ಕರ್ನಾಟಕ ಗ್ಯಾರಂಟಿ ತೆಲಂಗಾಣದಲ್ಲಿ ವರ್ಕೌಟ್: ಮಹತ್ವದ ಹೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆ
ಕಲಬುರಗಿ, ಡಿಸೆಂಬರ್ 03: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಪಕ್ಷಕ್ಕೆ ನೆರೆಯ ತೆಲಂಗಾಣದಲ್ಲಿ ಅಧಿಕಾರ ತಂದುಕೊಟ್ಟಿದೆ ಎಂದು ರಾಜ್ಯದ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಕುರಿತು ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಗ್ಯಾರಂಟಿ ವರ್ಕೌಟ್ ಆಗಿದೆ. ಮಧ್ಯಪ್ರದೇಶ, ರಾಜಸ್ತಾನದಲ್ಲಿ ಸ್ವಲ್ಪ ಹಿನ್ನಡೆ ಆಗಿರುವುದು ನಿಜವಾದರೂ, ಪೂರ್ಣ ಫಲಿತಾಂಶದ ಬಳಿಕ ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಕುಳಿತು ಪರಾಮರ್ಶೆ ನಡೆಸಲಿದ್ದಾರೆ ಎಂದು ಹೇಳಿದರು.

ತೆಲಂಗಾಣದಲ್ಲಿ ಬಿಆರ್ ಎಸ್ ಸರ್ಕಾರದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದಿಂದ ಹಿನ್ನಡೆ ಆಗಿದೆ. ಮತ್ತೊಂದೆಡೆ, ಕಾಂಗ್ರೆಸ್ ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದೆ. ಜಾತಿ ಜಾತಿಗಳ ಮಧ್ಯೆ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿಯವರು ಮಾಡಿದರೆ ನಮ್ಮದು ಜನಪರ ನಿಲುವು ಎಂದರು.
ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಬಿಜೆಪಿ ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದಿತ್ತು. ಕರ್ನಾಟಕದಲ್ಲಿ ಮಾಡಿದಂತೆಯೇ ಮಧ್ಯಪ್ರದೇಶಲ್ಲಿ ಬಿಜೆಪಿ ಅವರು ಆಪರೇಷನ್ ಮಾಡಿ ಅಧಿಕಾರ ಮಾಡಿದ್ದರು. ನಮ್ಮದು ಹಾಗಲ್ಲ. ನಮ್ಮದೇನಿದ್ದರೂ ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಎಂದು ಸಮರ್ಥಿಸಿಕೊಂಡರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ. ರಾಜ್ಯಗಳ ಚುನಾವಣೆಯೇ ಬೇರೆ. ರಾಷ್ಟ್ರ ಚುನಾವಣೆಯೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಫಲಿತಾಂಶ ದಿಕ್ಸೂಚಿ ಎಂದು ಹೇಳಲಾಗದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಆಪರೇಷನ್ ಕಮಲ ಭಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಯಾವುದೇ ಆಪರೇಷನ್ ಭಯ ಇಲ್ಲ. ಆದರೆ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಿದೆ ಎಂದ ಅವರು, ಬಿಜೆಪಿಯವರು ತೋಳ್ಬಲ, ಹಣ ಬಲ, ಸಿಬಿಐ, ಇ.ಡಿ ಬಳಕೆ ಮಾಡುತ್ತಾರೆ, ಹೀಗಾಗಿ ನಮ್ಮ ಶಾಸಕರನ್ನು ನಾವು ಸೇಫ್ ಆಗಿ ಇಟ್ಟುಕೊಳ್ಳಬೇಕಿದೆ ಎಂದು ಹೇಳಿದರು.
ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಮೊಯ್ಲಿ ವಿಶ್ವಾಸ
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಗಮನಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಧಿಕಾರ ಹಿಡಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶಾದ್ಯಂತ ಕಾಂಗ್ರೆಸ್ ಮತ್ತೆ ತಲೆ ಎತ್ತುತ್ತಿದೆ ಅನ್ನೋದು ಫಲಿತಾಂಶದಿಂದ ಗೊತ್ತಾಗುತ್ತಿದೆ. ಮಧ್ಯಪ್ರದೇಶದಲ್ಲಿ ಗೆಲ್ಲಬೇಕಿತ್ತು. ನಮ್ಮ ನಿರೀಕ್ಷೆಯೂ ಇತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿಯವರು ಸಾಕಷ್ಟು ಬಿಂಬಿಸಿದ್ದರು. ಈಗ ನೋಡಿದರೆ ಆ ರಾಜ್ಯದಲ್ಲಿ ಅಗ್ರಗಣ್ಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಬಿ.ಆರ್.ಎಸ್ ಮುಖಂಡ ಚಂದ್ರಶೇಖರ್ ರಾವ್ ಕಾಂಗ್ರೆಸ್ ಕೃಪಾಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅದೇ ಕಾಂಗ್ರೆಸ್ ಪಕ್ಷವನ್ನ ತುಳಿದಿದ್ದರು. ಈಗ ತೆಲಂಗಾಣ ಜನರು ಅವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಚಂದ್ರಶೇಖರರಾವ್ ಸ್ಥಿತಿಯನ್ನು ಲೇವಡಿ ಮಾಡಿದರು. ಇನ್ನು ತೆಲಂಗಾಣದಲ್ಲಿ ಗೆಲುವಿಗೆ ಅಲ್ಲಿನ ಒಗ್ಗಟ್ಟು ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಿದ ಅವರು, ರಾಹುಲ್ ಗಾಂಧಿ ಅವರ ವರ್ಚಸ್ಸು ಗೆಲುವಿಗೆ ಕಾರಣ ಎಂದರು.












Click it and Unblock the Notifications