ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮಾನ್ಯತೆ
ಬೆಂಗಳೂರು, ಜನವರಿ 18 : ಕಾಡುಗೊಲ್ಲ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ -1ರ ಗೊಲ್ಲ ಜಾತಿಯೊಂದಿಗೆ ಸೇರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಹಲವು ವರ್ಷಗಳ ಹೋರಾಟಕ್ಕೆ ಬೆಲೆ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗಿದೆ.
ಪ್ರವರ್ಗ-1ರ ಪಟ್ಟಿಯ ಗೊಲ್ಲ ಜಾತಿಯೊಂದಿಗೆ 'ಕಾಡುಗೊಲ್ಲ' ಸಮುದಾಯವನ್ನು ಸೇರಿಸಲು ಒಪ್ಪಿಗೆ ನೀಡಲಾಗಿದೆ. 'ಹಟ್ಟಿಗೊಲ್ಲ' ಎಂಬ ಪರ್ಯಾಯ ಪದದೊಂದಿಗೆ ಸೇರ್ಪಡೆ ಮಾಡಲಾಗುತ್ತದೆ.

ಕೆಲವು ದಿನಗಳ ಹಿಂದೆ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್, ನಟ ಚೇತನ್ ಮತ್ತು ಸಮುದಾಯದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 'ಕಾಡುಗೊಲ್ಲ' ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಸಲ್ಲಿಸಿದ್ದರು.

ಕಾಡುಗೊಲ್ಲರು ಕಾಡಿನ ಹಟ್ಟಿಗಳಲ್ಲಿ ವಾಸ ಮಾಡುತ್ತಾ, ಯಾವ ಆಧುನಿಕತೆಗೂ ತೆರೆದುಕೊಳ್ಳದೇ ಬುಡುಕಟ್ಟುಗಳಾಗಿ ಉಳಿದುಕೊಂಡಿದ್ದರು. ಹಲವಾರು ವರ್ಷಗಳಿಂದ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದರು.
ಬುಡಕಟ್ಟು ಸಮುದಾಯದಿಂದ ಬಂದ ಕಾಡುಗೊಲ್ಲರು ವಿಶಿಷ್ಟ ಆಚಾರ-ವಿಚಾರ ಗಳನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಇಂತಹ ಆಚರಣೆಗಳಲ್ಲಿ 'ಜನಿಗೆ' ಪದ್ಧತಿಯು ಒಂದು.
ಹುಟ್ಟಿದ ಮಗು ಸೂತಕ ಕಳೆದುಕೊಳ್ಳಲು ಗೋ ಅಥವಾ ಕುರಿಯ ಹಾಲನ್ನು ಬಳಸಿ ತಾಯಿ ಮತ್ತು ಮಗುವನ್ನು ಶುದ್ಧೀಕರಣ ಮಾಡುವ ಪದ್ಧತಿಗೆ 'ಜಿನಿಗೆ' ಎನ್ನುತ್ತಾರೆ.
ಹಾಲಿನಿಂದ ತಾಯಿ ಮತ್ತು ಮಗುವನ್ನು ಶುದ್ಧೀಕರಣ ಮಾಡಿಕೊಂಡು ಮಗುವಿಗೆ ನಾಮಕರಣ ಮಾಡುವ ಪದ್ಧತಿ ಇಂದಿಗೂ ಸಮುದಾಯದಲ್ಲಿ ಜಾರಿಯಲ್ಲಿದೆ.












Click it and Unblock the Notifications