ಕೊಪ್ಪಳ : ದುಬೈನಲ್ಲಿ ಕಿರುಕುಳಕ್ಕೊಳಗಾಗಿದ್ದ ಮಹಿಳೆ ವಾಪಸ್
ಕೊಪ್ಪಳ, ಅ.10 : ದುಬೈನಲ್ಲಿ ಕಿರುಕುಳಕ್ಕೊಳಗಾಗಿದ್ದ ಕೊಪ್ಪಳ ಮೂಲದ ಮಹಿಳೆ ಸುರಕ್ಷಿತವಾಗಿ ತವರಿಗೆ ವಾಪಸ್ ಆಗಿದ್ದಾರೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಹಿಳೆ ಭಾರತಕ್ಕೆ ವಾಪಸ್ ಆಗಲು ಅಗತ್ಯ ನೆರವು ನೀಡಿದ್ದಾರೆ.
ಗುರುವಾರ ಚಾಂದ್ ಸುಲ್ತಾನ್ ಕೊಪ್ಪಳಕ್ಕೆ ವಾಪಸ್ ಆದರು, ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸ್ವದೇಶಕ್ಕೆ ವಾಪಸ್ ಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ದುಬೈನಲ್ಲಿ ನೀಡುತ್ತಿದ್ದ ಕಿರುಕುಳವನ್ನು ವಿವರಿಸಿದರು.
ಚಾಂದ್ ಸುಲ್ತಾನ್ ಮೂರು ತಿಂಗಳ ಹಿಂದೆ ಕುರಾನ್ ಕಲಿಸಲು ಮಂಗಳೂರು ಮೂಲದ ಏಜೆಂಟ್ ಮೂಲಕ ದುಬೈಗೆ ಹೋಗಿದ್ದರು. ದುಬೈಗೆ ಹೋದ ಬಳಿಕ ಮನೆ ಕೆಲಸದ ಜೊತೆ ಶೌಚಾಲಯ ಸ್ವಚ್ಛಗೊಳಿಸುವ ಕೆಲಸವನ್ನು ನೀಡಲಾಯಿತು. ಚಾಂದ್ ಸುಲ್ತಾನ್ ನಿರಾಕರಿಸಿದಾಗ ಕಿರುಕುಳ ನೀಡಲು ಆರಂಭಿಸಿದರು.
ಮನೆಯಲ್ಲಿ ಕೂಡಿಹಾಕಿ ಚಾಂದ್ ಸುಲ್ತಾನ್ ಅವರಿಗೆ ಉಟಕ್ಕೆ ಎರಡು ಬ್ರೆಡ್ ಮಾತ್ರ ಕೊಡುತ್ತಿದ್ದರು. ಜೈಲಿನಲ್ಲಿ ಕೈದಿಗಳನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳಲು ಆರಂಭಿಸಿದರು. 'ನಾನು ಭಾರತಕ್ಕೆ ವಾಪಸ್ ಬರುವುದಿಲ್ಲ. ಅಲ್ಲೇ ಸಾಯುತ್ತೇನೆ ಎಂದು ಕೊಂಡಿದ್ದೆ. ಇನ್ನು ಬದುಕಿರುವ ತನಕ ದುಬೈಗೆ ಹೋಗಲ್ಲ' ಎಂದು ಚಾಂದ್ ಸುಲ್ತಾನ್ ಹೇಳಿದರು.
ಚಾಂದ್ ಸುಲ್ತಾನ್ ದುಬೈನಲ್ಲಿ ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ಪತಿಗೆ ವಿಷಯ ತಿಳಿಸಿದ್ದರು. ಪತಿ ಬಾಬಾ ಜಾನ್ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಕುರಿತು ಮಾಹಿತಿ ನೀಡಿ, ಸ್ವದೇಶಕ್ಕೆ ಮರಳಲು ಸಹಕಾರ ನೀಡುವಂತೆ ಕೋರಿದ್ದರು.
ಕರಡಿ ಸಂಗಣ್ಣ ಅವರು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸಚಿವರ ನೆರವಿನ ಮೂಲಕ ಇಂದು ಚಾಂದ್ ಸುಲ್ತಾನ್ ಸ್ವದೇಶಕ್ಕೆ ಮರಳಿದ್ದಾರೆ. ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.