HD Kumaraswamy: ಸರ್ಕಾರಕ್ಕೆ ಗ್ಯಾರಂಟಿಗಳು ಹೊರೆಯಾಗಿಲ್ಲ: ಅಚ್ಚರಿ ಹೇಳಿಕೆ ನೀಡಿದ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು, ನವೆಂವರ್ 18: ರಾಜ್ಯದ ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರದ ಮೇಲೆ ಹೊರೆಯಾಗಿಲ್ಲ ಎಂಬ ಅಚ್ಚರಿಯ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ, ಬದಲಿಗೆ ಆರ್ಥಿಕ ಅದಕ್ಷತೆ, ಅಸಮರ್ಪಕ ನಿರ್ವಹಣೆಯಿಂದ ಖಜಾನೆ ಬರಿದಾಗಿ ರಾಜ್ಯವು ಸಾಲದ ದವಡೆಗೆ ಸಿಲುಕಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.

ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿದೆ. ಅಲ್ಲದೆ ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ತೆರಿಗೆ, ಶುಲ್ಕ ಹೆಚ್ಚಿಸುತ್ತಾ ಬಂದಿದೆ. ಗ್ಯಾರಂಟಿಗಳಿಗೆ ವರ್ಷಕ್ಕೆ ₹52,000 ರಿಂದ ₹60,000 ಕೋಟಿ ಆಗುತ್ತದೆ ಎಂದು ಸರಕಾರ ಹೇಳುತ್ತಿದೆ. ಆದರೆ, ಸಂಗ್ರಹ ಆಗುತ್ತಿರುವ ಜನರ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ? ಇದಕ್ಕೆ ಉತ್ತರ ಕೊಡಬೇಕಲ್ಲವೇ? ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಏರಿಕೆ ಮಾಡಿದರು. ಮದ್ಯದ ದರ ಹೆಚ್ಚಳ ಮಾಡಿದರು, ವಿದ್ಯುತ್ ದುಬಾರಿ ಆಗಿದೆ. ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹ ಹೆಚ್ಚುತ್ತಲೇ ಇದೆ. ಆದರೂ ಅಭಿವೃದ್ಧಿ ಶೂನ್ಯವಾಗಿದೆ. ಪ್ರತಿಯೊಂದಕ್ಕೂ ಗ್ಯಾರಂಟಿಗಳ ನೆಪ ಮಾಡಿಕೊಂಡು ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಮುಚ್ಚಲು ಇವರ ಬಳಿ ಹಣ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಹಾಗಾದರೆ, ಜನರಿಂದ ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿರುವ ಹಣ ಎಲ್ಲಿ ಹೋಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
11 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡುಗಳನ್ನಾಗಿ ಮಾಡಲಾಗುತ್ತಿದೆ. ಅಂದರೆ 11 ಲಕ್ಷ ಕುಟುಂಬಗಳ ಅನ್ನವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಈ ಬದಲಾವಣೆಗೆ ಕೈ ಹಾಕಿರುವ ಸರಕಾರದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಎಲ್ಲೂ ರಾಜ್ಯಕ್ಕೆ ಕೊಡುತ್ತಿರುವ ಅಕ್ಕಿ ಕಡಿತ ಮಾಡಿಲ್ಲ. ಇವರು ಮಾಡಿರುವ ತಪ್ಪಿನಿಂದ ಎಪಿ ಎಲ್ ಕಾರ್ಡುದಾರರು ಇನ್ನೂ ಮೇಲೆ ಹಣ ಕೊಟ್ಟು ಅಕ್ಕಿ ಖರೀದಿ ಮಾಡಬೇಕು, ಅಲ್ಲವೇ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಮೊದಲು ಎಲ್ಲರಿಗೂ ಫ್ರೀ ಎಂದರು. ಆಮೇಲೆ ಷರತ್ತು ಎಂದರು. ಈಗ ನೋಡಿದರೆ ಸರಕಾರದ ಮೇಲೆ ಹೊರೆ ತಪ್ಪಿಸಲು ಬಿಪಿಎಲ್, ಎ ಪಿಎಲ್ ನಾಟಕ ಆಡುತ್ತಿದ್ದಾರೆ. ಐದೂ ಗ್ಯಾರಂಟಿಗಳ ಮೇಲೆ ವರ್ಷಕ್ಕೆ ₹52,000 ಕೋಟಿ ಖರ್ಚು ಮಾಡಲಾಗುತ್ತಿದೆ, ಸರಿ. ಜನರ ತೆರಿಗೆ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗ ಮಾಡುವುದು ಬೇರೆ. ನಿಜಕ್ಕೂ ಗ್ಯಾರಂಟಿಗಳಿಂದ ಸರಕಾರಕ್ಕೆ ಹೊರೆ ಏನೂ ಇಲ್ಲ. ತೆರಿಗೆ ಹೆಚ್ಚಿಸಿ ಸಂಗ್ರಹ ಮಾಡಿರುವ ಹಣ ಏನಾಯಿತು? ಈಗ ರಾಜ್ಯ ಸರ್ಕಾರ ₹1.5 ಲಕ್ಷ ಕೋಟಿ ಸಾಲ ಮಾಡುತ್ತಿದೆ. ಆ ಸಾಲ ತೀರಿಸುವವರು ಯಾರು? ಬಡ್ಡಿ ಕಟ್ಟುವವರು ಯಾರು? ಮತ್ತೆ ಮತ್ತೆ ಸರಕಾರ ಜನರ ಮೇಲೆಯೇ ಹೊರೆ ಹೊರೆಸುತ್ತದೆ ಎಂದು ಅವರು ಕಿಡಿಕಾರಿದರು.
ಕರ್ನಾಟಕದ ಗ್ಯಾರಂಟಿಗಳ ಪ್ರಧಾನಿ ಮೋದಿ ಅವರನ್ನು ರಾಜ್ಯಕ್ಕೆ ಬರುವಂತೆ ಕರೆದಿರುವ ಸಿಎಂ ಸಿದ್ದರಾಮಯ್ಯ ಅವರು; ಗ್ಯಾರಂಟಿ ಸ್ಕೀಮ್ ಪರಿಶೀಲನೆ ಮಾಡಲು ಪ್ರಧಾನಿಗೆ ಫ್ಲೈಟ್ ಮಾಡಿಕೊಡುತ್ತೇವೆ ಎಂದಿರುವ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿಗಳನ್ನು ಕರೆದು ಇವರು ಏನು ಮಾಡುತ್ತಾರೆ? ಇಲ್ಲಿ ಏನೇನು ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿಗಳು ಇರಲಿ, ಇಲ್ಲಿನ ದುಸ್ಥಿತಿಯನ್ನು ನಾವೇ ನೋಡುತ್ತಿದ್ದೇವೆ. ಸಿಎಂ ಹೇಳಿದಂತೆ ಬಿಜೆಪಿಯವರ ಮೇಲೆ ಕೇಸ್ ಹಾಕಲಿ ನೋಡೋಣ. ಅದಕ್ಕೂ ಮೊದಲು ಅವರು ರಾಜ್ಯದ ಸ್ಥಿತಿಯನ್ನು ಸರಿ ಮಾಡಲಿ ಎಂದು ಟಾಂಗ್ ಕೊಟ್ಟರು.
ರೈತರ ಆಸ್ತಿಗಳು, ದೇವಾಲಯಗಳು ವಕ್ಫ್ ಆಸ್ತಿ ಎಂದು ಬರುತ್ತಿರುವ ಬಗ್ಗೆ ಸರಕಾರವೇ ಕಾರಣ. ಈ ವಿವಾದಕ್ಕೆ ಸರಕಾರವೇ ತೆರೆ ಎಳೆಯಬೇಕು. ಸ್ವತಃ ಮುಖ್ಯಮಂತ್ರಿ ಅವರೇ ಸೂಚನೆ ಕೊಟ್ಟ ಕಾರಣ ಇಷ್ಟೆಲ್ಲಾ ಮಾಡುತ್ತಿದ್ದೇವೆ ಎಂದು ವಕ್ಫ್ ಸಚಿವರೇ ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ಹೀಗಿದ್ದ ಮೇಲೆ ಸ್ವತಃ ಮುಖ್ಯಮಂತ್ರಿ ಅವರೇ ಈ ಗೊಂದಲವನ್ನು ಸರಿ ಮಾಡಬೇಕು ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.
ಸರಕಾರದಿಂದಲೇ ಇಷ್ಟೆಲ್ಲಾ ಗೊಂದಲ ಸೃಷ್ಟಿ ಆಗಿದೆ. ರೈತರ ಜಮೀನನ್ನು ಮಾತ್ರ ವಕ್ಫ್ ಆಸ್ತಿ ಮಾಡಲಾಗುತ್ತಿದೆ. ಜನರಲ್ಲಿ ಆತಂಕ ಎದುರಾಗಿದೆ. ಉಳ್ಳವರು ವಕ್ಫ್ ಆಸ್ತಿ ವಶಕ್ಕೆ ಪಡೆದಿರುವ ಬಗ್ಗೆ ಏನೂ ಕ್ರಮ ಆಗಿಲ್ಲ. ಹೀಗಾಗಿ ಸರಕಾರವೇ ಇದಕ್ಕೆ ತೆರೆ ಎಳೆಯಬೇಕು. ಅಶಾಂತಿ ಉಂಟು ಮಾಡಲು ಸರಕಾರ ಮಾಡಿರುವ ಮಹಾ ಅಪರಾಧವೇ ಕಾರಣ ಎಂದು ಹೇಳಿದರು.












Click it and Unblock the Notifications