ಮುಡಾ ಹಗರಣ: ಸಿದ್ದರಾಮಯ್ಯ ಪರ ಜಿ.ಟಿ ದೇವೇಗೌಡ ಭರ್ಜರಿ ಬ್ಯಾಟಿಂಗ್: ಡಿ ಕೆ ಸುರೇಶ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 04: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು. ಹಾಗಾದರೆ ಎಚ್ಡಿ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರಾ? ಎಂದು ಜೆಡಿಎಸ್ ನಾಯಕರ ವಿರುದ್ದನೇ ಜಿ ಟಿ ದೇವೇಗೌಡ್ರು ಹರಿಹಾಯ್ದಿದ್ದಾರೆ. ಈ ಬಗ್ಗೆ ಮಾಜಿ ಸಂಸದ ಡಿ ಕೆ ಸುರೇಶ್ ಅವರು ವಾಸ್ತವಾಂಶದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಜಿ.ಟಿ ದೇವೇಗೌಡ ಅವರ ಹೇಳಿಕೆ ಕಾಂಗ್ರೆಸ್ ಗೆ ಆತ್ಮಸ್ಥೈರ್ಯ ತುಂಬಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇದು ಅವರ ಪಕ್ಷದ ಆಂತರಿಕ ವಿಚಾರ. ಅವರ ಪಕ್ಷದ ನಾಯಕರಿಗೆ ತಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಅವರ ಪಕ್ಷದ ನಾಯಕರು ಮಾಡಿದ್ದನ್ನೆಲ್ಲ ಒಪ್ಪಬೇಕು ಎಂದೇನಿಲ್ಲ. ಅವರು ವಾಸ್ತವತೆಯನ್ನು ಹೇಳಿದ್ದಾರೆ. ಇಲ್ಲಿ ಎಲ್ಲ ಪಕ್ಷದವರೂ ಫಲಾನುಭವಿಗಳಿದ್ದು, ಆರೋಪಿಗಳಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ತೀರ್ಮಾನದಂತೆ ಆಗಿದೆ. ಹೀಗಾಗಿ ಇದನ್ನು ಏಕೆ ದೊಡ್ಡದಾಗಿ ಮಾಡಿತ್ತಿದ್ದೀರಿ ಎಂದು ಹೇಳಿದ್ದಾರೆ ಎಂದರು.

ಮುನಿರತ್ನ ಅವರ ಪ್ರಕರಣ ತನಿಖೆ ಹಿಂದುಳಿಯುತ್ತಿದೆ ಎಂಬ ಪ್ರಶ್ನೆಗೆ, "ಈ ವಿಚಾರವಾಗಿ ಮಾಹಿತಿ ಇಲ್ಲ. ಇದು ಅಸಹ್ಯವಾದ ವಾತಾವರಣ. ರಾಜ್ಯದ ಬೆಳವಣಿಗೆಗೆ ಒಳ್ಳೆಯದಲ್ಲ. ಕರ್ನಾಟಕ ಉತ್ತಮ ಆಡಳಿತ, ಬೆಳವಣಿಗೆ ಹಾಗೂ ಪ್ರಗತಿ ಸಾಧಿಸುತ್ತದೆ ಎಂದು ಎಲ್ಲಾ ಕಡೆ ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆ ತಲೆತಗ್ಗಿಸುವಂತಿದೆ" ಎಂದು ತಿಳಿಸಿದರು.
ಈ ಅಸಹ್ಯ ವಾತವರಣಕ್ಕೆ ಮುನ್ನುಡಿ ಬರೆದಿದ್ದು ಯಾವ ಪಕ್ಷ ಎಂದು ಕೇಳಿದಾಗ, "ಎಲ್ಲಾ ಪಕ್ಷಗಳು ಇದಕ್ಕೆ ಕಾರಣ. ಇದು ಒಂದು ಪಕ್ಷದ ಕೊಡುಗೆ ಅಲ್ಲ. ಸುದ್ದಿಯಲ್ಲಿರಬೇಕು ಎಂದು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ಇದರ ಜತೆಗೆ ಮಾಧ್ಯಮಗಳ ಪಾತ್ರವೂ ಇದೆ. ಮಾಧ್ಯಮಗಳು ಸಮಾಜ ತಿದ್ದುವ ಜವಾಬ್ದಾರಿ ಹೊಂದಿವೆ. ಜನ ನಾಯಕರ ಮೇಲೆ ಬೇಸತ್ತಿದ್ದಾರೆ" ಎಂದು ತಿಳಿಸಿದರು.
ಎಸ್.ಟಿ ಸೋಮಶೇಖರ್ ಹಾಗೂ ಜಿಟಿ ದೇವೇಗೌಡ ಅವರು ಒಟ್ಟಾಗಿ ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿರುವ ಬಗ್ಗೆ ಮಾತನಾಡಿ, ಅವರು ದೂರು ಕೊಟ್ಟು ತಮ್ಮ ಕೆಲಸ ಮಾಡಿದ್ದಾರೆ. ನ್ಯಾಯಾಲಯ ಅವರ ಮನವಿ ಪುರಸ್ಕರಿಸಿ ತನಿಖೆಗೆ ಆದೇಶ ನೀಡಿದೆ. ತನಿಖೆ ಮುಗಿಯುವವರೆಗೂ ಎಲ್ಲರೂ ತಾಳ್ಮೆಯಿಂದ ಇರಬೇಕು. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಸರ್ಕಾರದ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಇದು ಸರ್ಕಾರದ ಜವಾಬ್ದಾರಿ. ಅಲ್ಲಿನ ಶಾಸಕರು ನಿಷ್ಕ್ರಿಯರಾಗಿದ್ದರು. ಈಗ ಅಲ್ಲಿ ಶಾಸಕರು ಇಲ್ಲ. ಹೀಗಾಗಿ ಅಲ್ಲಿನ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ. ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಅರ್ಜಿಗಳು ಬಂದಿದ್ದವು, ಚನ್ನಪಟ್ಟಣ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಭಾಗ. ಹಿಂದೆ ಸಾತನೂರು ಕ್ಷೇತ್ರದಲ್ಲಿ ಚನ್ನಪಟ್ಟಣದ ಭಾಗವಾಗಿತ್ತು. ಅವರ ರಾಜಕೀಯ ಜೀವನದಲ್ಲಿ ಆ ಜನರ ಕೊಡುಗೆಯೂ ಇದೆ.
ರಾಮನಗರ ಜಿಲ್ಲೆಯನ್ನು ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ನಿಲ್ಲುವಂತೆ ಮಾಡುವ ಪ್ರಯತ್ನ ಮಾಡುವುದಾಗಿ ನಾನು, ಡಿಸಿಎಂ ಇಬ್ಬರೂ ಹೇಳಿದ್ದೇವೆ. ನಾನು ಸೋತಿದ್ದರೂ ನಮ್ಮ ಗುರಿ ಜಿಲ್ಲೆಯ ಅಭಿವೃದ್ಧಿ. ಈ ನಿಟ್ಟಿನಲ್ಲಿ ನಾಲ್ಕೂ ತಾಲೂಕಿನ ನಾಯಕರು ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಇದ್ದ ಶಾಸಕರು ನಮಗೆ ಸಹಕಾರ ನೀಡುತ್ತಿರಲಿಲ್ಲ. ಈಗ ಅಲ್ಲಿ ಶಾಸಕರು ಇಲ್ಲ. ಹೀಗಾಗಿ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ" ಎಂದು ತಿಳಿಸಿದರು.
ಯೋಗೇಶ್ವರ್ ಅವರು ಅತಂತ್ರರಾದರೆ ಎಂಬ ಪ್ರಶ್ನೆಗೆ ಉತ್ತರಿಸಿ, ಅದು ಅವರ ವೈಯಕ್ತಿಕ ವಿಚಾರ. ಅವರು ಈಗ ಸ್ನೇಹಿತರು. ಅವರಲ್ಲಿ ಒಬ್ಬರು ನಿರ್ದೇಶಕರು, ನಟರು, ನಿರ್ಮಾಪಕರು ಇದ್ದಾರೆ. ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ಒಬ್ಬರು ನಿರ್ಮಾಪಕರಾದರೆ, ಮತ್ತೊಬ್ಬರು ನಟರಾಗುತ್ತಾರೆ. ಅವರ ತಂಡದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಚನ್ನಪಟ್ಟಣಕ್ಕೆ ಸುರೇಶ್ ಅವರೇ ಅಭ್ಯರ್ಥಿಯಾಗಬೇಕು ಎಂದು ಜಮೀರ್ ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, ಅವರ ಅಭಿಮಾನಕ್ಕೆ ಪ್ರೀತಿ ವಿಶ್ವಾಸಕ್ಕೆ ಸಾಷ್ಟಾಂಗ ನಮಸ್ಕಾರಗಳು. ಚುನಾವಣೆ ಘೋಷಣೆ ನಂತರ ನಮ್ಮ ಪಕ್ಷ ಉತ್ತಮ ಅಭ್ಯರ್ಥಿಯನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.ನಿಮಗೆ ಅನ್ಯಾಯ ಆಗಿದೆ ಹೀಗಾಗಿ ನೀವೇ ಸ್ಪರ್ಧಿಸಬೇಕು ಎಂಬ ಒತ್ತಾಯದ ಬಗ್ಗೆ ಕೇಳಿದಾಗ, "ನನಗೆ ಅನ್ಯಾಯ ಆಗಿಲ್ಲ. ಜನ ನನಗೆ ವಿಶ್ರಾಂತಿ ನೀಡಿದ್ದಾರೆ" ಎಂದರು.
ಕೊನೆ ಕ್ಷಣದಲ್ಲಿ ನೀವೇ ನಿಲ್ಲುತ್ತೀರಿ ಅದಕ್ಕೆ ಇಷ್ಟು ಕೆಲಸ ಆಗುತ್ತಿದೆ ಎಂದು ಕೇಳಿದಾಗ, "ರಾಮನಗರದಲ್ಲೂ ಸುಮಾರು ₹500 ಕೋಟಿ ಮೊತ್ತದ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಮಾಗಡಿಯಲ್ಲೂ ಕೆಲಸ ನಡೆಯುತ್ತಿವೆ. ನಾನು ಸೋತಿದ್ದೇನೆ ಎಂದು ಕೆಲಸ ನಿಲ್ಲಿಸಿಲ್ಲ. ಆ ಭಾಗದ ಶಾಸಕರು ನಾಯಕರು ಮನವಿ ಮಾಡಿದರೆ ಅವರ ಕೆಲಸ ಮಾಡಿಕೊಡುತ್ತೇವೆ" ಎಂದು ತಿಳಿಸಿದರು.












Click it and Unblock the Notifications