ಸರ್ಕಾರದಿಂದಲೇ ಕೃಷ್ಣ ಜನ್ಮಾಷ್ಟಮಿ ಆಚರಣೆ
ಬೆಂಗಳೂರು, ಆ.13 : ಕರ್ನಾಟಕ ಸರ್ಕಾರ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ನಿರ್ಧರಿಸಲಾಗಿದೆ. ಶ್ರೀ ಕೃಷ್ಣ ಜಯಂತಿ ಹೆಸರಿನಲ್ಲಿ ರಜಾರಹಿತ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿಯನ್ನು ಸರ್ಕಾರದ ವತಿಯಿಂದ ಶ್ರೀ ಕೃಷ್ಣ ಜಯಂತಿ ಹೆಸರಿನಲ್ಲಿ ಆಚರಿಸುವ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಗಸ್ಟ್ 17ರಂದು ಕೃಷ್ಣ ಜಯಂತಿಯನ್ನು ರಜಾರಹಿತ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ.

ಕೃಷ್ಣ ಜಯಂತಿ ಆಚರಣೆಗಾಗಿ ರಾಜ್ಯದ ಎಲ್ಲಾ 30 ಜಿಲ್ಲಾ ಕೇಂದ್ರಗಳಿಗೆ ತಲಾ 50 ಸಾವಿರ ರೂ.ನಂತೆ ಒಟ್ಟು 15 ಲಕ್ಷ ರೂ. ಮತ್ತು 176 ತಾಲೂಕುಗಳಿಗೆ ತಲಾ 25 ಸಾವಿರ ರೂ.ನಂತೆ 44 ಲಕ್ಷ ರೂ. ಸೇರಿ ಒಟ್ಟು 59 ಲಕ್ಷ ರೂ. ಮೊತ್ತವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ ಸೂಚಿಸಿದೆ.
ಕೃಷ್ಣ ಜನ್ಮಾಷ್ಟಮಿಯನ್ನು ರಾಜ್ಯಮಟ್ಟದಲ್ಲಿ ಆಚರಣೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ 10 ಲಕ್ಷ ರೂ. ನೀಡುವಂತೆಯೂ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಯಾದವ ಸಂಘದ ಕೋರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಭಗೀರಥ ಜಯಂತಿ : ಕೃಷ್ಣ ಜನ್ಮಾಷ್ಟಮಿಯಂತೆ ಪ್ರಸಕ್ತ ಸಾಲಿನಿಂದ ಭಗೀರಥ ಜಯಂತಿಯನ್ನೂ ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಮತ್ತು ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ 69 ಲಕ್ಷ ರೂ. ಮಂಜೂರು ಮಾಡಲಾಗಿದೆ.












Click it and Unblock the Notifications