Dharmasthala Case: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ?: ಸ್ಪೋಟಕ ಮಾಹಿತಿ ಬಹಿರಂಗ!
ಬೆಂಗಳೂರು, ಆಗಸ್ಟ್ 7: ಧರ್ಮಸ್ಥಳದಲ್ಲಿ ಶವಗಳು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವುಗಳ ಮೇಲೆ ತಿರುವುಗಳು ಸಿಗುತ್ತಿದೆ. ಅನಾಮಿಕ ವ್ಯಕ್ತಿ ದೂರಿನ ಆಧಾರದ ತನಿಖೆ ನಡೆಸುತ್ತಿರುವ ಎಸ್ಐಟಿ (SIT) ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟ ಸಮೀಪ ಹಲವು ಪಾಯಿಂಟ್ಗಳಲ್ಲಿ ಉತ್ಖನನ ನಡೆಸುತ್ತಿದ್ದು, ಕೆಲ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಈಗಾಗಲೇ ಆ ಅಸ್ಥಿಪಂಜರವನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ನಡುವೆ ಧರ್ಮಸ್ಥಳ ಪ್ರಕರಣದಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ಕುರಿತು ಗೃಹ ಸಚಿವರಾದ ಪರಮೇಶ್ವರ್ ಅವರು ಇಂದು ಮಾಧ್ಯಮಗಳ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಧರ್ಮಸ್ಥಳದಲ್ಲಿ ನಿನ್ನೆ ದಿನ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ಯಾಕಾಗಿದೆ, ಯಾರು ಕಾರಣಕರ್ತರು, ಎರಡು ಗುಂಪಿನ ಉದ್ದೇಶ ಏನಿದೆ ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ. ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.

ಅಲ್ಲಿನ ಜನಸಮುದಾಯ ಎಸ್ಐಟಿ ಮಾಡಲು ಒತ್ತಾಯಿಸಿದ್ದರು. ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್ಐಟಿ ರಚಿಸಿದ್ದೇವೆ. ಅನಾಮಿಕ ವ್ಯಕ್ತಿ ಇಲ್ಲಿ ಕೊಲೆಯಾಗಿದೆ, ನಾನೇ ಅನೇಕ ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ. ಆ ವ್ಯಕ್ತಿ, ಮ್ಯಾಜಿಸ್ಟ್ರೇಟರ್ ಮುಂದೆ 164 ಹೇಳಿಕೆ ನೀಡಿದ್ದ. ಆತನ ಹೇಳಿಕೆ ಆಧರಿಸಿ ತನಿಖೆ ಮಾಡಬೇಕು ಎಂದು ಮ್ಯಾಜಿಸ್ಟ್ರೀಯಲ್ ಸೂಚನೆಯೂ ಇತ್ತು. ನಾವು ಕೂಡ ಸಾರ್ವಜನಿಕವಾಗಿ ಗಂಭೀರವಾಗಿ ಪರಿಗಣಿಸಿ ಎಸ್ಐಟಿ ಮಾಡಿದ್ದೇವೆ ಎಂದು ತಿಳಿಸಿದರು.
ಧರ್ಮಸ್ಥಳದಲ್ಲಿ 13 ಸ್ಥಳಗಳಲ್ಲಿ ಹೆಣಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿಕೆ ಇತ್ತು. ಅದರ ಪ್ರಕಾರ 13 ಸ್ಥಳಗಳನ್ನು ತೆಗೆದಿದ್ದಾರೆ. 6ನೇ ಸ್ಥಳದಲ್ಲಿ ಗಂಡಸಿನ ಅಸ್ಥಿಪಂಜರ ಸಿಕ್ಕಿರುವ ಬಗ್ಗೆ ನೀವೆಲ್ಲ ವರದಿ ಮಾಡಿದ್ದೀರಿ. 13ನೇ ಸ್ಥಳಕ್ಕೆ ಹೋದಾಗ ಏನು ಸಿಕ್ಕಿಲ್ಲ. ಇದರ ಹೊರತುಪಡಿಸಿ ಗುಡ್ಡದಲ್ಲಿ ಒಂದಷ್ಟು ಮೂಳೆಗಳು ಸಿಕ್ಕಿದ್ದು, ಎಫ್ಎಸ್ಎಲ್ ಗೆ ಕಳಿಸುವ ಕೆಲಸ ಎಸ್ಐಟಿ ಮಾಡಿದೆ ಎಂದರು..
ಇದರ ಹಿನ್ನೆಲೆಯಲ್ಲಿ ಅಥವಾ ಸಂಬಂಧಪಟ್ಟಂತೆ ಎರಡು ಗುಂಪುಗಳ ಮಧ್ಯೆ ನಿನ್ನೆ ದಿನ ಘರ್ಷಣೆಯಾಗಿದೆ. ದೂರು, ಪ್ರತಿದೂರು ಕೊಟ್ಟಿದ್ದಾರೆ. ಏಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಅದನ್ನ ತನಿಖೆ ಮಾಡುತ್ತಾರೆ. ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಎಸ್ಐಟಿ ಹಾಗೂ ಸ್ಥಳೀಯ ಪೊಲೀಸರು ಮಾಡುತ್ತಾರೆ ಎಂದು ತಿಳಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಯಾರೋ ಹೇಳಿಕೆ ಕೊಡುತ್ತಾರೆ ಅದು ನಮಗೆ ಮುಖ್ಯವಲ್ಲ. ಎಸ್ಐಟಿಯವರು ತನಿಖೆಯನ್ನು ತಾಂತ್ರಿಕವಾಗಿ ಮತ್ತು ಆಧುನಿಕವಾಗಿ ಸತ್ಯ ಹೊರಗೆ ಬರುವ ರೀತಿಯಲ್ಲಿ ಮಾಡಬೇಕು. ಆ ಕೆಲಸವನ್ನು ಎಸ್ಐಟಿ ಮಾಡುತ್ತದೆ. ಅವರನ್ನು ಈಗಲೇ ಪ್ರಶ್ನೆ ಮಾಡಿದರೆ ತನಿಖೆಗೆ ಅರ್ಥ ಬರುವುದಿಲ್ಲ. ಎಸ್ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಇವರೆ ಎಲ್ಲ ಸಲಹೆ ಕೊಡುತ್ತಾರೆ. ರೆಡಾರ್ ತರಬೇಕು ಎನ್ನುತ್ತಿದ್ದಾರೆ. ಅವರು ಹೇಳಿದ ರೀತಿ ತನಿಖೆ ಮಾಡಲು ಆಗುತ್ತದೆಯೇ? ಪೊಲೀಸರು ಸಮರ್ಥರಿದ್ದಾರೆ. ತನಿಖೆ ಮಾಡುತ್ತಾರೆ. ಎಸ್ಐಟಿ ತನಿಖೆಯ ಬಗ್ಗೆ ಸರ್ಕಾರ ಯಾವುದೇ ಡೈರೆಕ್ಷನ್ಸ್ ಕೊಡುವುದಿಲ್ಲ ಎಂದು ಹೇಳಿದರು.
ಇವತ್ತಿನ ಸಂಪುಟದಲ್ಲಿ ನಾಗಮೋಹನ್ ದಾಸ್ ಅವರು ವರದಿ ನೀಡಿದರು. ಮುಂದಿನ ಸಚಿವ ಸಂಪುಟಕ್ಕೆ ತರುವಂತೆ ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟರು. ಇವತ್ತು ಸಚಿವ ಸಂಪುಟದ ತರುತ್ತಾರೆ. ನಾಳೆ ನಡೆಯಲಿರುವ ಮತಗಳ್ಳತನದ ವಿರುದ್ಧದ ಪ್ರತಿಭಟನೆಗೆ ಪೊಲೀಸ್ ಆಯುಕ್ತರು ಎಲ್ಲ ರೀತಿಯ ಭದ್ರತೆ ಕೈಗೊಂಡಿದ್ದಾರೆ. ಕೇಂದ್ರದಿಂದ ಎಸ್ಪಿಜಿ ಯವರು ಬಂದಿದ್ದಾರೆ. ಅವರೊಂದಿಗೆ ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಅವರಿಗೂ ಭದ್ರತೆ ಒದಗಿಸುತ್ತೇವೆ ಎಂದರು.












Click it and Unblock the Notifications