ಸಚಿವ ಮಹದೇವಪ್ಪ ಬಂಗಲೆ ನವೀಕರಣ ಖರ್ಚು 46 ಲಕ್ಷ
ಬೆಂಗಳೂರು, ಮೇ.6 : ಭಾರೀ ವಿವಾದ ಹುಟ್ಟುಹಾಕಿದ್ದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಬಂಗಲೆ ದುರಸ್ತಿ ಮತ್ತು ನವೀಕರಣದ ಕುರಿತು ಲೋಕೋಪಯೋಗಿ ಇಲಾಖೆ ಸ್ಪಷ್ಟನೆ ನೀಡಿದೆ. ಕೇವಲ 46.5 ಲಕ್ಷ ವೆಚ್ಚದಲ್ಲಿ ಬಂಗಲೆ ದುರಸ್ತಿ ಮಾಡಲಾಗಿದ್ದು 2 ಕೋಟಿ ವೆಚ್ಚಮಾಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳ ವಿಭಾಗದ ದಕ್ಷಿಣ ವಲಯ ಮುಖ್ಯ ಅಭಿಯಂತರ ಎ.ಎನ್. ತ್ಯಾಗರಾಜಯ್ಯ ಅವರು ಈ ಸ್ಪಷ್ಟನೆಯನ್ನು ನೀಡಿದ್ದು, ಹಲವಾರು ದಿನಗಳಿಂದ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇದದಿಂದ ಸಚಿವರು ತಮ್ಮ ಬಂಗಲೆ ನವೀಕರಣಕ್ಕೆ 46 ಲಕ್ಷ ರೂ ವೆಚ್ಚ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಕುಮಾರಕೃಪಾ ರಸ್ತೆಯಲ್ಲಿರುವ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಬಂಗಲೆ ದುರಸ್ತಿಗೆ 2.25 ಕೋಟಿ ರೂ. ವೆಚ್ಚ ಮಾಡಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಸಚಿವರ ಕೋಟಿ-ಕೋಟಿ ಖರ್ಚು ಮಾಡಿ ಬಂಗಲೆ ನವೀಕರಣ ಮಾಡಿಸಿಕೊಳ್ಳುವ ಅಗತ್ಯವಿತ್ತೆ ಎಂದು ಹಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿತ್ತು. [ಸಿದ್ದರಾಮಯ್ಯ ಕಿವಿಹಿಂಡಿದ ರಾಜ್ಯಪಾಲರು]
ಆದ್ದರಿಂದ ಲೋಕೋಪಯೋಗಿ ಇಲಾಖೆ ಪತ್ರಿಕಾಪ್ರಕಟಣೆ ಬಿಡುಗಡೆ ಮಾಡಿದ್ದು, 46.5 ಲಕ್ಷ ಮಾತ್ರ ವೆಚ್ಚ ಮಾಡಿ ಬಂಗಲೆ ನವೀಕರಣ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಂಗಲೆಯನ್ನು 50 ವರ್ಷಗಳ ಹಿಂದೆ 1.28 ಎಕರೆ ಪ್ರದೇಶದಲ್ಲಿ ಅಂದಿನ ಮೈಸೂರು ಗೃಹ ಮಂಡಳಿ ಗಾರೆ ಬಳಸಿ ನಿರ್ಮಿಸಿದೆ. ಕಾಲ-ಕಾಲಕ್ಕೆ ಸಣ್ಣಪುಟ್ಟ ನವೀಕರಣ ಅಗತ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನವೀಕರಣ ಏನು : ಬಂಗಲೆಯ ಶೌಚಾಲಯ, ಸ್ನಾನದ ಮನೆ ಹಾಗೂ ಅಡುಗೆ ಕೋಣೆಯಲ್ಲಿ ತುಕ್ಕು ಹಿಡಿದ ಕೊಳವೆಗಳ ತೇವಾಂಶದಿಂದ ಕಟ್ಟಡಕ್ಕೆ ಅಪಾಯವಾಗುತ್ತಿತ್ತು. ಆದ್ದರಿಂದ ಕಟ್ಟಡವನ್ನು ಸಂರಕ್ಷಿಸಲು ಇವುಗಳನ್ನು ಬದಲಾವಣೆ ಮಾಡಲಾಗಿದೆ. ನವೀಕರಣಕ್ಕಾಗಿ ಯಾವುದೇ ದುಂದು ವೆಚ್ಚ ಮಾಡಿಲ್ಲ ಸ್ಪಷ್ಟಪಡಿಸಲಾಗಿದೆ.
ರಾಜ್ಯಪಾಲರು ಕಿಡಿ ಕಾರಿದ್ದರು : ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಬಂಗಲೆ ನವೀಕರಣಕ್ಕೆ 2 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications