ಎಚ್1ಎನ್1 ಗೆ ರಾಜ್ಯಾದ್ಯಂತ 20 ಮಂದಿ ಬಲಿ
ಬೆಂಗಳೂರು, ಫೆ.15: ಮಾರಕ ಕಾಯಿಲೆ ಎಚ್1ಎನ್1 ಗೆ ರಾಜ್ಯಾದ್ಯಂತ ಬಲಿಯಾದವರ ಸಂಖ್ಯೆ 20ಕ್ಕೆ ಏರಿದೆ. ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಎಚ್1ಎನ್1 ಮಾರಕ ರೋಗ ನಿಯಂತ್ರಣಕ್ಕೆ ತುರ್ತುಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಸೂಚನೆ ನೀಡಿದ್ದಾರೆ.
ಗಂಟಲು ದ್ರಾವಣ ಪರೀಕ್ಷೆ ನಡೆಸಿ 247 ಜನಕ್ಕೆ ಈ ರೋಗ ಇರುವ ಬಗ್ಗೆ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಾದಗೊಂಡನಹಳ್ಳಿಯ ಶ್ರೀನಿವಾಸ್ ಹಾಗೂ ರಾಯಚೂರು ಜಿಲ್ಲೆಯ ತಿಮ್ಮಾಪುರ ಪೇಟೆ ನಿವಾಸಿ ಉಮಾದೇವಿ ಶನಿವಾರ ರೋಗ ಬಾಧೆಯಿಂದ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲೂ ಕೆಲವರಿಗೆ ಈ ರೋಗ ಇರುವುದು ಪತ್ತೆಯಾಗಿದೆ. ಬೆಂಗಳೂರಲ್ಲಿ ಹೊಸದಾಗಿ 20 ಪ್ರಕರಣಗಳು ದಾಖಲಾಗಿವೆ. ಬೀದರ್ ಜಿಲ್ಲೆಯ ಪರ್ಜಾನಾ ಬೇಗಂ ಎಂಬ ಗರ್ಭಿಣಿ ಮಾರಕ ರೋಗಕ್ಕೆ ಶುಕ್ರವಾರ ಬಲಿಯಾಗಿದ್ದಾರೆ.
ಕಳೆದ ಜನವರಿಯಲ್ಲಿ ವಿವಿಧ ರೋಗಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಹಂದಿಜ್ವರದ ಸೋಂಕು ಕಾಣಿಸಿಕೊಳ್ಳುತ್ತಿದೆ. ಖಾಸಗಿಮ ಮತ್ತು ಸರ್ಕಾರಿ ಆಸ್ಪತ್ರೆಗಳು ರೋಗ ನಿಯಂತ್ರಣಕ್ಕೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು ಅಗತ್ಯ ಔಷಧ ದಾಸ್ತಾನು ಮಾಡಿಕೊಂಡಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.











Click it and Unblock the Notifications