ಕೈಗಾರಿಕೆ ಅಭಿವೃದ್ಧಿ: ಆರ್ ಆಂಡ್ ಡಿ ನೀತಿಗೆ ಸರ್ಕಾರ ಅನುಮೋದನೆ-ಸಿಎಂ
ಬೆಂಗಳೂರು, ಆಗಸ್ಟ್ 04: ಉದ್ಯೋಗ ನೀತಿಗಳಲ್ಲಿ ಪ್ರಮುಖವಾಗಿರುವ 'ಸಂಶೋಧನೆ ಮತ್ತು ಅಭಿವೃದ್ಧಿ ನೀತಿ' (ಆರ್ಆಂಡ್ಡಿ)ಯನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ನೀತಿಯಡಿ ಗ್ಯಾರೇಜ್ ಸಂಶೋಧನೆಗಳಿಂದ ಹಿಡಿದು ಸಾಂಸ್ಥಿಕ ಸಂಶೋಧನೆಗಳನ್ನು ಉತ್ತೇಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಬೆಂಗಳೂರಿನಲ್ಲಿ ನಡೆದ ಸಂಕಲ್ಪ ಸಿದ್ಧಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೆನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವರೆಗೆ 400 ಅಂತಾರಾರಾಷ್ಟ್ರೀಯಮಟ್ಟದ ಸಂಶೋಧನಾ ಕೇಂದ್ರಗಳಿವೆ. ಬೆಂಗಳೂರು ಹೊರತುಪಡಿಸಿದರೆ, ಪ್ರಪಂಚದ ಯಾವುದೇ ನಗರಗಳಲ್ಲಿ ಈ ಸಂಖ್ಯೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಕಾಣಲು ಸಾಧ್ಯವಿಲ್ಲ. ಇದು ಕರ್ನಾಟಕದ ಹೆಮ್ಮೆಯೂ ಹೌದು ಎಂದರು.
ಕರ್ನಾಟಕದಲ್ಲಿ ಕೈಗಾರಿಕೆ ವಲಯದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿರುವ ಸರ್ಕಾರ ಈ ವಲಯದಿಂದ ಅತ್ಯಧಿಕ ಕೊಡುಗೆ ನೀಡಬೇಕು ಎನ್ನುವ ಗುರಿ ಹೊಂದಿದೆ. ಆ ಕಾರಣಕ್ಕೆ ಅನೇಕ ಯೋಜನೆ, ನೀತಿಗಳನ್ನು ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಕರ್ನಾಟಕದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆ
ರಾಜ್ಯದಲ್ಲಿ ಉದ್ಯೋಗ ನೀತಿ ರೂಪಿಸಲಾಗಿದ್ದು, ಅದರಡಿ ಉದ್ಯಮಿಗಳಿಗೆ ಪ್ರೋತ್ಸಾಹಿಸಿ ಸಹಕಾರ ನೀಡಲಾಗುವುದು. ಸೆಮಿ ಕಂಡಕ್ಟರ್ ನೀತಿ, ವಿದ್ಯುತ್ ಚಾಲಿತ ವಾಹನ ನೀತಿ, ನವೀಕರಿಸಬಹುದ ಇಂಧನ ನೀತಿಗಳನ್ನು ರೂಪಿಸಲಾಗಿದೆ. ಈ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ 110 ಲಕ್ಷ ಕೋಟಿ ರೂ.ಗಳ ವಿದೇಶಿ ಬಂಡವಾಳ ಹೂಡಿಕೆ ಹರಿದುಬರಲಿದೆ. ಅದಕ್ಕಾಗಿ ಈಗಾಗಲೇ ಒಪ್ಪಂದವು ಮಾಡಿಕೊಳ್ಳಲಾಗಿದೆ. ಹೈಡ್ರೋಜನ್ ಇಂಧನ, ಸಮುದ್ರ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಕರ್ನಾಟಕದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಕೊಡುಗೆಗೆ ಮನ್ನಣೆ ನೀಡಲಾಗುತ್ತಿದೆ. ಭಾರತದಲ್ಲಿ ಅಮೃತ ಕಾಲ ಸ್ಥಾಪಿಸುವ ಕಾರ್ಯವನ್ನು ಉದ್ಯಮಿಗಳು, ಸರ್ಕಾರ ಸೇರಿ ಒಟ್ಟಾಗಿ ಮಾಡಬೇಕಿದೆ ಎಂದು ತಿಳಿಸಿದರು.

5 ಟ್ರಿಲಿಯನ್ ಡಾಲರ್ ಆರ್ಥಿಕತೆ 1ಟ್ರಿಲಿಯನ್ ರಾಜ್ಯದ ಕೊಡುಗೆ
ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜಮಹಾರಾಜರ ಕಾಲದಿಂದಲೂ ಪ್ರಗತಿಪರ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ವಾಣಿಜ್ಯ, ತಂತ್ರಜ್ಞಾನದ ಬೆಳವಣಿಗೆಗೆ ಆದ್ಯತೆ ನೀಡುತ್ತಾ ಬರಲಾಗಿದೆ. ಅದರಲ್ಲೂ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕರ್ನಾಟಕ ಐಟಿಬಿಟಿ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಹಿಂದಿಕ್ಕುತ್ತಿದೆ. ಈ ಅಭಿವೃದ್ಧಿ ಮೂಲಕ ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕ ಒಂದರಿಂದಲೇ 1 ಟ್ರಿಲಿಯನ್ ಡಾಲರ್ ನಷ್ಟು ಕೊಡುಗೆ ನೀಡಬೇಕೆನ್ನುವ ಗುರಿ ಇದೆ. ಇದಕ್ಕಾಗಿ ವಲಯವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಕೃಷಿಯಿಂದ ಆಹಾರ-ಆರ್ಥಿಕ ಭದ್ರತೆ:
ಕರ್ನಾಟಕ ಕೃಷಿ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕಂಡಿದೆ. 10 ಕೃಷಿ ಹವಾಮಾನ ವಲಯಗಳು ರಾಜ್ಯದಲ್ಲಿದ್ದು, ವರ್ಷಪೂರ್ತಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕೃಷಿ ವಲಯವು ಶೇ.1 ಅಭಿವೃದ್ಧಿ, ಉತ್ಪಾದನಾ ಕ್ಷೇತ್ರದಲ್ಲಿ ಶೇ.4 ಹಾಗೂ ಸೇವಾ ವಲಯದಲ್ಲಿ ಶೇ. 10ರಷ್ಟು ಅಭಿವೃದ್ಧಿಗೆ ಕಾರಣವಾಗುತ್ತದೆ. ಕೃಷಿಯು ಆಹಾರ ಭದ್ರತೆ ಜೊತೆಗೆ ಆರ್ಥಿಕ ಭದ್ರತೆಯನ್ನೂ ಕೊಡುತ್ತಿರುವುದರಿಂದ ಉದ್ಯಮಿಗಳು ಆಹಾರ ಕ್ಷೇತ್ರದತ್ತ ಒಲವು ತೋರ್ಪಡಿಸಬೇಕು ಎಂದು ಸಲಹೆ ನೀಡಿದರು.
ಆಹಾರ ಮತ್ತು ಸೇವಾ ವಲಯದ ಸಂಪರ್ಕ ಗಟ್ಟಿಗೊಳಿಸುವ ಸಂಬಂಧ ಪೂರಕ ನೀತಿಗಳನ್ನೂ ರೂಪಿಸಲಾಗಿದೆ. ಪ್ರಧಾನಿಗಳ ಆಶಯವಾದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಕಾರವಾದಾಗ, ರೈತರ ಆದಾಯವೂ ದುಪ್ಪಟ್ಟಾಗುತ್ತದೆ. ಆಗ ಕೃಷಿಯನ್ನೇ ನಂಬಿರುವ ಶೇ.60 ಜನರ ಜೀವನ ಸುಧಾರಣೆಯಾಗುತ್ತದೆ. ತಳಮಟ್ಟದ ಶ್ರಮಿಕರೇ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಮುಂದಿನ 25 ವರ್ಷಗಳ ಅಮೃತಕಾಲದಲ್ಲಿ ಶ್ರಮಿಕ ವರ್ಗದ ಅಭಿವೃದ್ಧಿಗೊಳಸಬೇಕಿದೆ ಎಂದು ಭವಿಷ್ಯದ ಚಿಂತನೆ ಕುರಿತು ತಿಳಿಸಿದರು.

ಆತ್ಮನಿರ್ಭರ ಭಾರತದಿಂದ ಹೆಚ್ಚಾದ ಆತ್ಮವಿಶ್ವಾಸ
75 ವರ್ಷ ಪೂರೈಸಿರುವ ದೇಶ ಅಗಾಧ ಅನುಭವ, ಅನೇಕ ಏಳುಬೀಳುಗಳನ್ನು ಕಂಡಿದೆ. ಪ್ರಜಾಪ್ರಭುತ್ವಕ್ಕೆ ಹಾಕಲಾಗಿದ್ದ ಸವಾಲುಗಳನ್ನು ದೇಶದ ಜನರ ನೈತಿಕ ಶಕ್ತಿಯಿಂದ ಎದುರಿಸಿದೆ. ಮೇಕ್ ಇನ್ ಇಂಡಿಯಾ ನೀತಿ ಭಾರತವನ್ನು ಸದೃಢವಾಗಿಸಿದೆ. ಆತ್ಮನಿರ್ಭರ ಯೋಜನೆಯಿಂದ ದೇಶದ ಜನರ ಆತ್ಮವಿಶ್ವಾಸ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಾರೆ. ಕಟ್ಟಕಡೆಯ ವ್ಯಕ್ತಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಮೂಲಕ ದೇಶದ ಭವಿಷ್ಯವಾಗುತ್ತಾನೆ. ಈ ನೀತಿಯನ್ನೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬಿಂಬಿಸುತ್ತದೆ. ದೂರದೃಷ್ಟಿಯ , ಶಕ್ತಿಯುತ ನಾಯಕ ಬೇಕಾಗುತ್ತದೆ. ಈ ಗುಣಗಳನ್ನು ನಾವು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಅವರಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಉದ್ಯಮಿಗಳು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications