State Budget 2023: ಪಂಚ ಗ್ಯಾರಂಟಿಯೇ ಮೊದಲ ಆದ್ಯತೆ; ಬಜೆಟ್ನಲ್ಲಿ ನಾನಾ ಇಲಾಖೆಗಳ ಅನುದಾನ ಕಡಿತ: ಯಾವ ಇಲಾಖೆಗೆ ಏಫೆಕ್ಟ್ ?
ಬೆಂಗಳೂರು, ಜೂನ್ 30: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಬಹುಮುಖ್ಯ ಕಾರಣವಾಗಿರುವ ಐದು ಗ್ಯಾರಂಟಿಗಳ ಜಾರಿಯೇ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ಆದ್ಯತೆಯಾಗಿದ್ದು, ಈ ಬಾರಿ ಬಜೆಟ್ ನಲ್ಲಿ ಹಲವು ಇಲಾಖೆಗಳ ಅನುದಾನ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಜುಲೈ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ನಲ್ಲಿ ಇಲಾಖಾವಾರು ಅನುದಾನ ಹಂಚಿಕೆಯಲ್ಲಿ ಕಡಿತಗೊಳ್ಳುವ ಚಿಂತನೆ ನಡೆದಿದೆ ಎನ್ನಲಾಗಿದ್ದು, ಕಾಂಗ್ರೆಸ್ ಸರಕಾರದ ನೇತೃತ್ವ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರು ಪರಿಷ್ಕೃತ ಬಜೆಟ್ ಮಂಡಿಸಲಿದ್ದಾರೆ. ಆದರೆ, ಚುನಾವಣಾ ಪೂರ್ಣದಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿ ಘೋಷಣೆಗಳ ಜಾರಿ ಸರ್ಕಾರಕ್ಕೆ ಅನಿವಾರ್ಯವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇನ್ನಿತರ ಹೊಸ ಯೋಜನೆಗಳತ್ತ ಈ ಬಾರಿ ಗಮನ ಹರಿಸುವುದು ಅನುಮಾನವೆಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ತನ್ನ ಮುಂಗಡ ಪತ್ರದ ಮೂಲಕ ರಾಜ್ಯವೊಂದರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಬೇಕಾಗುತ್ತದೆ. ಆದರೆ ಸರಕಾರಕ್ಕೆ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರುವುದು ತಕ್ಷಣದ ಕಾರ್ಯಸೂಚಿಯಾಗಿದೆ. ಹಾಗಾಗಿ ಅಭಿವೃದ್ಧಿ ವಿಚಾರದಲ್ಲಿ ರಾಜೀ ಮಾಡಿಕೊಳ್ಳಲೇಬೇಕಾದ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೂ ಪಂಚ ಗ್ಯಾರಂಟಿಗಳ ಜಾರಿಯೇ ಸರ್ಕಾರಕ್ಕೆ ಮೊದಲ ಆದ್ಯತೆಯಾಗಿದ್ದು, ಈ ಬಾರಿ ಬಜೆಟ್ ನಲ್ಲಿ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನಗರಾಭಿವೃದ್ಧಿ, ಕೃಷಿ ಇನ್ನಿತರ ಇಲಾಖೆಗಳಿಗೆ ಅನುದಾನ ಕಡಿತಗೊಳ್ಳುವ ಸಾಧ್ಯತೆ ಇದೆ. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತಿತರ ಇಲಾಖೆಗಳ ಅನುದಾನವೂ ತಗ್ಗಬಹುದು. ಆದರೆ, ಗ್ಯಾರಂಟಿ ಕಾರ್ಯಕ್ರಮದ ಎತ್ತಿ ಹಿಡಿಯಲಿರುವ ಸರಕಾರ ಕೊಟ್ಟ ಮಾತು ಉಳಿಸಿಕೊಂಡು ಜನರ ಮುಂದೆ ಹೋಗಿ ಹೇಳಲಿದೆ.
ಇನ್ನೂ ನೀರಾವರಿ ಕ್ಷೇತ್ರ ಹೆಚ್ಚಿನ ಆರ್ಥಿಕ ಸಂಪನ್ಮೂಲವನ್ನು ಅಪೇಕ್ಷಿಸುತ್ತಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಗಳಿಗೆ ಪ್ರತಿ ವರ್ಷ 15 ಸಾವಿರ ಕೋಟಿ ರೂ. ಮೀಸಲಿಟ್ಟರೂ ಸಾಕಾಗುವುದಿಲ್ಲ. ರಾಜ್ಯಾದ್ಯಂತ ರಸ್ತೆ ಸುಧಾರಣೆಗಳ ಅಗತ್ಯವಿದ್ದು ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ಸಮರೋಪಾದಿಯಲ್ಲಿ ಕೆಲಸವಾಗಬೇಕಿದೆ. ಆದರೆ, ನಿರೀಕ್ಷಿತ ಅನುದಾನ ದೊರಕುವ ಖಾತರಿ ಇಲ್ಲದಿರುವ ಕಾರಣ ಮೂಲಸೌಕರ್ಯ ಅಭಿವೃದ್ಧಿಯ ವೇಗ ಕುಂಠಿತಗೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಲಾಗುತ್ತದೆ.
ಈ ಹಿಂದೆ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಪ್ರಣಾಳಿಕೆ ಭರವಸೆಯಂತೆ ರೈತರ ಸಾಲ ಮನ್ನಾ ಮಾಡುವ ಮಾಡುವುದೇ ದೊಡ್ಡ ಸವಾಲಾಗಿತ್ತು. ಅದರಿಂದಾಗಿ ಅವರಿಗೆ ಬಜೆಟ್ಗೆ ಹಣಕಾಸು ಹೊಂದಿಸುವುದು ಭಾರಿ ಸವಾಲಾಗಿತ್ತು. ಈ ಬಾರಿ ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಅಗತ್ಯವಿರುವ ಕಾರಣ ಸಿಎಂ ಸಿದ್ದರಾಮಯ್ಯ ಅವರ ಮುಂದೆಯೂ ಹಲವು ಸವಾಲು ಇದೆ. ಹಾಗಾಗಿ ನಾನಾ ಇಲಾಖೆಗಳಲ್ಲಿ ಶೇ.2 ರಿಂದ ಶೇ.5ರಷ್ಟು ಅನುದಾನ ಕಡಿತಗೊಳ್ಳಬಹುದು. ಹಾಗೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು ಎಂದು ಹೇಳಲಾಗುತ್ತಿದೆ.
ಇತ್ತ ಈ ಬಾರಿ ಶಾಸಕರ ಕ್ಷೇತ್ರದ ಅಭಿವೃದ್ಧಿಗೂ ಹೆಚ್ಚಿನ ನೆರವು ಸಿಗುವುದು ಡೌಟ್ ಎಂದು ಹೇಳಲಾಗುತ್ತಿದ್ದು, ವರ್ಷಾಂತ್ಯದಲ್ಲಿ ಪಂಚರಾಜ್ಯಗಳ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಗ್ಯಾರಂಟಿ ಯೋಜನೆ ಜಾರಿಗೊಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಶಾಸಕರು ಈ ಬಾರಿ ಕ್ಷೇತ್ರಗಳ ಅಭಿವೃದ್ದಿಗೆ ಹೆಚ್ಚು ಅನುದಾನ ನಿರೀಕ್ಷಿಸುವಂತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications