ಜಿ.ಟಿ.ದೇವೇಗೌಡಗೆ ಕೊಟ್ಟ ಮಾತು ತಪ್ಪಿದ ಕುಮಾರಸ್ವಾಮಿ
Recommended Video

ಬೆಂಗಳೂರು, ಜೂನ್ 09: ಖಾತೆ ಹಂಚಿಕೆ ಆದ ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಅವರ ಅಸಮಾಧಾನಕ್ಕೆ ಕಾರಣ ಕುಮಾರಸ್ವಾಮಿ ಅವರು ಕೊಟ್ಟ ಮಾತಿಗೆ ತಪ್ಪಿರುವುದು.
ಹೌದು, ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಜಿ.ಟಿ.ದೇವೇಗೌಡ ಅವರಿಗೆ ಮಾತೊಂದು ನೀಡಿದ್ದರು. ಆದರೆ ಅದನ್ನು ಈಗ ಅವರು ತಪ್ಪಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಸಮಯದಲ್ಲಿ ಮಾತನಾಡಿದ್ದ ಅವರು 'ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಮಾನವಾದ ಸ್ಥಾನವನ್ನು ಜಿ.ಟಿ.ದೇವೇಗೌಡಗೆ ನೀಡುತ್ತೇನೆ' ಎಂದು ಮಾತು ಕೊಟ್ಟಿದ್ದರು. ಆದರೀಗ ಮಾತು ತಪ್ಪಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜಿ.ಟಿ.ದೇವೇಗೌಡ ಅಭಿಮಾನಿಗಳು ಇದೇ ವಿಷಯವನ್ನು ಚರ್ಚೆ ಮಾಡುತ್ತಿದ್ದು, ಕುಮಾರಸ್ವಾಮಿ ಮಾತುತಪ್ಪಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂಟನೇ ತರಗತಿ ಓದಿದವರಿಗೆ ಉನ್ನತ ಶಿಕ್ಷಣ ಖಾತೆ
ಕುಮಾರಸ್ವಾಮಿ ಅವರ ಮಾತು ನಂಬಿ ಗೃಹ ಖಾತೆಯನ್ನೋ, ಇಂಧನ ಖಾತೆಯನ್ನೋ ನಿರೀಕ್ಷಿಸುತ್ತಿದ್ದ ಜಿ.ಟಿ.ದೇವೇಗೌಡ ಅವರಿಗೆ ಈಗ ಸಿಕ್ಕಿರುವುದು ಉನ್ನತ ಶಿಕ್ಷಣ ಸಚಿವ ಸ್ಥಾನ. ಎಂಟನೇ ತರಗತಿ ಕಲಿತಿರುವ ಜಿ.ಟಿ.ದೇವೇಗೌಡ ಅವರು ಶಿಕ್ಷಣ ಖಾತೆ ಇಟ್ಟುಕೊಂಡು ಏನು ತಾನೇ ಮಾಡಿಯಾರು.

ಎಚ್ಡಿಕೆ ಮಾತು ನಂಬಿ ಜಿಟಿಡಿಗೆ ನಿರಾಸೆ
ಕುಮಾರಸ್ವಾಮಿ ಅವರ ಮಾತು ನಂಬಿದ್ದ ಜಿ.ಟಿ.ದೇವೇಗೌಡಗೆ ಈಗ ತೀವ್ರ ನಿರಾಸೆಯಾಗಿದ್ದ ಅವರು ಅಸಮಾಧಾನಗೊಂಡಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಕುರಿತು ಆಲೋಚನೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಅಭಿಮಾನಿಗಳೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಇದೇ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನೇ ಸೋಲಿಸಿದ್ದ ಜಿಟಿಡಿ
ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನೇ ಸೋಲಿಸಿ ಜೆಡಿಎಸ್ಗೆ ಘನತೆ ತಂದುಕೊಟ್ಟ ಜಿ.ಟಿ.ದೇವೇಗೌಡ ಅವರಿಗೆ ಪಕ್ಷವು ಉನ್ನತ ಸ್ಥಾನವನ್ನೇ ನೀಡುತ್ತದೆ ಎಂದೇ ಎಣಿಸಲಾಗಿತ್ತು ಆದರೆ ಇದೀಗ ಅದು ಸುಳ್ಳಾಗಿದೆ. ದೇವೇಗೌಡ ಅವರಿಗೆ ಪ್ರಭಾವಿ ಖಾತೆ ಸಿಗದ ಹಿಂದೆ ಕಾಂಗ್ರೆಸ್ನ ಕೈಗಳು ಕೆಲಸ ಮಾಡಿವೆಯೇ ಎಂಬುದನ್ನೂ ಗಮನಿಸಬೇಕಾಗಿದೆ.

ಸಿದ್ದರಾಮಯ್ಯ ಕೈವಾಡ
ತಮ್ಮನ್ನು ಸೋಲಿಸಿದ್ದ ಜಿ.ಟಿ.ದೇವೇಗೌಡ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ಸಿದ್ದರಾಮಯ್ಯ ಅವರೇ ಜಿಟಿ.ದೇವೇಗೌಡ ಅವರಿಗೆ ಪ್ರಭಾವಿ ಖಾತೆ ಸಿಗದ ಹಾಗೆ ನೋಡಿಕೊಂಡಿದ್ದಾರೆ ಎಂಬ ವಾದವೂ ಇದೆ. ಪ್ರಭಾವಿ ಖಾತೆ ಸಿಕ್ಕರೆ ಜಿ.ಟಿ.ದೇವೇಗೌಡ ಅವರು ಇನ್ನಷ್ಟು ಬಲಿಷ್ಠರಾಗುತ್ತಾರೆ ಎಂಬ ಭಯ ಸಿದ್ದರಾಮಯ್ಯ ಅವರಿಗಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ನಲ್ಲೇ ಮೂಲೆಗುಂಪಾಗುತ್ತಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಜೆಡಿಎಸ್ನ ಖಾತೆ ಹಂಚಿಕೆಯಲ್ಲಿ ಮೂಗು ತೂರಿಸುವ ಅವಕಾಶ ಕಡಿಮೆ ಎಂಬ ಮಾತೂ ಇದೆ.

ಜೆಡಿಎಸ್ ಪಕ್ಷದಲ್ಲಿ ಭಿನ್ನಮತ
ಖಾತೆ ಹಂಚಿಕೆ ಆಗುತ್ತಿದ್ದಂತೆ ಜೆಡಿಎಸ್ನಲ್ಲಿ ಭಿನ್ನಮತ ಹೊರಬಂದಿದೆ. ಜಿ.ಟಿ.ದೇವೇಗೌಡ ಅವರ ಜೊತೆಗೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಕೂಡಾ ಪಕ್ಷದ ವರಿಷ್ಠರ ಮೇಲೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಜೆಡಿಎಸ್ ವರಿಷ್ಠರು ಅವರಿಬ್ಬರ ಅಸಮಾಧಾನ ವ್ಯಕ್ತಪಡಿಸಲು ಪ್ರಯತ್ನನಡೆಸಿದ್ದಾರೆ.












Click it and Unblock the Notifications