ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ ಆಗುತ್ತಾ ಪಂಚ ಗ್ಯಾರಂಟಿ?
ಬೆಂಗಳೂರು, ಮಾರ್ಚ್ 25: ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಹೈಕಮಾಂಡ್ ಗೆ ತಮ್ಮ ಸಾಮರ್ಥ್ಯವೇನು ಎಂಬುದನ್ನು ತೋರಿಸಿಕೊಡುವ ಜರೂರತ್ತು ಎದುರಾಗಿದ್ದರೆ, ಹೈಕಮಾಂಡ್ ಕೂಡ ರಾಜ್ಯದ ನಾಯಕರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆ ಈ ಬಾರಿ ಸವಾಲ್ ಆಗಿದೆ.
ಕಾಂಗ್ರೆಸ್ ನೇತೃತ್ವದ ಐಎನ್ ಡಿಐಎ(ಇಂಡಿಯಾ) ಒಕ್ಕೂಟವು ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟವನ್ನು ಕಟ್ಟಿ ಹಾಕಬೇಕೆಂಬ ತೀರ್ಮಾನಕ್ಕೆ ಬಂದಿದ್ದು, ತಮ್ಮ ಸಹವರ್ತಿ ಪಕ್ಷಗಳ ಜತೆ ಈಗಾಗಲೇ ಸೀಟು ಹಂಚಿಕೆ ಮಾಡಿಕೊಂಡಿದ್ದು, ಕರ್ನಾಟಕದಲ್ಲಿ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳದೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟವನ್ನು ಎದುರಿಸಲು ತಯಾರಿ ಮಾಡಕೊಳ್ಳಲಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಬಿಜೆಪಿಯನ್ನು ಎದುರಿಸಿದ್ದವು.

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿದ್ದು, ಕಾಂಗ್ರೆಸ್ ಅವರನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗಿನ ರಾಜ್ಯದ ರಾಜಕೀಯವನ್ನು ನೋಡಿದ್ದೇ ಆದರೆ ಇಲ್ಲಿ ಮೂರು ಪಕ್ಷಗಳು ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡೇ ಬಂದಿದ್ದಾರೆ. ಹಲವು ಸಲ ಅಧಿಕಾರಕ್ಕಾಗಿ ಒಂದಾದರೂ ಕೆಲವೇ ಸಮಯದಲ್ಲಿ ಮೈತ್ರಿ ಮುರಿದುಕೊಂಡು ದೂರವಾಗಿದ್ದಾರೆ.
ತೆನೆ ಕಮಲ ಗಟ್ಟಿಯಾದರೆ 'ಕೈ' ಕಷ್ಟ
ತಳಮಟ್ಟದಲ್ಲಿಯೂ ಮೂರು ಪಕ್ಷಗಳ ಕಾರ್ಯಕರ್ತರು ಪ್ರತಿ ಚುನಾವಣೆಯನ್ನು ಎದುರಾಳಿಗಳಾಗಿಯೇ ಎದುರಿಸಿದ್ದಾರೆ. ಹೀಗಾಗಿ ಮೇಲ್ಮಟ್ಟದಲ್ಲಿ ನಾಯಕರು ಮೈತ್ರಿ ಮಾಡಿಕೊಂಡರೂ ಅದು ತಳಮಟ್ಟದ ಕಾರ್ಯಕರ್ತರನ್ನು ತಲುಪುವುದೇ ಇಲ್ಲ. ಕಾರಣ ಗ್ರಾಮ ಪಂಚಾಯಿತಿ ಮಟ್ಟದಿಂದ ವಿರೋಧಿಸಿಕೊಂಡು ಬಂದವರೊಂದಿಗೆ ಒಟ್ಟಾಗಿ ಹೋಗುವುದು ಕಷ್ಟದ ಕೆಲಸವೇ.. ಈ ಸಲದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಯಶಸ್ಸು ಪಡೆದರೆ ಕಾಂಗ್ರೆಸ್ ಗೆ ಭವಿಷ್ಯದಲ್ಲಿ ಕಷ್ಟವಾಗಲಿದೆ.
ಇವತ್ತು ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದರೆ ಅದರ ಹಿಂದೆ ಒಂದು ತಂತ್ರ ಅಡಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಏನೇ ಮಾಡಿದರೂ ಅದರ ಹಿಂದೆ ರಾಜಕೀಯ ತಂತ್ರವಂತು ಇದ್ದೇ ಇರುತ್ತದೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ರಾಜಕೀಯವಾಗಿ ವಿರೋಧಿಸುತ್ತಾ ಬಂದಿದ್ದ ದೇವೇಗೌಡರು ಈ ಬಾರಿಯ ಚುನಾವಣೆಯಲ್ಲಿ ಅವರೊಂದಿಗೆ ಕೈಜೋಡಿಸಿದ್ದಾರೆ ಎನ್ನುವುದು ಹಲವು ಸಂಶಯಗಳ ಜತೆಗೆ ಕುತೂಹಲಕ್ಕೂ ಕಾರಣವಾಗಿದೆ. ಇದರ ಅಸಲಿಯತ್ತು ಗೊತ್ತಾಗ ಬೇಕಾದರೆ ಫಲಿತಾಂಶದವರೆಗೆ ಕಾಯಬೇಕಾಗಿದೆ.

ಪಂಚ ಗ್ಯಾರಂಟಿ ಮತ ತಂದು ಕೊಡುತ್ತಾ?
ಇನ್ನು ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯನ್ನು ಎದುರಿಸುವುದರೊಂದಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿವೆ. ಇವರ ನಡುವೆ ಏನೇ ಗೊಂದಲವಿದ್ದರೂ ಅದೆಲ್ಲವನ್ನು ಸರಿಪಡಿಸಿಕೊಂಡು ಮುಂದೆ ಹೋಗುವ ಪ್ರಯತ್ನ ಮಾಡುತ್ತಿದ್ದು, ಇವರಿಗೆ ಮೋದಿಯೇ ಶ್ರೀರಕ್ಷೆಯಾಗಿದೆ. ಕಳೆದ ಹತ್ತು ವರ್ಷಗಳ ಸಾಧನೆಯನ್ನು ಹೇಳಿಕೊಂಡು ಮತ ಕೇಳುವ ತೀರ್ಮಾನವನ್ನು ಈಗಾಗಲೇ ಬಿಜೆಪಿಗರು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈಗಾಗಲೇ ಮೋದಿ ಎರಡು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ.
ಈ ನಡುವೆ ಕಾಂಗ್ರೆಸ್ ಗೆಲುವಿಗಾಗಿ ಸರ್ಕಸ್ ಆರಂಭಿಸಿದ್ದು, ಕೇಂದ್ರದ ನಾಯಕರನ್ನು ನಂಬಿ ಅವರ ಮೂಲಕ ಮತವನ್ನು ಸೆಳೆಯುವ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಲ್ಲ. ಇವತ್ತು ಕೇಂದ್ರ ನಾಯಕರೇ ರಾಜ್ಯದ ಸಾಧನೆಗಳನ್ನು ಹೇಳಿಕೊಂಡು ಅದರಲ್ಲೂ ಪಂಚ ಗ್ಯಾರಂಟಿಯನ್ನೇ ಮುಂದಿಟ್ಟುಕೊಂಡು ಮತ ಕೇಳಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೂ ಈಗ ಇದೊಂದೇ ದಾರಿಯಾಗಿದೆ. ಪಂಚ ಗ್ಯಾರಂಟಿ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅದನ್ನೇ ಮತವಾಗಿ ಪರಿವರ್ತಿಸಲು ನಾಯಕರು ತಯಾರಿ ಮಾಡಿಕೊಳ್ಳಲೇ ಬೇಕಾಗಿದೆ.
ಪಂಚ ಗ್ಯಾರಂಟಿ ಪ್ರಚಾರಕ್ಕೆ ಬಳಕೆ
ಇಷ್ಟರಲ್ಲೇ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಪ್ರಚಾರ ಮಾಡಿ ಅದನ್ನು ಮತದಾರರಿಗೆ ತಲುಪಿಸಿ ಅವರು ಕಾಂಗ್ರೆಸ್ಸಿಗೆ ಮತಹಾಕುವಂತೆ ಮಾಡಲು ರಾಜ್ಯ ನಾಯಕರು ತಾಕೀತು ಮಾಡಿದ್ದಾರೆ. ಅದರಂತೆ ಬಿಜೆಪಿಯ ದುರಾಡಳಿತ, ಅನಾಚಾರಗಳನ್ನು ಜನರಿಗೆ ತಿಳಿಸುವುದು, ಸರ್ಕಾರದ ಕೊಡುಗೆ ಏನು ಎಂಬುದನ್ನೂ ಜನರಿಗೆ ಮನವರಿಕೆ ಮಾಡಿಕೊಡುವುದು, ಹೀಗೆ ರಾಜ್ಯದ ಸಾಧನೆಯನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ತಯಾರಿ ನಡೆಸಲಾಗಿದೆ.
ಬಹುಶಃ ತಿಂಗಳಾಂತ್ಯಕ್ಕೆ ಕೇಂದ್ರದ ನಾಯಕರು ರಾಜ್ಯದಲ್ಲಿ ಪ್ರಚಾರ ಮಾಡುವ ಸಾಧ್ಯತೆಯಿದೆ. ಈ ವೇಳೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ, ಬರಪರಿಹಾರ ನೀಡದಿರುವುದು, ತೆರಿಗೆ ಹಣ ನೀಡುವುದರಲ್ಲಿ ತಾರತಮ್ಯ ಹೀಗೆ ಕೇಂದ್ರದ ವಿರುದ್ಧ ಹತ್ತಾರು ವಿಚಾರಗಳನ್ನು ಮುಂದಿಟ್ಟುಕೊಂಡು ಅದನ್ನು ಪ್ರಚಾರಕ್ಕೆ ಬಳಸುವ ಸಾಧ್ಯತೆಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿರುವ ಕಾಂಗ್ರೆಸ್ ಕನಿಷ್ಟ 20 ಸ್ಥಾನವನ್ನಾದರೂ ಗೆಲ್ಲಲೇ ಬೇಕೆಂದು ಹವಣಿಸುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಗೆಲುವಿಗೆ ಪಂಚ ಗ್ಯಾರಂಟಿ ಯೋಜನೆ ಸಹಕಾರಿ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications