ಹಾಸನ : ಜೂ.15ರಿಂದ ಚಂದ್ರಗಿರಿ ಮಹೋತ್ಸವ
ಹಾಸನ, ಜೂ. 13 : ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟರಲ್ಲಿ ಜೂ.15ರಿಂದ ಚಂದ್ರಗಿರಿ ಮಹೋತ್ಸವ' ಆಯೋಜಿಸಲಾಗಿದೆ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ. ನಾಲ್ಕು ದಿನಗಳ ಕಾಲ ವಿಶೇಷ ಪೂಜೆಗಳು ಬೆಟ್ಟದಲ್ಲಿ ನಡೆಯಲಿದ್ದು, ನಂತರ ವರ್ಷಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಪ್ರತಿ 12 ವರ್ಷಕ್ಕೊಮ್ಮೆ ವಿಂಧ್ಯಗಿರಿ ಬೆಟ್ಟದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ನಡೆಯುತ್ತದೆ. ಅದರಂತೆ, ಐತಿಹಾಸಿಕ ಮಹತ್ವವಿರುವ ಚಂದ್ರಗಿರಿ ಬೆಟ್ಟದಲ್ಲೂ ಉತ್ಸವ ಆಚರಿಸಬೇಕು ಎಂಬ ಉದ್ದೇಶದಿಂದ, 2000ನೇ ಇಸವಿಯಲ್ಲಿ ಮೊದಲು ಚಂದ್ರಗಿರಿ ಉತ್ಸವ ಆಚರಿಲು ಪ್ರಾರಂಭಿಸಲಾಯಿತು ಎಂದರು.

ಎರಡು ಮಸ್ತಕಾಭಿಷೇಕಗಳ ನಡುವೆ ಒಂದು ಬಾರಿ ಚಂದ್ರಗಿರಿ ಉತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಜೂನ್ 15ರಂದು ಈ ಬಾರಿಯ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಉತ್ಸವದ ಉದ್ಘಾಟನೆ ದಿನ ಬೆಟ್ಟದಲ್ಲಿರುವ ಎಲ್ಲ ಬಸದಿಗಳಲ್ಲಿ ಏಕಕಾಲಕ್ಕೆ ಪೂಜೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು. [ಶ್ರವಣಬೆಳಗೊಳ - ಗೊಮ್ಮಟೇಶ್ವರ ನಿಂತ ಸ್ಥಳ]
ಸಭಾ ಕಾರ್ಯಕ್ರಮ : ಜೂ.15ರಂದು ಮಧ್ಯಾಹ್ನ ಸಭಾ ಕಾರ್ಯಕ್ರಮ ನಡೆಯಲಿದ್ದು, ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಅಧ್ಯಕ್ಷ ಸುಧೀರ್ ಜೈನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಅನೇಕ ಗಣ್ಯರು, ತೀರ್ಥಂಕರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಉತ್ಸವ ಆರಂಭವಾದ ನಾಲ್ಕು ದಿನಗಳ ಕಾಲ ಚಂದ್ರಗಿರಿ ಬೆಟ್ಟದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಇಲ್ಲಿರುವ ಮಂದಿರಗಳ ಜೀರ್ಣೋದ್ಧಾರ, ಶಾಸನಗಳ ಅಧ್ಯಯನ ಮಾಡಿದವರಿಗೆ 'ಶಾಸನ ಸಾಹಿತ್ಯ' ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಚಂದ್ರಗಿರಿ ಬೆಟ್ಟದಲ್ಲಿ ಜೈನ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು. ಇಲ್ಲಿ ಸಲ್ಲೇಖನ ವೃತ ಆಚರಿಸಿದ ಅಥವಾ ಸಮಾಧಿ ಹೊಂದಿದ ಆಚಾರ್ಯರ ಸ್ಮರಣೆ ಮುಂತಾದ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯಲಿವೆ ಎಂದು ಸ್ವಾಮೀಜಿ ಹೇಳಿದರು.












Click it and Unblock the Notifications