ಸಾಕ್ಷ್ಯವಿಲ್ಲದ್ದರೂ 13 ವರ್ಷ ಕಾರಾಗೃಹದಲ್ಲಿವನಿಗೆ ಬಿಡುಗಡೆ ಭಾಗ್ಯ!
ಬೆಂಗಳೂರು, ಮೇ 25. ಕೊಲೆ ಪ್ರಕರಣದಲ್ಲಿ ಸಾಕ್ಷ್ಯವಿಲ್ಲದಿದ್ದರೂ ಬಂಧನಕ್ಕೊಳಗಾಗಿ 13 ವರ್ಷ ಸೆರೆಯಲ್ಲಿದ್ದ ವ್ಯಕ್ತಿಗೆ ಇದೀಗ ಬಿಡುಗಡೆ ಭಾಗ್ಯ ದೊರೆತಿದೆ.
ಮೂಲತಃ ಚಾಲಕನಾಗಿರುವ ಆತನಿಗೆ ವಿಶೇಷ ನ್ಯಾಯಾಲಯ ವಿಧಿಸಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಅಲ್ಲದೆ, ಬೆಂಗಳೂರಿನ ವಾಸಿ ಚಾಲಕ ಶಿವಪ್ರಸಾದ್ ನನ್ನು ಕೂಡಲೇ ಬಿಡುಗಡೆ ಮಾಡುವಂತೆಯೂ ಪ್ರಾಸಿಕ್ಯೂಷನ್ ಗೆ ಆದೇಶ ನೀಡಿದೆ.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾ. ಬಿ.ವೀರಪ್ಪ ಮತ್ತು ನ್ಯಾ. ಎಸ್.ರಾಚಯ್ಯ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ದರೋಡೆ ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದರೂ ಅದನ್ನು ಪ್ರಾಸಿಕ್ಯೂಷನ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ. ಹಾಗಾಗಿ ಅದೇ ಆದೇಶ ಅಂತಿಮಗೊಂಡಿದೆ. ಒಮ್ಮೆ ಆರೋಪಿ ದರೋಡೆ ಪ್ರಕರಣದಲ್ಲಿ ಖುಲಾಸೆಗೊಂಡರೆ ಆತನ ವಿರುದ್ಧದ ಕೊಲೆ ಪ್ರಕರಣದಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಕ್ಷ್ಯ ಒದಗಿಸುವುದು ಪ್ರಾಸಿಕ್ಯೂಷನ್ ಹೊಣೆಗಾರಿಕೆಯಾಗಿದೆ. ಆದರೆ ಆ ವಿಚಾರದಲ್ಲಿ ಅಭಿಯೋಜಕರು ವಿಫಲರಾಗಿದ್ದಾರೆಂದು ನ್ಯಾಯಾಲಯ ಹೇಳಿದೆ.
ಜೊತೆಗೆ ಸೆಷನ್ ನ್ಯಾಯಾಲಯ ಕೂಡ ಸಾಕಷ್ಟು ಪುರಾವೆಯಿಲ್ಲದೆ ಆರೋಪಿಗೆ ಕೊಲೆ ಪ್ರಕರಣದಲ್ಲಿ ಜೀವಾವ ಶಿಕ್ಷೆ ನೀಡಿರುವುದು ದುರದೃಷ್ಟಕರ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಕೋರ್ಟ್ ನೀಡಿರುವ ಕಾರಣವೇನು?
ನ್ಯಾಯಪೀಠ 'ಆರೋಪಿ ಮರ್ಡರ್ ಫಾರ್ ಗೇನ್' ಉದ್ದೇಶದಿಂದಲೇ ಕೊಲೆ ಮಾಡಿದ್ದಾನೆಂಬುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಆರೋಪಿ ದರೋಡೆ ಮಾಡಿದ್ದಾನೆನ್ನುವುದಕ್ಕೆ ಯಾವುದೇ ಪುರಾವೆ ಇಲ್ಲವೆಂಬ ಕಾರಣಕ್ಕೆ ಐಪಿಸಿ ಸೆಕ್ಷನ್ 367 ಮತ್ತು 369 ಅಡಿ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ. ಆದರೆ ಘಟನೆ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದೆ, ಆರೋಪಿ ಲಾಭಕ್ಕಾಗಿ ದರೋಡೆ ಮತ್ತು ಕೊಲೆ ಮಾಡಿದ್ದಾನೆಂದು ನಂಬಿ ಆತನಿಗೆ ಐಪಿಸಿ ಸೆಕ್ಷನ್ 302ರಡಿ ಜೀವಾವಧಿ ಶಿಕ್ಷೆ ವಿಧಿಸಿರುವುದ ಸರಿಯಲ್ಲ ಎಂದು ಆದೇಶಿಸಿದೆ.
ನ್ಯಾಯಾಂಗದ ಉದ್ದೇಶ ನ್ಯಾಯದಾನ ಹಳಿ ತಪ್ಪದಂತೆ ನೋಡಿಕೊಳ್ಳುವುದಾಗಿದೆ. ಹಳಿ ತಪ್ಪಿದರೆ ಅದು ತಪ್ಪಿತಸ್ಥ ಖುಲಾಸೆಯಾಗುವ ಆಪಾಯವಿರುತ್ತದೆ, ಅದೇ ರೀತಿ ಅಮಾಯಕರೂ ಕೂಡ ಶಿಕ್ಷೆಗೆ ಗುರಿಯಾಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ ಏನು?
ಎಚ್ ಆರ್ ಬಿಆರ್ ಬಡಾವಣೆಯಲ್ಲಿ ತುಳಸಿ ಎಂಬ ಮಹಿಳೆ ಒರ್ವ ಪುತ್ರ, ಪುತ್ರಿ ಜೊತೆ ವಾಸಿಸುತ್ತಿದ್ದರು. ಪತಿ ರವಿಶಂಕರ್ ದುಬೈನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮನೆಯ ಪಕ್ಕ ವಾಸವಿದ್ದ ರಾಮಸ್ವಾಮಿ ಮನೆಯಲ್ಲಿ ಶಿವಪ್ರಸಾದ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆಗ ತುಳಸಿ ಅವರಿಗೆ ಪರಿಚಯವಾಗಿದ್ದ ಶಿವಪ್ರಸಾದ್ ಅಗ್ಗಾಗೆ ಮನೆಗೆ ಹೋಗಿ ಬಂದು ಮಾಡುತ್ತಿದ್ದನು. ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.
ಆಗ ಮನೆಯಲ್ಲಿ ಗಂಡಸರು ಯಾರೂ ಇಲ್ಲ ಎಂಬುದನ್ನು ತಿಳಿದಿದ್ದ ಆತ ಹೊಸ ಕಾರು ಖರೀದಿಗೆ ಹಣ ಪಡೆಯುವ ಉದ್ದೇಶದಿಂದ 2008ರ ಜೂ.23ರಂದು ಆತ ಬೆಳಿಗ್ಗೆಯೇ ಮನೆಗೆ ನುಗ್ಗಿ ಚಾಕುವಿನಿಂದ ಬೆದರಿಸಿ ಒಡವೆ ನೀಡುವಂತೆ ಬೆದರಿಕೆ ಹಾಕಿದ್ದನು. ಅದೇ ವೇಳೆ ಆಕೆಯನ್ನು ಸಾಯಿಸಿ ಒಡವೆಗಳನ್ನು ದರೋಡೆ ಮಾಡಿದ್ದನೆಂದು ಆರೋಪಿಸಲಾಗಿತ್ತು.
ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. 2012ರಲ್ಲಿ ವಿಚಾರಣಾ ನ್ಯಾಯಾಲಯ ದರೋಡೆ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಆರೋಪಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದನು.












Click it and Unblock the Notifications