ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಚ್.ವಿಶ್ವನಾಥ್
ಬೆಂಗಳೂರು, ಜನವರಿ 03: ಅನಾರೋಗ್ಯ ಸಮಸ್ಯೆಯಿಂದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದ ಎಚ್.ವಿಶ್ವನಾಥ್ ಅವರ ಮನವಿಯನ್ನು ವರಿಷ್ಠ ದೇವೇಗೌಡ ಅವರು ತಿರಸ್ಕರಿಸಿದ್ದಾರೆ.
ಇಂದು ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಈ ಬಗ್ಗೆ ದೇವೇಗೌಡರು ಸೂಚನೆ ನೀಡಿದ್ದು, ಲೋಕಸಭೆ ಚುನಾವಣೆ ಮುಂದು ಇರುವ ಕಾರಣ ಅನುಭವಿ ಎಚ್.ವಿಶ್ವನಾಥ್ ಅವರನ್ನು ಬದಲಾಯಿಸುವುದು ಸೂಕ್ತವಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅನಾರೋಗ್ಯದ ಕಾರಣದಿಂದ ಕ್ಷೇತ್ರದ ಜನರಿಗೆ ಹಾಗೂ ಜೆಡಿಎಸ್ ಪಕ್ಷ ನೀಡಿರುವ ಜವಾಬ್ದಾರಿಗೆ ಸೂಕ್ತವಾಗಿ ನ್ಯಾಯ ಸಲ್ಲಿಸಲು ಆಗುತ್ತಿರಲಿಲ್ಲ ಹಾಗಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಬೇಕೆಂದು ದೇವೇಗೌಡರ ಬಳಿ ಮನವಿ ಮಾಡಿದ್ದೆ ಎಂದು ಎಚ್.ವಿಶ್ವನಾಥ್ ಹೇಳಿದ್ದರು.

ಆದರೆ ವಿಶ್ವನಾಥ್ ಅವರ ಬಳಿ ಸಮಾಲೋಚನೆ ನಡೆಸಿರುವ ದೇವೇಗೌಡ ಅವರು, ದೈವಬಲ ನಂಬಿ ಎಲ್ಲರೂ ಜೊತೆಯಾಗಿ ಹೋಗೋಣ. ಲೋಕಸಭೆ ಚುನಾವಣೆ ಎಂಬ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ ಎಂದಿದ್ದಾರೆ, ಹಾಗಾಗಿ ಅವರ ಮಾತಿನಂತೆ ನಾನೇ ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಕೊನೆಯ ಉಸಿರಿರುವವರೆಗೂ ದೇವೇಗೌಡರ ಜೊತೆಯೇ ಇರುತ್ತೇನೆ ಎಂದು ಭಾವನಾತ್ಮಕವಾಗಿ ಮಾತನಾಡಿದ ವಿಶ್ವನಾಥ್, ರಾಜಕೀಯ ಸಂಧ್ಯಾಕಾಲದಲ್ಲಿ ನಾನು ಶಾಸಕನಾಗಿ ಸೇವೆ ಮಾಡಲು ಅವರು ಅವಕಾಶ ಕೊಟ್ಟಿದ್ದಾರೆ ಎಂದು ವಿಶ್ವನಾಥ್ ಹೇಳಿದ್ದಾರೆ.












Click it and Unblock the Notifications