ಚಾಮರಾಜನಗರ ಜಿಲ್ಲೆ ಅಭಿವೃದ್ಧಿಗೆ ಸರ್ಕಾರ ಮಹತ್ವ ನೀಡಲಿದೆ: ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು, ಡಿಸೆಂಬರ್ 13: ಚಾಮರಾಜನಗರ ಜಿಲ್ಲೆಯೂ ಕೂಡ 31 ಜಿಲ್ಲೆಗಳ ಪೈಕಿ ಮಹತ್ವದ ಜಿಲ್ಲೆ. ನಿಸರ್ಗಭರಿತ, ಐತಿಹಾಸಿಕ ಗಡಿ ಜಿಲ್ಲೆಯಾಗಿದೆ. ಅಭಿವೃದ್ಧಿಗೆ ಮಹತ್ವ ಕೊಟ್ಟೇ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾದ ನಂತರ ಮೂರನೇ ಬಾರಿಗೆ ಜಿಲ್ಲೆ ಭೇಟಿ ನೀಡುತ್ತಿದ್ದೇನೆ, ಹೆಚ್ಚಿನ ಅಭಿವೃದ್ದಿ ಮಹತ್ವ ನೀಡುತ್ತೇವೆ ಎಂದಿದ್ದಾರೆ.
ಗಡಿವಿವಾದದ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವರು ಗಡಿವಿವಾದ ದ ಬಗ್ಗೆ ಚರ್ಚಿಸಲೆಂದೇ ಎರಡೂ ರಾಜ್ಯ ಗಳ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆದಿದ್ದಾರೆ. ಅಲ್ಲಿ ನಮ್ಮ ನಿಲುವಿನ ಬಗ್ಗೆ ಹೇಳುತ್ತೇವೆ. ಈಗಾಗಲೇ ರಾಜ್ಯ ಪುನರ್ ವಿಂಗಡನಾ ಕಾಯ್ದೆ, ಪ್ರಕ್ರಿಯೆ, ಸುಪ್ರೀಂ ಕೋರ್ಟ್ ಪ್ರಕರಣ ಸೇರಿದಂತೆ ಎಲ್ಲಾ ಮಾಹಿತಿಯನ್ನು ಗೃಹ ಸಚಿವರಿಗೆ ನೀಡಲಿದ್ದೇನೆ. ಸಂವಿಧಾನದಲ್ಲಿನ ಅವಕಾಶಗಳು ಮತ್ತು 2004 ರ ಪ್ರಕರಣ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡೇ ಇಲ್ಲ ಎಂಬ ಬಗ್ಗೆ ಗೃಹ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಡಲಿದ್ದೇನೆ ಎಂದರು.

ಮಾಂಡೋಸ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸುವ ವಿಚಾರವಾಗಿ ಮಾತನಾಡಿ, ಮಾಂಡೋಸ್ ಚಂಡ ಮಾರುತದಿಂದ ಕೆಲವು ತೊಂದರೆಗಳಗಿದ್ದು, ವಿಶೇಷವಾಗಿ ಬೆಳೆಗಳ ಮೇಲೆ ಆಗಿರುವ ಪ್ರಭಾವ ಏನೆಂದು ಸಮೀಕ್ಷೆ ಮಾಡಲಾಗುತ್ತಿದೆ. ರಾಗಿ, ಬೆಳೆದು ನಿಂತಿದೆ. ಕಾಟಾವು ಮಾಡಿದವರಿಗೆ ಕಷ್ಟವಾಗುತ್ತಿದೆ ಎಂಬ ವರದಿ ಬಂದಿದೆ. ಕೃಷಿ ಇಲಾಖೆಯಿಂದ ಸಂಪೂರ್ಣ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಹೋಗುತ್ತಿದ್ದೇವೆ. ಆ ನಂತರ ಈ ಬಗ್ಗೆ ಚರ್ಚೆಯಾದರೆ ಚರ್ಚಿಸಲಾಗುವುದು, ಎಲ್ಲಾ ಸಿದ್ಧತೆ ಮಾಡಿಕೊಂಡು ಹೋಗಿರುತ್ತೇನೆ ಎಂದರು.

ಚೀನಾವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತೇವೆ
ದೇಶದ ಗಡಿಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ಸಂಘರ್ಷ ಉಂಟಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗ ಹಿಂದಿನಂಥ ಸರ್ಕಾರವಿಲ್ಲ. ರಕ್ಷಣಾ ಪಡೆಗಳೂ ಸನ್ನದ್ಧವಾಗಿವೆ. ಹಿಂದೆ ಯಾವುದೇ ತಯಾರಿಗಳಿರಲಿಲ್ಲ. ಅಂದಿನ ನಾಯಕತ್ವ ರಕ್ಷಣಾ ಪಡೆಗಳಿಗೆ ಯಾವುದೇ ನಿರ್ದೇಶನ ನೀಡಲಿಲ್ಲ. ಈಗ ಸ್ಪಷ್ಟ ನಿರ್ದೇಶನವಿದೆ. ವಿವಾದವಿದ್ದ ಸಂದರ್ಭದಲ್ಲಿ ಚೀನಾ ಮುನ್ನುಗ್ಗಿ ದಾಗ ಅಂದಿನ ನಾಯಕತ್ವ ರಕ್ಷಣಾ ಪಡೆಗಳಿಗೆ ನಿರ್ದೇಶನ ನೀಡಲಿಲ್ಲ. ರಸ್ತೆ, ಸೇತುವೆ, ಸಲಕರಣೆ ಮುಂತಾದ ಸಂಪರ್ಕ ಸಾಧನಗಳನ್ನು ಬಲಪಡಿಸಲಾಗಿದೆ.
ಚೀನಾವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು.












Click it and Unblock the Notifications