ಬಸ್ಸಿನಲ್ಲೇ ತಾಂತ್ರಿಕ ದೋಷವಿತ್ತು ಎಂದ ಶಾಸಕ ಜಮೀರ್

ತಮ್ಮ ಚಾಲಕನ ವಿರುದ್ಧದ ಆರೋಪವನ್ನು ತಳ್ಳಿಹಾಕಿದ ಶಾಸಕರು, ಅಪಘಾತ ಸಂಬಂಧ ತಾವು ಯಾವುದೇ ರೀತಿ ತನಿಖೆ ಎದುರಿಸಲು ಸಿದ್ಧ ಮತ್ತು ತಮ್ಮ ವಿರುದ್ಧ ಆರೋಪ ಸಾಬೀತಾದರೆ ಶಿಕ್ಷೆಯಾಗಲಿ ಎಂದರು.
ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ವೋಲ್ವೊ ಬಸ್ಸಿನಲ್ಲೇ ತಾಂತ್ರಿಕ ತೊಂದರೆ ಇದೆ. ಹೀಗಾಗಿ ಬಸ್ ಕಂಪನಿ ವಿರುದ್ಧವೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಗಮನಾರ್ಹವೆಂದರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ 'ಅತಿಯಾದ ವೇಗ ಹಾಗೂ ಚಾಲನಕ ನಿರ್ಲಕ್ಷ್ಯದಿಂದ ಬಸ್ ದುರಂತ ಸಂಭವಿಸಿದೆ' ಎಂದು ಹೇಳಿದ್ದರು.
ಅದೇ ವೇಳೆ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, 'ವೋಲ್ವೊ ಬಸ್ಸಿನಲ್ಲೇ ತೊಂದರೆ ಇದೆಯೆಂದಾದರೆ ಅಂತಹ ಬಸ್ಸನ್ನು ಅವರು ಏಕೆ ಖರೀದಿಸಿದರು' ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಸರಕಾರದ ವತಿಯಿಂದ ತನಿಖೆ ನಡೆಸುವುದಾಗಿಯೂ ಸಚಿವರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ಸೆಮಿ ಲಕ್ಷುರಿ ವೋಲ್ವೋ ಬಸ್ ಹಾವೇರಿ ಬಳಿ ಕಣಿಮಳ್ಳಳ್ಳಿ ವರದಾ ಸೇತುವೆ ಮೇಲೆ ಇಂದು ಮುಂಜಾನೆ ಮೂರು ಗಂಟೆಯಲ್ಲಿ ಈ ದುರಂತಕ್ಕೀಡಾಗಿ 7 ಮಂದಿ ಸಜೀವ ದಹನಗೊಂಡಿದ್ದಾರೆ.












Click it and Unblock the Notifications