ದೆಹಲಿಯಲ್ಲಿ ಸಭೆ ನಡೆಸಿ ರಾಜ್ಯದ ಗಮನ ಸೆಳೆದ ಎಚ್.ವಿಶ್ವನಾಥ್!
ಬೆಂಗಳೂರು, ಜುಲೈ 03 : ಹುಣಸೂರು ಶಾಸಕ, ಜೆಡಿಎಸ್ ನಾಯಕ ಎಚ್.ವಿಶ್ವನಾಥ್ ದೆಹಲಿಯಲ್ಲಿ ಹಲವು ಸಭೆಗಳನ್ನು ನಡೆಸಿದ್ದಾರೆ. ಕರ್ನಾಟಕ ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ಅವರು ನಡೆಸಿದ ಸಭೆಗಳು ಕುತೂಹಲಕ್ಕೆ ಕಾರಣವಾಗಿದೆ.
ಕೋಲ್ಕತ್ತಾ ಪ್ರವಾಸ ಕೈಗೊಂಡಿದ್ದ ಎಚ್.ವಿಶ್ವನಾಥ್ ಅವರು ಬುಧವಾರ ನವೆದೆಹಲಿಯಲ್ಲಿದ್ದರು. ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿದರು. ಎರಡು ಮೂರು ಸಭೆಗಳನ್ನು ನಡೆಸಿದರು. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ವದಂತಿಗಳನ್ನು ಹಬ್ಬಿಸಿದೆ.
ಬುಧವಾರ ಬೆಳಗ್ಗೆ ತುಮಕೂರು ಸಂಸದ ಜಿ.ಎಸ್.ಬಸವರಾಜು, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದರು. ಎಚ್.ವಿಶ್ವನಾಥ್ ಬಿಜೆಪಿ ಸೇರಲಿದ್ದಾರೆಯೇ? ಎಂಬ ಪ್ರಶ್ನೆ ಇದರಿಂದಾಗಿ ಹುಟ್ಟಿಕೊಂಡಿದೆ.
'ಬಿಜೆಪಿ ನಾಯಕರ ಭೇಟಿಗೆ ವಿಶೇಷ ಅರ್ಥವೇನಿಲ್ಲ. ಕರ್ನಾಟಕ ಭವನದಲ್ಲಿ ಒಟ್ಟಿಗೆ ಉಪಹಾರ ಸೇವಿಸಿದೆವು' ಎಂದು ಎಚ್.ವಿಶ್ವನಾಥ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬುಧವಾರ ಸಂಜೆ ಅವರು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಿದರು....

ಜಿ.ಎಸ್.ಬಸವರಾಜು ಭೇಟಿ
ಎಚ್.ವಿಶ್ವನಾಥ್ ಅವರು ದೆಹಲಿಯಲ್ಲಿ ತುಮಕೂರಿನಲ್ಲಿ ಎಚ್.ಡಿ.ದೇವೇಗೌಡರನ್ನು ಸೋಲಿಸಿ ಸಂಸತ್ ಪ್ರವೇಶ ಮಾಡಿರುವ ಬಿಜೆಪಿ ಜಿ.ಎಸ್.ಬಸವರಾಜು ಅವರನ್ನು ಭೇಟಿ ಮಾಡಿದರು. ಕರ್ನಾಟಕ ಭವನದಲ್ಲಿ ಉಭಯ ನಾಯಕರು ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು. ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಮಾಧ್ಯಮಗಳಿಗೆ ಹೇಳುತ್ತೇನೆ
ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ವಿಶ್ವನಾಥ್ ಅವರು, 'ಬಿಜೆಪಿ ನಾಯಕರ ಭೇಟಿಗೆ ವಿಶೇಷ ಅರ್ಥವೇನಿಲ್ಲ. ಒಟ್ಟಿಗೆ ಸೇರಿದ್ದೇವೆ ಎಂದರೆ ರಾಜಕೀಯ ಮಾತನಾಡಬಾರದು ಅಂತೇನಿಲ್ಲ. ನಾನು ಬಿಜೆಪಿಗೆ ಹೋಗುವುದಾದದರೆ ಮಾಧ್ಯಮಗಳಿಗೆ ತಿಳಿಸುತ್ತೇನೆ' ಎಂದು ಹೇಳಿದರು.

ಸಮನ್ವಯದಲ್ಲಿ ಕೊರತೆ ಇದೆ
'ಸಿದ್ದರಾಮಯ್ಯ ಅವರಿಗೆ ಸರ್ಕಾರ ಮುಂದುವರೆಸುವ ಬಗ್ಗೆ ಆಸಕ್ತಿ ಇಲ್ಲ ಎಂದು ಅನ್ನಿಸುತ್ತಿದೆ. ಜನರು ಸಹ ಹಾಗೆ ಮಾತನಾಡಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಬಹುದು ಎಂಬ ಬಯಕೆ ಸಿದ್ದರಾಮಯ್ಯ ಅವರಿಗೆ ಇರಬಹುದು. ಜೆಡಿಎಸ್-ಕಾಂಗ್ರೆಸ್ನಲ್ಲಿ ಸಮನ್ವದ ಕೊರತೆ ಇದೆ' ಎಂದು ವಿಶ್ವನಾಥ್ ಹೇಳಿದರು.

ಪ್ರಜ್ವಲ್ ರೇವಣ್ಣ ಭೇಟಿ
ಬುಧವಾರ ಬೆಳಗ್ಗೆ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದ ಎಚ್.ವಿಶ್ವನಾಥ್ ಸಂಜೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕರ್ನಾಟಕ ಭವನದಲ್ಲಿ ಭೇಟಿಯಾದರು. ಗುರುವಾರ ವಿಶ್ವನಾಥ್ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ.












Click it and Unblock the Notifications