ಆರೋಪಿಗಳ ಪರ ಅರ್ಜಿ ಸಲ್ಲಿಸೋಕೆ ಜಿಪಿಎ ನಡೆಯಲ್ಲ-ಹೈಕೋರ್ಟ್
ಬೆಂಗಳೂರು ಜೂ.11. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪರ ಅರ್ಜಿ ಸಲ್ಲಿಸೋಕೆ ಜನರಲ್ ಪವರ್ ಆಫ್ ಅಟಾರ್ನಿ ಇದ್ದರೆ ಆಗುತ್ತಾ?
ಇಲ್ಲ ಖಂಡಿತಾ ಆಗೋಲ್ಲಾ. ಬೇರೆ ಬೇರೆ ಕೇಸ್ಗಳಲ್ಲಿ ನಡೆಯುವಂತೆ ನ್ಯಾಯಾಲಯಗಳ ಜಿಪಿಎ ಇಟ್ಟುಕೊಂಡು ಕೇಸ್ ಹಾಕಿದರೆ ಅದು ಮಾನ್ಯವಾಗುವುದಿಲ್ಲ ಮತ್ತು ಅದಕ್ಕೆ ತಕ್ಕೆ ಬೆಲೆ ತೆರಬೇಕಾಗುತ್ತದೆ.
ಹೈಕೋರ್ಟ್ ಅಂತಹದೊಂದು ಜಿಪಿಎ ಪ್ರಕರಣವನ್ನು ವಜಾಗೊಳಿಸಿರುವುದಲ್ಲದೆ, ಸತ್ಯಾಂಶ ಮರೆ ಮಾಚಿದ್ದಕ್ಕಾಗಿ ತಾಯಿ ಮಗಳಿಗೆ ಒಂದು ಲಕ್ಷ ರೂ. ದಂಡವನ್ನೂ ಸಹ ವಿಧಿಸಿದೆ. ವಂಚನೆ, ಕಳವು, ಸುಲಿಗೆ ಮತ್ತು ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ನಗರದ ಹೆಣ್ಣೂರು ಠಾಣಾ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕೊಲ್ಕತ್ತಾ ಮೂಲದ ತಾಯಿ ಮತ್ತು ಮಗಳು ತಮ್ಮ ಜನರಲ್ ಪವರ್ ಆಫ್ ಅಟಾರ್ನಿ ಪಡೆದವರ (ಜಿಪಿಎ ಹಕ್ಕುದಾರ) ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣದಲ್ಲಿ ಆರೋಪಿಗಳಾದ ಸದ್ಯ ಲಂಡನ್ನಲ್ಲಿ ನೆಲೆಸಿರುವ ಸಮಂತಾ ಕ್ರಿಶ್ಚಿಯಾನ ಡೆಲ್ಫಿನಾ ವಿಲ್ಲಿಸ್ ಮತ್ತು ಆಕೆಯ ತಾಯಿ ಶಕೀಲಾ ವಿಲ್ಲಿಸ್ ಅವರ ಜಿಪಿಎ ಹಕ್ಕುದಾರರಾದ ಪುಣೆಯ ಗೌತಮ್ ಗಿರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಪ್ರಕರಣ ಸತ್ಯಾಂಶಗಳನ್ನು ಮರೆಮಾಚಿದ ಕಾರಣ ಅರ್ಜಿದಾರರಿಗೆ ಒಂದು ಲಕ್ಷ ರು. ದಂಡ ವಿಧಿಸಿರುವ ಹೈಕೋರ್ಟ್, ದಂಡದ ಮೊತ್ತವನ್ನು ನಾಲ್ಕುವಾರದಲ್ಲಿ ಕರ್ನಾಟಕ ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ತಾಕೀತು ಮಾಡಿದೆ.
ಜಿಪಿಎಗೆ ಮಾನ್ಯತೆ ಇಲ್ಲ:
ಆರೋಪಿಗಳು ವಂಚನೆ, ಕಳವು, ಸುಲಿಗೆ ಮತ್ತು ಜೀವ ಬೆದರಿಕೆವೊಡ್ಡಿದ ಪ್ರಕರಣ ಎದುರಿಸುತ್ತಿದ್ದಾರೆ. ಅವರ ಪರವಾಗಿ ಜಿಪಿಎ ಹಕ್ಕುದಾರ ಗೌತಮ್ ಗಿರಿ ಪ್ರಕರಣ ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅದರೆ, ಅರ್ಜಿ ಸಲ್ಲಿಸುವುದಕ್ಕೆ ನ್ಯಾಯಾಲಯದಿಂದ ಯಾವುದೇ ಅನುಪತಿ ಪಡೆದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಾಸ್ತವಿಕ ಅಂಶಗಳು ಬಗ್ಗೆ ತಮಗೆ ವೈಯಕ್ತಿಕವಾಗಿ ಅರಿವಿದೆ ಎಂಬುದನ್ನು ಸಹ ಅರ್ಜಿಯಲ್ಲಿ ತಿಳಿಸಿಲ್ಲ. ಹಾಗಾಗಿ, ಅರ್ಜಿ ವಿಚಾರಣೆ ಮಾನ್ಯತೆ ಹೊಂದಿಲ್ಲ. ಜಿಪಿಎ ಹಕ್ಕುದಾರ ಆರೋಪಿಗಳನ್ನು ಪ್ರತಿನಿಧಿಸಲಾಗದು ಎಂದು ಆದೇಶದಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಎಲೈಟ್ ಮ್ಯಾಟ್ರಿಮೋನಿ ಮೂಲಕ ಪರಿಚಿತರಾಗಿದ್ದ ಕೊಲ್ಕತ್ತಾ ಮೂಲದ ಸಮಂತಾ ಕ್ರಿಶ್ಚಿಯಾನ ಡೆಲ್ಫಿನಾ ವಿಲ್ಲಿಸ್ ಮತ್ತು ಬೆಂಗಳೂರಿನ ಸಯದ್ ಅಲಿ ಹಿಂದೂಸ್ತಾನಿ 2021ರ ಜೂ.6ರಂದು ಮದುವೆಯಾಗಿದ್ದರು. ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿಸಿ ಸಮಂತಾ, ಮದುವೆಯಾದ ಐದೇ ದಿನಕ್ಕೆ ಜೂ.11ರಂದು ಕೋಲ್ಕತಾದ ತವರು ಮನೆಗೆ ತೆರಳಿದ್ದರು. ಬಳಿಕ ಜೂ.17ರಂದು ಕೊಲ್ಕತ್ತಾಗೆ ಹೋಗಿದ್ದ ಪತಿ ಸಯದ್ ಅಲಿ ಬೆಂಗಳೂರಿಗೆ ವಾಪಸ್ಸಾಗುವಂತೆ ಸಮಂತಾಗೆ ಕೋರಿದ್ದರು. ಆದರೆ, ಆ ಮನವಿ ತಿರಸ್ಕರಿಸಿದ್ದ ಸಮಂತಾ ತನ್ನ ತಾಯಿ ಜೊತೆಗೆ ಲಂಡನ್ಗೆ ಪ್ರಯಾಣ ಬೆಳೆಸಿದ್ದರು.
ಆನಂತರ 2021ರ ನ.14ರಂದು ಕೊಲ್ಕತ್ತಾಗೆ ಮರಳಿ ಮದುವೆ ರದ್ದತಿಗೆ ಕೋರಿದ್ದರು. ಇದಕ್ಕೂ ಮುನ್ನವೇ 2021ರ ನ.11ರಂದು ಹೆಣ್ಣೂರು ಠಾಣಾ ಪೊಲೀಸರಿಗೆ ವಂಚನೆ, ಸುಲಿಗೆ, ಕಳವು ಮತ್ತು ಜೀವ ಬೆದರಿಕೆ ಆರೋಪ ಸಂಬಂಧ ಸಮಂತಾ ಮತ್ತವರ ತಾಯಿ ವಿರುದ್ಧ ದೂರು ಸಲ್ಲಿಸಿದ್ದರು.
ಮದುವೆ ನಂತರ ಸಮಂತಾ ತನ್ನ ತಾಯಿ ಚಿನ್ನಾಭರಣ ತೆಗೆದುಕೊಂಡು ಪೋಟೋಶೂಟ್ ಮಾಡಿರುವುದಾಗಿ ತಿಳಿಸಿ ಮನೆಬಿಟ್ಟು ಹೋಗಿದ್ದರು. ಆದರೆ, ಬಳಿಕ ಮನೆಗೆ ವಾಪಸ್ ಆಗಲಿಲ್ಲ. ಇನ್ನೂ ಜಂಟಿಯಾಗಿ ಆಸ್ತಿ ಖರೀದಿ ಮಾಡುವುದಾಗಿ ಮನವೊಲಿಸಿ ನನ್ನ ಬ್ಯಾಂಕ್ ಖಾತೆಯಿಂದ 7.5 ಕೋಟಿ ಹಣವನು ತನ್ನ ಖಾತೆಗೆ ಸಮಂತಾ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಸಯದ್ ಅಲಿ ಆರೋಪಿಸಿದ್ದರು. ಹಾಗೆಯೇ, ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಕೋರಿದ್ದರು.
ಇದರಿಂದ ನ.19ರಂದು ಜಾಮೀನು ಕೋರಿ ಕೋಲ್ಕತ್ತಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿನ ನ್ಯಾಯಾಲಯವು ಜಾಮೀನು ನೀಡಿತ್ತು. ತದನಂತರ 2021 ಡಿ.18ರಂದು ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ಗೆ ತಮ್ಮ ಜಿಪಿಎ ಹಕ್ಕುದಾರ ಗೌತಮ್ ಗಿರಿ ಮೂಲಕ ಅರ್ಜಿ ಸಲ್ಲಿಸಿದ್ದರು.












Click it and Unblock the Notifications