ಪಿಯುಸಿ ಓದಿದವರಿಗೆ ಹಳ್ಳಿ ಡಾಕ್ಟರ್ ಕೋರ್ಸ್
ಬೆಳಗಾವಿ, ನ.26: ಸರಕಾರವೇನೋ ಸಾಕಷ್ಟು ಹಣ ಸುರಿದು ಎಂಬಿಬಿಎಸ್ ವೈದ್ಯರುಗಳನ್ನು ಸೃಷ್ಟಿಸುತ್ತಿದೆ. ಆದರೆ ಆ ಅಶ್ವಿನೀಪುತ್ರರು ವ್ಯಾಸಂಗ ಮುಗಿದ ನಂತರ ಸರಕಾರದ ಆಶಯದಂತೆ ಹಳ್ಳಿಗಾಡಿನಲ್ಲಿ ಕೆಲಸ ಮಾಡಲು ಸುತರಾಂ ಒಲವು ತೋರದೆ ಸರಕಾರಕ್ಕೆ ಮುಜುಗುರವನ್ನುಂಟುಮಾಡುತ್ತಿದ್ದಾರೆ.
ವೈದ್ಯ ಪದವಿ ಪಡೆಯಲು ಗ್ರಾಮಾಂತರ ಸೇವೆ ಕಡ್ಡಾಯ ಎಂದೆಲ್ಲಾ ಸರಕಾರ ಬ್ರಹ್ಮಾಸ್ತ್ರ ಝಳಪಿಸಿದರೂ ವೈದ್ಯ ವಿದ್ಯಾರ್ಥಿಗಳು ಕರಗದೇ ಇರುವುದರಿಂದ ಹಾಲಿ ಸರಕಾರವು ಅದಕ್ಕೆ ತನ್ನದೇ ಮಾರ್ಗ ಕಂಡುಕೊಳ್ಳಲು ಮುಂದಾಗಿದೆ.
ಪಾದರಸದಂತೆ ಚುರುಕಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಚಿವ ಯುಟಿ ಖಾದರ್ ಅವರು ಎಂಬಿಬಿಎಸ್ ವೈದ್ಯರು ಹಳ್ಳಿಗಾಡಿನತ್ತ ಬಾರದಿದ್ದರೆ ಕತ್ತೆ ಬಾಲ ಹೋಯ್ತು ಎಂದು ಗುಣಮಟ್ಟದಲ್ಲಿ ಸ್ವಲ್ಪ ರಾಜಿ ಮಾಡಿಕೊಂಡರೂ ಹಳ್ಳಿಗಾಡಿನಲ್ಲಿ ಸಕಾಲಿಕವಾಗಿ ವೈದ್ಯ ಸೇವೆ ಲಭಿಸುವಂತಾಗಲು ಹೊಸ ಯೋಜನೆ ಹಾಕಿದ್ದಾರೆ.

ಹಾಗೆ ನೋಡಿದರೆ ಹಿಂದಿನ ಸರಕಾರಗಳು ಯಾವಾಗಲೋ ಇಂತಹ ಯೋಜನೆಯನ್ನು ಜಾರಿಗೆ ತರಬೇಕಿತ್ತು. ಇನ್ನಾದರೂ ವಿಳಂಬ ಮಾಡದೆ ಮೂರೇ ವರ್ಷಗಳಲ್ಲಿ ಹೊಸ ವೈದ್ಯ ಪಡೆ (Community Health Officers) ಗ್ರಾಮೀಣ ಮುಗ್ಧರ ಸೇವೆಗೆ ಟೊಂಕಕಟ್ಟಿ ನಿಲ್ಲುವಂತಾಗಲಿ.
ಏನಪ್ಪಾ ಅಂದರೆ ಎಂಬಿಬಿಎಸ್ ವೈದ್ಯರು ಗ್ರಾಮೀಣ ಸೇವೆಗೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಪಿಯುಸಿ ಪಾಸಾದವರಿಗೆ ಸೂಕ್ತ ತರಬೇತಿ ನೀಡಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಸಚಿವ ಖಾದರ್ ಅವರು ವಿಧಾನಪರಿಷತ್ತಿನಲ್ಲಿ ಈ ಕ್ರಾಂತಿಕಾರಿ ನೀತಿಯನ್ನು ಪ್ರಕಟಿಸಿದ್ದಾರೆ.
ಏನಿದು ಕೋರ್ಸ್?: ಈ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರದ ನೀತಿಯೊಂದು ಜಾರಿಯಲ್ಲಿದೆ. ತನ್ನಿಮಿತ್ತ, ಸಮುದಾಯ ಆರೋಗ್ಯ ಸೇವೆ ಕೋರ್ಸ್ ಅನ್ನು ರಾಜ್ಯದಲ್ಲೂ ಆರಂಭಿಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ. (Three-year Bachelor of Science (Community Health) course)
ದ್ವಿತೀಯ ಪಿಯುಸಿ ನಂತರ 3 ವರ್ಷದ ಸಮುದಾಯ ಆರೋಗ್ಯ ಸೇವೆ ತರಬೇತಿ ನೀಡಲಾಗುವುದು. ಅಲ್ಲಿ ತರಬೇತಿ ಪಡೆದವರನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸುವುದು ಈ ಯೋಜನೆಯ ಸದುದ್ದೇಶ/ ವೈಶಿಷ್ಟ್ಯ.












Click it and Unblock the Notifications