಗು ತಂದೆಯೊಂದಿಗೆ ನೆಲೆಸುವುದಕ್ಕೆ ಅವಕಾಶವನ್ನು ಕಲ್ಪಿಸಿದೆ.
ಪ್ರಕರಣದ ಹಿನ್ನೆಲೆ: ಒಡಿಶಾ ಮೂಲದ ದಂಪತಿ 2013ರಲ್ಲಿ ವಿವಾಹವಾಗಿದ್ದೂ, ಇಬ್ಬರೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲಿ ಉದ್ಯೋಗಕ್ಕಾಗಿ ಬ್ಯಾಂಕಾಕ್ಗೆ ತೆರಳಿದ್ದರು. 2022ರಲ್ಲಿ ಜರ್ಮನಿಗೆ ತೆರಳುವುದಕ್ಕೆ ನಿರ್ಧರಿಸಿದ್ದರು. 2023ರ ಜುಲೈ ತಿಂಗಳಲ್ಲಿ ಮಗುವನ್ನು ಜರ್ಮನಿಯಿಂದ ದುಬೈಗೆ ಹೋಗುವ ವಿಮಾನದಲ್ಲಿ ಭಾರತಕ್ಕೆ ಕರೆತಂದಿದ್ದರು.
ಕೆಲವು ದಿನಗಳ ಬಳಿಕ ಪತ್ನಿ ತನ್ನ ಮಗುವನ್ನು ಪತಿ ಅಪಹರಣ ಮಾಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಬಳಿಕ ಮಕ್ಕಳ ರಕ್ಷಣಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದರು.
ಜರ್ಮನಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಮಗುವಿನ ವಾಸಸ್ಥಳವನ್ನು ತಾಯಿ ನಿರ್ಧರಿಸಬೇಕು ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ ಏಕಪಕ್ಷೀಯವಾಗಿ ಆದೇಶವನ್ನು ನೀಡಿತ್ತು. ಇದಾದ ಬಳಿಕ ಕರ್ನಾಟಕ ಹೈಕೋರ್ಟ್ನಲ್ಲಿ ಹೆಬಿಯಾಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಮಗುವನ್ನು ವಶಕ್ಕೆ ಕೊಡಿಸುವಂತೆ ಕೋರಿದ್ದರು.












Click it and Unblock the Notifications