Gruha Jyothi Scheme: ಎರಡು ದಿನಗಳಲ್ಲಿ 1,61,958 ಗ್ರಾಹಕರಿಂದ ನೋಂದಣಿ: ದಾಖಲೆ ಗೊಂದಲಕ್ಕೆ ಬೆಸ್ಕಾಂ ಸಿಇಒ ಸ್ಪಷ್ಟನೆ
200 ಯೂನಿಟ್ ಉಚಿತ ವಿದ್ಯುತ್ ಪಡೆಯುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಲು ನೋಂದಣಿ ಪ್ರಕ್ರಿಯೆ ಜೂನ್ 18ರಂದು ಆರಂಭವಾಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೇವಲ ಎರಡೇ ದಿನದಲ್ಲಿ 1,61,958 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಎಸ್ಕಾಂ ಮಾಹಿತಿ ನೀಡಿದೆ.
ಜೂನ್ 18ರಂದು ಭಾನುವಾರ ಮೊದಲ ದಿನ ಸರ್ವರ್ ಕೈಕೊಟ್ಟಿದ್ದರ ಪರಿಣಾಮ 55,000 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಸೋಮವಾರ ಸರ್ವರ್ ಸಮಸ್ಯೆ ಸರಿಹೋದ ಹಿನ್ನಲೆಯಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಈ ಮಾಹಿತಿ ನೀಡಿದ್ದು, ಸೋಮವಾರ ಸಂಜೆ 5.30 ಗಂಟೆಯ ವೇಳೆಗೆ ರಾಜ್ಯದಲ್ಲಿ ಒಟ್ಟು1,61,958 ಗ್ರಾಹಕರು ಗೃಹಜ್ಯೋತಿ ಯೋಜನೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಜೂನ್ ತಿಂಗಳ ವಿದ್ಯುತ್ ಬಳಕೆಯ ಬಿಲ್ ಅನ್ನು ಗ್ರಾಹಕರು ಪಾವತಿ ಮಾಡಬೇಕಿದ್ದು, ಜುಲೈ ತಿಂಗಳಿನಿಂದ ಬಳಸುವ ವಿದ್ಯುತ್ ಉಚಿತವಾಗಿರುತ್ತದೆ. ಇದಕ್ಕೆ ಷರತ್ತುಗಳನ್ನು ವಿಧಿಸಿದ್ದು ಷರತ್ತುಗಳ ಅನ್ವಯ ವಿದ್ಯುತ್ ಬಳಕೆ ಮಾಡಿದಾಗ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಯೋಜನೆ ಎಲ್ಲರಿಗೂ ಅನ್ವಯಿಸಲಿದ್ದು, ರಾಜ್ಯದಲ್ಲಿ ವಾಸಿಸುವ ಎಲ್ಲರೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬಾಡಿಗೆ ಮನೆಯವರು ಕೂಡ ಉಚಿತ ವಿದ್ಯುತ್ ಪಡೆಯಲು ಅವಕಾಶ ಇದೆ.
ದಾಖಲೆ ನೀಡುವ ಬಗ್ಗೆ ಮಹಾಂತೇಶ ಬೀಳಗಿ ಸ್ಪಷ್ಟನೆ
ಇನ್ನು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಏನೆಲ್ಲಾ ದಾಖಲೆ ನೀಡಬೇಕು ಎನ್ನುವ ಬಗ್ಗೆ ಸಾಕಷ್ಟು ಜನರಿಗೆ ಗೊಂದಲ ಇದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಬಾಡಿಗೆ ಕರಾರು ಪತ್ರ ನೀಡಬೇಕಾ ಎನ್ನುವ ಪ್ರಶ್ನೆಗಳು ಸಹಜ. ಆದರೆ ಇದಕ್ಕೆಲ್ಲಾ ಬೆಸ್ಕಾಂ ಸಿಇಒ ಮಹಾಂತೇಶ ಬೀಳಗಿ ಸ್ಪಷ್ಟೀಕರಣ ನೀಡಿದ್ದು, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

"ನೋಂದಣಿ ಪ್ರಕ್ರಿಯೆ ಸರಳವಾಗಿದ್ದು ಗ್ರಾಹಕರು ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ, ವಿದ್ಯುತ್ ಬಿಲ್ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ, ಹಾಗೂ ಮೊಬೈಲ್ ನಂಬರ್ ನಮೂದಿಸಿದರೆ ಸಾಕು" ಎಂದು ಹೇಳಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
https://sevasindhugs.karnataka.gov.in/ ವೆಬ್ಸೈಟ್ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್, ಕರ್ನಾಟಕ ಒನ್, ನಾಡಕಚೇರಿ, ಎಸ್ಕಾಂ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕೂಡ ನೋಂದಣಿ ಮಾಡಬಹುದು. ನೋಂದಣಿ ಮಾಡಲು ಆಧಾರ್ ನಂಬರ್, ವಿದ್ಯುತ್ ಬಿಲ್ ಖಾತೆ ಸಂಖ್ಯೆ, ಮೊಬೈಲ್ ನಂಬರ್ ನೀಡಬೇಕಾಗುತ್ತದೆ. ಯಾವುದೇ ಸಮಸ್ಯೆಗಳು, ದೂರುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ 1912 ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಅರ್ಜಿಯನ್ನು ಸ್ವೀಕರಿಸಲು ಆರಂಭಿಸಿದ್ದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲವಾದ ಕಾರಣ ಗ್ರಾಹಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.












Click it and Unblock the Notifications