ಮುಜರಾಯಿ ದೇವಾಲಯಗಳಲ್ಲಿ ಸರ್ಕಾರದಿಂದ ಸಾಮೂಹಿಕ ವಿವಾಹ
ಬೆಂಗಳೂರು, ಅಕ್ಟೋಬರ್ 15 : ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಸರ್ಕಾರದ ವತಿಯಿಂದ ಸಾಮೂಹಿಕ ವಿವಾಹ ಆಯೋಜಿಸಲು ಚಿಂತನೆ ನಡೆದಿದೆ. 2020ರ ಮಾರ್ಚ್ ವೇಳೆಗೆ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ನಿರೀಕ್ಷೆ ಇದೆ.
ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದರು. "ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಇದರಿಂದ ಬಡವರಿಗೆ ಸಹಕಾರಿಯಾಗಲಿದೆ" ಎಂದರು.
ಇಲಾಖೆ ವ್ಯಾಪ್ತಿಗೆ ಒಳಪಡುವ 'ಎ' ದರ್ಜೆಯ ದೇವಾಲಯಗಳಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ 'ಎ' ದರ್ಜೆಯ 109 ದೇವಾಲಯಗಳಿವೆ. ಇವುಗಳಲ್ಲಿ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಅಗತ್ಯ ಮೂಲ ಸೌಕರ್ಯಗಳಿವೆ.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಜೋಡಿಗಳಿಗೆ ವಧು-ವರರಿಗೆ ವಸ್ತ್ರ, 8 ಗ್ರಾಂ ಚಿನ್ನದ ಮಾಂಗಲ್ಯ ಹಾಗೂ ಆರ್ಥಿಕ ಸಹಾಯ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಕಾರ್ಯಕ್ರಮ ಆಯೋಜಿಸಲು ದಾನಿಗಳು ಮತ್ತು ಸಂಘ ಸಂಸ್ಥೆಗಳ ಸಹಾಯವನ್ನು ಪಡೆಯಲು ಸರ್ಕಾರ ಮುಂದಾಗಿದೆ.
ಸಾಮೂಹಿಕ ವಿವಾಹದಲ್ಲಿ ಪ್ರತಿ ಜೋಡಿಗೆ ಸುಮಾರು 25 ರಿಂದ 30 ಸಾವಿರ ರೂ. ಖರ್ಚಾಗಲಿದೆ. ಈ ವೆಚ್ಚವನ್ನು ಆಯಾ ದೇವಾಲಯದ ಆದಾಯದಿಂದಲೇ ಭರಿಸಲಾಗುತ್ತದೆ. ಉದ್ಯಮಿಗಳ ನೆರವು ಪಡೆಯಲು ಉದ್ದೇಶಿಸಲಾಗಿದೆ.
ರಾಜ್ಯದ ದೇವಾಲಯಗಳ ಪೈಕಿ 2018-19ನೇ ಸಾಲಿನಲ್ಲಿ ಕುಕ್ಕೆ ಸುಬ್ರಮಣ್ಯ ರಾಜ್ಯದ ಶ್ರೀಮಂತ ದೇವಾಲಯವಾಗಿದೆ. ವಾರ್ಷಿಕ 92 ಕೋಟಿ ಆದಾಯ ದೇವಾಲಯದಲ್ಲಿ ಸಂಗ್ರಹವಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಾರೆ.












Click it and Unblock the Notifications